ಉಡುಪಿ(UDUPI) : ಮಹಿಳೆಯೊಬ್ಬರಿಗೆ ಅವರ ಅಂತಿಮ ಆಸೆಯಂತೆ ತಮ್ಮ ತಂಡದ ಜರ್ಸಿ ತೊಡಿಸುವ ಮೂಲಕ ಸಾಮಾಜಿಕ ಕಾರ್ಯಕರ್ತ ಈಶ್ವರ್ ಮಲ್ಪೆಯವರು ಕೊನೆ ಆಸೆ ಈಡೇರಿಸಿದ್ದಾರೆ.
ಉಡುಪಿಯ ಉದ್ಯಾವರ(UDYAVAR)ದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಪ್ರದೀಪ್ ಹಾಗೂ ಸೋನಿ ದಂಪತಿ ಉಡುಪಿಯ ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಹಾಗೂ ಅನಾಥ ಶವಗಳ ಅಂತಿಮ ಕ್ರಿಯೆಗಳಿಗೆ ತಮ್ಮಿಂದಾಗುವ ಸೇವೆಯನ್ನು ನೀಡುತ್ತಾ ಬಂದಿದ್ದರು.
ಅನಾಥ ಶವಗಳಿಗೆ ಹೆಗಲು ಕೊಡುವುದು ಮಾತ್ರವಲ್ಲದೆ , ಅದರ ಸಂಸ್ಕಾರ ಮಾಡಲು ಬೇಕಾದ ಹೊಂಡವನ್ನು ತೋಡುವುದು, ಅಂತಿಮ ಕ್ರಿಯೆಯಲ್ಲಿ ತೊಡಗುವ ಎಲ್ಲಾ ಕೆಲಸ ಕಾರ್ಯಗಳನ್ನು ಇತರ ಸಮಾಜ ಸೇವಕರೊಂದಿಗೆ ಸೇರಿ ಹಲವು ಅನಾಥ ಶವಗಳ ಮೋಕ್ಷಕ್ಕಾಗಿ ಸೇವೆಯನ್ನು ಸಲ್ಲಿಸಿದ್ದರು.
ಸಮಾಜ ಸೇವೆಯನ್ನೇ ನೆಚ್ಚಿಕೊಂಡು ಸಂತಸದ ಜೀವನವನ್ನು ಸಾಗಿಸುತ್ತಿರುವಾಗ ಸೋನಿ ಅವರು ಅಚಾನಕ್ ಆಗಿ ಅನಾರೋಗ್ಯ ಪೀಡಿತರಾಗಿದ್ದರು. ಕಳೆದ ಕೆಲವು ದಿನಗಳಿಂದ ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಅವರು ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಸಮಾಜ ಸೇವಕಿ ಸೋನಿ ಅವರು ಈಶ್ವರ್ ಮಲ್ಪೆಯವರ ಸಮಾಜಸೇವೆಯ ಬಗ್ಗೆ ಅಪಾರ ಗೌರವ ಅಭಿಮಾನವನ್ನು ಇಟ್ಟಿದ್ದರು. ಅವರು ಯಾವಾಗಲೂ ಹೇಳುತ್ತಿದ್ದ ಮಾತು ಏನೆಂದರೆ , ನನಗೇನಾದರೂ ಹೆಚ್ಚು ಕಡಿಮೆಯಾದರೆ, ನಾನು ಸಾಯುವ ಮೊದಲು ಆಪತ್ಭಾಂಧವ ಈಶ್ವರ ಮಲ್ಪೆ ಮತ್ತು ತಂಡದ ಜೆರ್ಸಿ (ಟಿ ಶರ್ಟ್)ಯನ್ನು ಧರಿಸಿ ಆ ನಂತರ ನಾನು ಸಾಯಬೇಕು ಎನ್ನುವ ಮಹದಾಸೆಯನ್ನು ಹೊಂದಿದ್ದರು.
ಹೀಗಾಗಿ ಈಶ್ವರ್ ಮಲ್ಪೆಯವರು ಗುರುವಾರ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ಮಾಡುತ್ತಿದ್ದ ಸೋನಿಯವರಿಗೆ ತಮ್ಮ ತಂಡದ ಹೊಸ ಜೆರ್ಸಿಯನ್ನು ತೊಡಿಸಿ, ತಮ್ಮ ಕೈಲಾದ ಸಹಾಯವನ್ನು ಮಾಡಿದ್ದಾರೆ. ದುರದೃಷ್ಟವಶಾತ್ ಸ್ವಲ್ಪ ಹೊತ್ತಿನಲ್ಲಿ ಅವರ ದೇಹಾಂತ್ಯವಾಗಿದೆ.
ದೇವರು ಅವರಿಗೆ ಮೋಕ್ಷವನ್ನು ಕರುಣಿಸಲಿ. ಅವರ ಪತಿ ಹಾಗೂ ಕುಟುಂಬಸ್ಥರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಆಪತ್ಭಾಂಧವ ಈಶ್ವರ್ ಮಲ್ಪೆ ತಂಡದವರು ಪ್ರಾರ್ಥಿಸಿದ್ದಾರೆ.
ಇದನ್ನು ಓದಿ : ಮದುವೆಯಾದ ಸ್ವಲ್ಪ ಹೊತ್ತಿನಲ್ಲಿ ವಧುವರರ ಬಡಿದಾಟ.