ಕಾರವಾರ : ತಾಲೂಕಿನ ಅಮದಳ್ಳಿಯ ಶ್ರೀ ವೀರ ಗಣಪತಿ ದೇವಾಲಯದಲ್ಲಿ ರಾತ್ರಿ ಕಳ್ಳತನ ನಡೆದಿದೆ. ದೇವಾಲಯದ ಹಿಂಬಾಗಿಲನ್ನ ಮುರಿದು ಒಳ ನುಗ್ಗಿದ ಕಳ್ಳರು ಹಾಲ್ ನೊಳಗೆ ಬಂದು ಇನ್ನೊಂದು ಬಾಗಿಲು ಮುರಿದು ಬಂದಿದ್ದಾರೆ. ಬಳಿಕ ದೇವಾಲಯದ ಗರ್ಭಗುಡಿಯಲ್ಲಿರುವ ದೇವರ ಪಂಚಲೋಹದ ಆಭರಣಗಳನ್ನ ಕದ್ದು ಪರಾರಿಯಾಗಿದ್ದಾರೆ.
ನಿನ್ನೆ ಸಂಕಷ್ಟಿಯಾಗಿದ್ದರಿಂದ ವೀರಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆದಿತ್ತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಅಲ್ಲದೇ ದೇವರನ್ನ ವಿಶೇಷವಾಗಿದೆ ಚಿನ್ನಭರಣಗಳಿಂದ ಅಲಂಕರಿಸಲಾಗಿತ್ತು. ನಿನ್ನೆಯೇ ಕಳ್ಳರು ಭಕ್ತರ ನೆಪದಲ್ಲಿ ಬಂದು ನೋಡಿ ಹೋಗಿರುವ ಸಾಧ್ಯತೆ ಇದೆ. ರಾತ್ರಿ 9ಗಂಟೆಯ ಪೂಜೆ ಬಳಿಕ ದೇವರಿಗೆ ತೊಡಿಸಿದ ಆಭರಣಗಳನ್ನು ಲಾಕರ್ ನಲ್ಲಿ ಇರಿಸಿದ್ದರಿಂದ ಕಳ್ಳರು ಕೇವಲ ಪಂಚಲೋಹದ ಮುಖಕವಚ ಮಾತ್ರ ಕದ್ದೋಯ್ದಿದ್ದಾರೆ.
ಅನೇಕ ವರ್ಷಗಳ ಇತಿಹಾಸ ಇರುವ ವೀರಗಣಪತಿ ದೇವಾಲಯ ಭಕ್ತರ ಶ್ರದ್ದಾ ಕೇಂದ್ರವಾಗಿದೆ. ರಾಜ್ಯವಲ್ಲದೆ ಬೇರೆಬೇರೆ ರಾಜ್ಯಗಳ ಭಕ್ತರು ಆಗಮಿಸ್ತಾರೆ. ಶಕ್ತಿ ಕೇಂದ್ರವಾಗಿರುವ ದೇವಾಲಯದಲ್ಲಿ ಕಳ್ಳತನವಾಗಿರೋದು ಭಕ್ತರ ಬೆಚ್ಚಿ ಬೀಳುವಂತಾಗಿದೆ.
ದೇವಾಲಯ ಮಾತ್ರವಲ್ಲ, ದೇವಸ್ಥಾನದ ಸ್ವಲ್ಪ ದೂರದಲ್ಲಿರುವ ಮೀರಾ ಕಂತ್ರಿಕರ ಎಂಬುವವರ ಮನೆಯ ಬಾಗಿಲ ಲಾಕ್ ಒಡೆದು ಕಪಾಟಿನಲ್ಲಿದ್ದ ಏಳು ಸಾವಿರ ರೂ ನಗದು ಹಣವನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ.
ಕಾರವಾರ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಶ್ವಾನ ದಳ ಕೂಡ ಪರಿಶೀಲಿಸಿದ್ದು ಕಳ್ಳರನ್ನ ಆದಷ್ಟು ಬೇಗ ಬಂಧಿಸಬೇಕೆಂದು ಭಕ್ತರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.