ಇ ಸಮಾಚಾರ ಡಿಜಿಟಲ್‌ ನ್ಯೂಸ್‌ (esamachara digital news) ಭಟ್ಕಳ(Bhatkal): ಉತ್ತರ ಕನ್ನಡ ಜಿಲ್ಲೆಯ ಭಟ್ಕಳ (Bhatkal)ಪಟ್ಟಣದಲ್ಲಿ ತೀವ್ರ ಪೊಲೀಸ್ ಭದ್ರತೆ ಹಾಗೂ ಸೂಕ್ಷ್ಮ ಕಣ್ಗಾವಲಿನ ನಡುವೆ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನಾ(Ganesh immersion) ಮೆರವಣಿಗೆಯೂ ಭಕ್ತರ ಉತ್ಸಾಹ ಹಾಗೂ ವಿಜೃಂಭಣೆಯಿಂದ ಸಂಪನ್ನಗೊಂಡಿದೆ.

​ಮೂರು ದಿನಗಳ ಹಿಂದೆ ಪಟ್ಟಣದಲ್ಲಿ ನಡೆದಿದ್ದ ಕಲ್ಲು ತೂರಾಟದ ಘಟನೆಯ ಹಿನ್ನೆಲೆಯಲ್ಲಿ, ಯಾವುದೇ ಅಹಿತಕರ ಘಟನೆಗಳು ಮರುಕಳಿಸದಂತೆ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಪಟ್ಟಣದಾದ್ಯಂತ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸಿಸಿಟಿವಿ ಕೆಮರಾಗಳ ಮೂಲಕ ಭದ್ರತೆಯನ್ನು ತೀವ್ರಗೊಳಿಸಲಾಗಿತ್ತು.

​ಶುಕ್ರವಾರ ರಾತ್ರಿ ನಡೆದ ವೈಭವೋಪೇತ ಮೆರವಣಿಗೆಯಲ್ಲಿ ಪಟ್ಟಣದ ಪ್ರಮುಖ ಸಾರ್ವಜನಿಕ ಗಣಪತಿ ಮೂರ್ತಿಗಳು ಪಾಲ್ಗೊಂಡಿದ್ದವು: ಆಟೋ ಚಾಲಕ ಹಾಗೂ ಮಾಲಕರ ಸಂಘದ ಗಣೇಶ, ವಿಶ್ವ ಹಿಂದೂ ಪರಿಷತ್ (VHP) ಗಣೇಶ, ಕೆ.ಎಸ್.ಆರ್.ಟಿ.ಸಿ (KSRTC) ಗಣೇಶ, ಮಣ್ಕುಳಿ ಸಾರ್ವಜನಿಕ ಗಣೇಶ ಮೂರ್ತಿ ಮೆರವಣಿಗೆ ನಡೆಯಿತು.

​ಚೌಥನಿ ಹೊಳೆಯಲ್ಲಿ ಜಲಸ್ತಂಭನ : ಸಾವಿರಾರು ಭಕ್ತರ ಜಯಘೋಷ ಹಾಗೂ ಸಂಭ್ರಮದ ನಡುವೆ ಸಾಗಿದ ಭವ್ಯ ಮೆರವಣಿಗೆಯ ನಂತರ, ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಚೌಥನಿಯ ಹೊಳೆಯಲ್ಲಿ ಸಾಮೂಹಿಕವಾಗಿ ಜಲಸ್ತಂಭನಗೊಳಿಸಲಾಯಿತು. ಪೊಲೀಸರ ಮುನ್ನೆಚ್ಚರಿಕೆ ಕ್ರಮ ಹಾಗೂ ಸೂಕ್ತ ಆಡಳಿತಾತ್ಮಕ ವ್ಯವಸ್ಥೆಯಿಂದಾಗಿ ವಿಸರ್ಜನಾ ಕಾರ್ಯಕ್ರಮವು ಶಾಂತಿಯುತವಾಗಿ ಮುಕ್ತಾಯಗೊಂಡಿದೆ.