ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ (Bhatkal): ಶಿರಾಲಿಯ ಗುರು ನಮನ ಬಳಗದವರಿಂದ ಇಲ್ಲಿಯ ಜನತಾ ವಿದ್ಯಾಲಯದ 8ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ಕೂಲ್ ಬ್ಯಾಗ್ ಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಗುರು ನಮನ ಬಳಗದ ಅಧ್ಯಕ್ಷ ಸಾಹಿತಿ- ಶಿಕ್ಷಕ ಶೀಧರ ಶೇಟ್ ಶಿರಾಲಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ಗಳನ್ನು ವಿತರಿಸಿದರು. ಅವರು ಮಾತನಾಡುತ್ತಾ ನಾವೆಲ್ಲರೂ ತಂದೆ- ತಾಯಿ- ಗುರು ಮತ್ತು ಸಮಾಜದ ಋಣವನ್ನು ತೀರಿಸಬೇಕಿದ್ದು, ಆ ಹಿನ್ನೆಲೆಯಲ್ಲಿ ನಮಗೆ ಇದೇ ಶಾಲೆಯಲ್ಲಿ 35-40 ವರ್ಷಗಳ ಹಿಂದೆ ಕಲಿಸಿದ ಗುರುಗಳ ಗೌರವಾರ್ಥ ಗುರುನಮನ ಬಳಗವನ್ನು ರಚಿಸಿಕೊಂಡು, ಗುರುಗಳಿಗೆ ಗುರುವಂದನೆ ಸಲ್ಲಿಸುವುದರ ಜೊತೆಗೆ ಅವರ ಹೆಸರಿನಲ್ಲಿ ಸೇವಾಕಾರ್ಯಗಳನ್ನು ಹಮ್ಮಿಕೊಳ್ಳುತ್ತಿರುವುದಾಗಿ ತಿಳಿಸಿದರು. ವಿದ್ಯಾರ್ಥಿಗಳು ಮೊಬೈಲ್ ನಿಂದ ದೂರವಿದ್ದು ಉತ್ತಮ ಶಿಕ್ಷಣ ಪಡೆಯಬೇಕು ಎಂದು ಕಿವಿಮಾತು ಹೇಳಿದರು.
ಗುರುನಮನ ಬಳಗದ ಕಾರ್ಯದರ್ಶಿ ಮಂಜುನಾಥ ಕೋಡಿಹಿತ್ತಲು ಪ್ರಾಸ್ತಾವಿಕ ಮಾತನಾಡಿ, ಗುರುನಮನ ಬಳಗ ಬೆಳೆದು ಬಂದ ದಾರಿಯನ್ನು ವಿವರಿಸಿದರು. ಸಂಘಟನಾ ಕಾರ್ಯದರ್ಶಿ ಪ್ರಕಾಶ ಶಿರಾಲಿ ಮಾತನಾಡಿ, ಕನ್ನಡ ಮಾಧ್ಯಮದಲ್ಲಿ ಕಲಿಯುವುದರಿಂದ ವಿದ್ಯಾರ್ಥಿಗಳು ವಿಷಯವನ್ನು ಹೆಚ್ಚು ಅರ್ಥೈಸಿಕೊಳ್ಳಬಹುದು. ಹೀಗಾಗಿ ಜೀವನದಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಜನತಾ ವಿದ್ಯಾಲಯ ಪೂರ್ವ ವಿದ್ಯಾರ್ಥಿಗಳ ಪರಿವಾರದ ಅಧ್ಯಕ್ಷ ಶಂಕರ ನಾಯ್ಕ ಮಾತನಾಡಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡಲು ಎಲ್ಲಾ ರೀತಿಯ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಉಪಾಧ್ಯಕ್ಷ  ಪ್ರಭಾಕರ ನಾಯ್ಕ ಮಾತನಾಡಿ,  ವಿದ್ಯಾರ್ಥಿಗಳಿಗೆ ಉಚಿತ ಸ್ಕೂಲ್ ಬ್ಯಾಗ್ ಗಳನ್ನು ವಿತರಿಸಿದ ಗುರು ನಮನ ಬಳಗದವರ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ನುಡಿದರು. ಸಹಕಾರ್ಯದರ್ಶಿ ಪತ್ರಕರ್ತ ವಿಷ್ಣು ದೇವಡಿಗ ಮಾತನಾಡಿ, ಆಂಗ್ಲ ಭಾಷೆಗಳ ವ್ಯಾಮೋಹದಿಂದಾಗಿ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಪರಿವಾರದ   ಖಜಾಂಚಿ  ರಾಮರಾಯ ಕಾಮತ ಶಾಲೆಯ ಹಿಂದಿನ ದಿನಗಳನ್ನು ಮೆಲುಕು ಹಾಕಿದರು. ಜನತಾ ವಿದ್ಯಾಲಯ ಕಾಲೇಜಿನ ಪ್ರಾಚಾರ್ಯ ಜಿ ಎಸ್  ಹೆಗಡೆ ಮಾತನಾಡಿ,  ಹಳೆ ವಿದ್ಯಾರ್ಥಿಗಳ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು  .ಇದೇ ಸಂದರ್ಭದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿ ರಾಮಕೃಷ್ಣ ಪ್ರಭು ಅವರು ಉಚಿತವಾಗಿ ನೀಡಿದ ಕಂಪಾಸ್ ಬಾಕ್ಸ್ ಗಳನ್ನು ವಿವರಿಸಲಾಯಿತು. ಪರಿವಾರದ  ಕಾರ್ಯದರ್ಶಿ ನಟರಾಜ್ ದೇವಡಿಗ ಕಾರ್ಯಕ್ರಮ ನಿರೂಪಿಸಿದರು.
ಶಿಕ್ಷಕಿ ಲೀಲಾವತಿ ಮೊಗೇರ ಸ್ವಾಗತಿಸಿದರು. ಮುಖ್ಯಾಧ್ಯಾಪಕಿ ಆಶಾ ಭಟ್ ವಂದಿಸಿದರು. ಶಾಲಾ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಮತ್ತು ಪಾಲಕರು ಉಪಸ್ಥಿತರಿದ್ದರು.
ಇದನ್ನು ಓದಿ : ಪೊಲೀಸ್ ದಾಳಿ. ಮುಂಡಳ್ಳಿ ಅರಣ್ಯದಲ್ಲಿ ಎಲೆಮಾನವರ ಬಂಧನ.
	
						
							
			
			
			
			
