ಭಟ್ಕಳ :  ಶಿರಾಲಿಯಲ್ಲಿ ಕಳೆದ ಕೆಲ ದಿನಗಳಿಂದ ಅನಾಥರಾಗಿ ಕಾಣಿಸಿಕೊಂಡು ತೊಂದರೆ ಅನುಭವಿಸುತ್ತಿದ್ದ ವ್ಯಕ್ತಿಯೊಬ್ಬರನ್ನ ಗ್ರಾಮ ಪಂಚಾಯತ್ ಸಹಕಾರದೊಂದಿಗೆ ಅನಾಥಶ್ರಮಕ್ಕೆ ಸೇರಿಸಲಾಗಿದೆ.

ಹೆಬಳೆ ಗ್ರಾಮದವರೆನ್ನುವ ಮಾದೇವ ತಿಮ್ಮಯ್ಯ ನಾಯ್ಕ ಎಂಬುವವರು ಕಳೆದ 15 ದಿನಗಳಿಂದ ಶಿರಾಲಿ ಸಮೀಪ ಅಸಹಾಯಕರಂತೆ ಕಂಡು ಬಂದಿದ್ದರು.  ಗ್ರಾಮದಲ್ಲಿ ಚಿಕ್ಕ ಅಂಗಡಿಯಿಟ್ಟುಕೊಂಡಿದ್ದ ಮಂಜುನಾಥ್ ಎಂಬುವವರು ಪ್ರತಿನಿತ್ಯ ಅವರಿಗೆ ಊಟಪಚಾರದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದರು.  ಆದರೂ ಅನಾರೋಗ್ಯವಾದವರಂತೆ ಕಂಡು ಬಂದಿದ್ದರಿಂದ ಚಿತ್ರಾಪುರದ ಪ್ರಭಾಕರ ನಾಯ್ಕ್ ಮತ್ತು ಶಿರಾಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಭಾಸ್ಕರ ದೈಮನೆ,   ಪಿಡಿಓ ರಾಮ ನಾಯ್ಕ ಆಶ್ರಯ ಕಲ್ಪಿಸಲು ಮುಂದಾದರು.

ಸದ್ಯ ಅವರನ್ನ ಸಿದ್ದಾಪುರದ ನಾಗರಾಜ್ ನಾಯ್ಕ ಅವರ ಪುನೀತ್ ರಾಜಕುಮಾರ್ ಅನಾಥಶ್ರಮ ಕ್ಕೆ ಸೇರಿಸಿ  ಆಸರೆ ಒದಗಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ಅನಾಥಶ್ರಮ ನಡೆಸುತ್ತಿರುವ ನಾಗರಾಜ್ ನಾಯ್ಕ ದಂಪತಿಗಳ ಕಾರ್ಯಕ್ಕೆ ಶಿರಾಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಭಾಸ್ಕರ ದೈಮನೆ ಅಭಿನಂದನೆ ಸಲ್ಲಿಸಿದ್ದಾರೆ.

ಮಾದೇವ ನಾಯ್ಕ ಚಿಕ್ಕವರಿರುವಾಗ ಹುಬ್ಬಳ್ಳಿಯಲ್ಲಿ ಹೋಟೆಲ್ ಕೆಲಸಕ್ಕೆ ಹೋಗಿದ್ದರು. ಮದುವೆಯಾಗಿಲ್ಲ. ವಯಸ್ಸಾದ ಮೇಲೆ ಈಗ ಊರು ಸೇರಿಕೊಂಡಿದ್ದು ಇಲ್ಲಿ ಕುಟುಂಬದವರು ಯಾರು ಇಲ್ಲವಾಗಿದೆ. ಹೀಗಾಗಿ ಅನಾಥರಾಗಿದ್ದಾರೆ.