ಉಡುಪಿ: ನಡು ರಾತ್ರಿ ರಸ್ತೆಯಲ್ಲಿ ಅತಂಕ ಸೃಷ್ಟಿಸಿದ್ದ ಗ್ಯಾಂಗ್ ವಾರ್ ಅರೋಪಿಗಳು ಜಿಲ್ಲಾ ಕಾರಾಗೃಹದಲ್ಲಿ ಆಟಾಟೋಪ ಮೆರೆದಿದ್ದಾರೆ. ಜಿಲ್ಲಾ ಅಧೀಕ್ಷಕರು, ಸಿಬ್ಬಂದಿಯ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.
ವಿಚಾರಣಾ ಕೈದಿಗಳಾದ ಮುಹಮ್ಮದ್ ಆಶಿಕ್ ಮತ್ತು ಮಹಮ್ಮದ್ ಸಕ್ಲೀನ್ ಕರೆ ಮಾಡಲು ವಿಳಂಭವಾಯಿತೆಂದು ಕರ್ತವ್ಯದಲ್ಲಿದ್ದ ಜೈಲರ್ ಎಸ್.ಎ. ಶಿರೋಳ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಆವಾಜ್ ಹಾಕಿದ್ದಾರೆ. ಕಾರಾಗೃಹದಲ್ಲಿರುವಾಗಲೇ ಖತರ್ ನಾಕ್ ಗ್ಯಾಂಗ್ ಕುರ್ಚಿ ಮತ್ತು ಅಡುಗೆ ಮನೆಯಲ್ಲಿದ್ದ ಚಹಾ ಸೌಟು ಪಾತ್ರೆಗಳಿಂದ ಜಿಲ್ಲಾ ಅಧೀಕ್ಷಕರು, ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿರೋದಾಗಿ ತಿಳಿದು ಬಂದಿದೆ.
ಅಧೀಕ್ಷಕರ ಕಚೇರಿಯಿಂದ ಕರೆದುಕೊಂಡು ಹೋಗುವಾಗ ಸಿಬ್ಬಂದಿಯೊಂದಿಗೆ ಮತ್ತೆ ಗಲಾಟೆ ಆರಂಭಿಸಿ ಸಿಬ್ಬಂದಿಯನ್ನು ದೂಡಿ ಕೊಠಡಿಯಲ್ಲಿದ್ದ ಬೆಂಕಿ ನಂದಿಸುವ ಮಲ್ಲಿ ಯಂತ್ರವನ್ನು ತೆಗೆಯಲು ಪ್ರಯತ್ನಿಸಿದರೆನ್ನಲಾಗಿದೆ.
ಮುಹಮ್ಮದ್ ಸಕ್ಲೀನ್ ತನ್ನ ಕೊಠಡಿಯ ಮರದ ಕುರ್ಚಿಯನ್ನು ತೆಗೆದುಕೊಂಡು ಸಿಬ್ಬಂದಿಗೆ ಹಲ್ಲೆ ಮಾಡಲು ಪ್ರಯತ್ನಿಸಿದ್ದನೆಂದು ಹೇಳಲಾಗುತ್ತಿದೆ..
ಈ ಬಗ್ಗೆ ಜಿಲ್ಲಾ ಕಾರಾಗೃಹ ಅಧೀಕ್ಷಕ ಸಿದ್ದರಾಮ ಬಿ.ಪಾಟೀಲ್ ಹಾಗೂ ಸಿಬ್ಬಂದಿಗೆ ಹಲ್ಲೆ ಮಾಡಲು ಪ್ರಯತಿಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇವರನ್ನು ಬೇರೆ ಸೆಂಟ್ರಲ್ ಜೈಲಿಗೆ ಸ್ಥಳಾಂತರ ಮಾಡುವಂತೆ ಜೈಲು ಅಧೀಕ್ಷಕರು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಅದರಂತೆ ನ್ಯಾಯಾಲಯ ಅನುಮತಿ ನೀಡಿದೆ. ಮುಂದೆ ಇಲಾಖೆ ಸೂಚಿಸುವ ಸೆಂಟ್ರಲ್ ಜೈಲಿಗೆ ಇವರನ್ನು ಸ್ಥಳಾಂತರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.