ಭಟ್ಕಳ (Bhatkal) : ಭಕ್ತ ಸಾಗರದ ಸಮ್ಮುಖದಲ್ಲಿ ಪುರಾಣ ಪ್ರಸಿದ್ಧ ಅಳ್ವೆಕೋಡಿ  ಶ್ರೀ ದುರ್ಗಾಪರಮೇಶ್ವರಿ (Alvekodi Durgaparameshwari) ಮಾರಿ ಜಾತ್ರಾ (Mari Jatra) ಮಹೋತ್ಸವಕ್ಕೆ  ಜನವರಿ 14ರ ಮಕರ ಸಂಕ್ರಮಣದ(Makara Samkramana) ವಿಶೇಷ ದಿನದಂದು ಚಾಲನೆ ನೀಡಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ್ ವೈದ್ಯ(Mankal Vaidya) ಅವರು ತಮ್ಮ ಕುಟುಂಬದೊಂದಿಗೆ ಆಗಮಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಸಕಲರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿಕೊಂಡರು.

ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಮಾರಿ ಜಾತ್ರೆ (Mari Jathre)  ಈ  ಬಾರಿ ನಡೆಯುತ್ತಿರುವ ಆರನೇ ಜಾತ್ರೆಯಾಗಿದೆ. ಈ ಬಾರಿಯೂ ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ (Alvekodi Durgaparameshwari) ಸನ್ನಿದಾನದಲ್ಲಿ ಭಕ್ತರ ಸಹಕಾರದಿಂದ ಅತಿ ವಿಜೃಂಭಣೆಯಿಂದ ಜಾತ್ರೆ ನಡೆಯುತ್ತಿದೆ.

ಮಂಗಳವಾರ ಬೆಳಿಗ್ಗೆ ಆರು ಗಂಟೆಗೆ ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹವಾಚನ, ನಾಂದಿ ಸಮಾರಾಧನೆ ನಡೆಯಿತು. ಎಂಟು ಗಂಟೆಗೆ ಪೂರ್ಣಕಲಶದೊಂದಿಗೆ ಮಾರಿಕಾಂಬೆಗೆ ಪ್ರಾಣ ಪ್ರತಿಷ್ಠಾಪನೆ, ಮಂಗಳಾಷ್ಟಕ, ವೇದಘೋಷ, ವಾದ್ಯಗಳೊಂದಿಗೆ ಮಹಾಮಂಗಳಾರತಿ ನೆರವೇರಿತು. ನಂತರ ಆಡಳಿತ ಕಮಿಟಿ, ಮಾರಿಜಾತ್ರಾ ಕಮಿಟಿಯವರಿಗೆ ಮಾರಿಕಾಂಬ ದೇವಿಯ(Marikamba Devi) ಪ್ರಸಾದ ವಿತರಿಸಿ ಭಕ್ತಾದಿಗಳಿಗೆ ಸೇವೆ ಪ್ರಾರಂಭಿಸಲಾಯಿತು.

ಮಧ್ಯಾಹ್ನ ಮಾರಿಕಾಂಬಾ ದೇವಿಯ ಸಾನ್ನಿಧ್ಯದಲ್ಲಿ ನೈವೇದ್ಯ ಮತ್ತು ಮಹಾಮಂಗಳಾರತಿ ನಡೆದು ಮಹಾ ಅನ್ನಸಂತರ್ಪಣೆ ಶುರು ಮಾಡಲಾಯಿತು. ತಾಲೂಕು ಜಿಲ್ಲೆ ನೆರೆ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿ ಶ್ರೀ ದೇವಿಗೆ ಸೇವೆ ಸಲ್ಲಿಸಿದರು. ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ರಾಮ ಮೊಗೇರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ.

ಸಂಜೆ 4-30ಕ್ಕೆ ಭಜನಾ ಕಾರ್ಯಕ್ರಮ. ರಾತ್ರಿ 9 ಗಂಟೆಗೆ ಪ್ರಸಿದ್ಧ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸುಂಕದಕಟ್ಟೆ ಇವರಿಂದ ಸಂಪೂರ್ಣ ದೇವಿ ಮಹಾತ್ಮ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ನಿನ್ನೆ ಜ.13ರಂದು ಸೋಮವಾರ ಮಧ್ಯಾಹ್ನ  ಭಕ್ತಾದಿಗಳು ಶ್ರೀ ಕಂಚಿನ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕಾಯಿ, ಹೂ, ಹಣ್ಣು ಬಳೆ, ಸೀರೆ, ಅರಿಸಿನ, ಕುಂಕುಮ ಇತ್ಯಾದಿ ಸುವಾಸಿನಿ ದ್ರವ್ಯಗಳೊಂದಿಗೆ ತೆರಳಿದ್ದರು. ಶ್ರೀ ಕಂಚಿನ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜೆಯನ್ನು ಸಲ್ಲಿಸಿ ಅಲ್ಲಿಂದ ಪ್ರಸಾದವನ್ನು ತೆಗೆದುಕೊಂಡು ಬೈಕ್‌ ರ್ಯಾಲಿಯಲ್ಲಿ ಬರಲಾಯಿತು. ಶಿರಾಲಿ, ಸಾರದೊಳೆ, ಮಾವಿನಕಟ್ಟೆ, ಯಕ್ಷಿಮನೆ, ಸಣಬಾವಿ, ಶ್ರೀರಾಮ ಭಜನಾ ಮಂದಿರಕ್ಕೆ ಬಂದು ಅಲ್ಲಿಂದ ವಾದ್ಯಾದಿಗಳೊಂದಿಗೆ ಕಾಲ್ನಡಿಗೆಯಲ್ಲಿ ಹೊರೆ ಕಾಣಿಕೆಯೊಂದಿಗೆ ದೇವಸ್ಥಾನಕ್ಕೆ ಬರಲಾಯಿತು.

ಹೊರೆ ಕಾಣಿಕೆ ಸ್ವೀಕಾರ ನಂತರ ಮಾರಿಕಾಂಬಾ ಮೂರ್ತಿ ಮತ್ತು ಮಾತಂಗಿ ಮೂರ್ತಿಯನ್ನು ಸಾಯಂಕಾಲ ಏಳು ಘಂಟೆ ಸುಮಾರಿಗೆ ಗದ್ದುಗೆಗೆ ಕರೆದೊಯ್ಯಲಾಯಿತು. ಶ್ರೀ ದೇವಿಯಲ್ಲಿ ದೀಪ ಸ್ಥಾಪನೆ, ಮಾಹಾಪ್ರಾರ್ಥನೆ ಫಲ ಸಮರ್ಪಣೆ, ಅಡುಗೆ ಛತ್ರದಲ್ಲಿ ಒಲೆಗೆ ಅಗ್ನಿ ಪ್ರತಿಷ್ಠಾಪನೆ ಹಾಗೂ ಮಾರಿಕಾಂಬ ಪ್ರತಿಷ್ಠಾಪನಾ ಸ್ಥಾನದಲ್ಲಿ ಗಣಪತಿ ಪೂಜನಾ, ಪುಣ್ಯಾಹವಾಚನ, ಸ್ಥಳ ಶುದ್ಧಿ, ರಾಕ್ಷೆಘ್ನ ಹವನ, ದೀಕ್ಷಾಬಲಿ, ಹೊಸ ಆಭರಣಗಳ ಸಮರ್ಪಣೆ ನಡೆಯಿತು.

ನಾಳೆ ಜ.15ರ ಬುಧವಾರ ಬೆಳಿಗ್ಗೆ ಏಳರಿಂದ ಸುಪ್ರಭಾತ ಪೂಜೆ, ಭಕ್ತಾದಿಗಳಿಂದ ಸೇವೆ ಪ್ರಾರಂಭವಾಗಲಿದೆ. 11-30ಕ್ಕೆ ಮಾರಿಕಾಂಬಾ ದೇವಿಯಲ್ಲಿ ನೈವೇದ್ಯ ಮಹಾಮಂಗಳಾರತಿ ಮತ್ತು ಅನ್ನಸಂತರ್ಪಣೆ ಜರುಗುವುದು. ಸಂಜೆ 5 ಗಂಟೆಗೆ ಶ್ರೀ ಮಾರಿಕಾಂಬಾ ಮೂರ್ತಿ ಮತ್ತು ಶ್ರೀ ಮಾತಾಂಗಿ ಮೂರ್ತಿಯ ವಿಸರ್ಜನಾ ಮೆರವಣಿಗೆ ಪ್ರಾರಂಭವಾಗಲಿದೆ. ಚಂಡೆ, ಗೊಂಬೆ ಕುಣಿತ, ವಿವಿಧ ಸ್ತಬ್ಧ ಚಿತ್ರಗಳೊಂದಿಗೆ ಭವ್ಯ ಮೆರವಣಿಗೆ ನಡೆಯಲಿದೆ. ದಾರಿಯ ಮಧ್ಯ ಗಡಿವೀರ ಸ್ಥಳ, ಮಠದ ಜಟ್ಕ ಸ್ಥಳ, ತಣ್ಣಿರು ಕಟ್ಟೆ, ದೇವಿ ಅಮ್ಮನಮನೆ ಕುಶ್ಚಾಂಡ, ದೊಂದಿ, ಕುಂಕುಮ ಇತ್ಯಾದಿ ನಡೆಯಲಿದೆ.

ರಾತ್ರಿ 9 ಗಂಟೆಗೆ ಕಂಚಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಾರಿ ಮೂರ್ತಿ ಮತ್ತು ಮಾತಾಂಗಿ ಮೂರ್ತಿಗಳಿಗೆ ದೃಷ್ಟಿ, ದೀಪಾಗ್ನಿ ನಡೆಯಲಿದೆ. ನಂತರ ಪೂಜೆ ಪ್ರಸಾದ ಸ್ವೀಕಾರ, ಮಾತಾಂಗಿ ಮೂರ್ತಿಗೆ ಸಮಸ್ತ ಭಜಕರಿಂದ ಬಲಿ ಪೂಜೆ, ಇಡಗಾಯಿ ಒಡೆಯುವುದು ಆದ ನಂತರ ಮಾತಂಗಿ ಮೂರ್ತಿಯನ್ನು ವೆಂಕಟಾಪುರ ನದಿಯಲ್ಲಿ ವಿಸರ್ಜನೆ ಮಾಡಲಾಗುತ್ತದೆ.

ಮೂರ್ತಿಗಳಿಗೆ ದೃಷ್ಟಿ, ದೀಪಾಗ್ನಿ. ನಂತರ ಪೂಜೆ ಪ್ರಸಾದ ಸ್ವೀಕಾರ, ಮಾತಾಂಗಿ ಮೂರ್ತಿಗೆ ಸಮಸ್ತ ಭಜಕರಿಂದ ಬಲಿ ಪೂಜೆ, ಇಡಗಾಯಿ ಒಡೆಯುವುದು ಆದ ನಂತರ ಮಾತಂಗಿ ಮೂರ್ತಿಯನ್ನು ವೆಂಕಟಾಪುರ ನದಿಯಲ್ಲಿ ವಿಸರ್ಜನೆ ಮಾಡಲಾಗುತ್ತದೆ.

ಇದನ್ನು ಓದಿ : ಸಂಸದರ ಮನೆಯ ಬಳಿ ಹೊಂಚು ಹಾಕಿದ ರಣಬೇಟೆಗಾರ.

ತಿರುಪತಿಯ ಲಡ್ಡು ಪ್ರಸಾದ  ಕೌಂಟರ್‌ನಲ್ಲಿ  ಅಗ್ನಿ ಅವಘಡ.

ಬ್ರಿಟಿಷ್ ನೌಕಾ ಪಡೆಯಿಂದ ಮೀನುಗಾರರ ಬಂಧನ.