ಜೋಯಿಡಾ : ತಾಲೂಕಿನ ರಾಮನಗರ ಪೊಲೀಸ್ ಠಾಣೆಯ ಮುಂಭಾಗದಲ್ಲಿ   ಯುವಕನೋರ್ವ   ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ  ನಡೆದಿದೆ.

ರಾಮನಗರದ ಹನುಮಾನ್ ಗಲ್ಲಿಯ ನಿವಾಸಿ ಅಂದಾಜು 28 ವರ್ಷದ ಭಾಸ್ಕರ್ ಬೋಂಡೆಲ್ಕರ್ ಎಂಬಾತನೆ ಆತ್ಮಹತ್ಯೆಗೆ ಯತ್ನಿಸಿದ ಯುವಕ.  ಬೆಂಕಿ ಹಚ್ಚಿಕೊಂಡಾತನನ್ನ  ತಕ್ಷಣ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆತ್ಮಹತ್ಯೆಗೆ ಯತ್ನಿಸಿ ಸುಟ್ಟುಕೊಂಡ ಭಾಸ್ಕರ್  ಚಿಕಿತ್ಸೆಗೆ ಸಾಗಿಸುತ್ತಿರುವ ಸಂದರ್ಭದಲ್ಲಿ ತನಗಾದ ನೋವು, ಯಾತನೆಯನ್ನು ವಿವರಿಸಿದ್ದಾನೆ. ಪಿಎಸ್ಐ ಅವರಿಂದ ಆಗಿರುವ ದೌರ್ಜನ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಕಳೆದ ಕೆಲ ತಿಂಗಳ ಹಿಂದೆ ಜೂಜಾಟದ ಪ್ರಕರಣದಲ್ಲಿ 3,60,000 ವಶಪಡಿಸಿಕೊಂಡು ಕೇವಲ 36,000 ರೂ ಮಾತ್ರ ವಶಪಡಿಸಿಕೊಳ್ಳಲಾಗಿದೆ ಎಂದು ಎಪ್.ಐ.ಆರ್ ನಲ್ಲಿ ದಾಖಲಿಸಿರುವುದನ್ನು ಈತ ಪ್ರಶ್ನಿಸಿದ್ದ, ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೂ ತಂದಿದ್ದನಂತೆ. ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಪಿಎಸ್ಐ ಮೇಲಿಂದ ಮೇಲೆ ವಿನಾಕಾರಣ ಕಾಡಿಸುತ್ತಿದ್ದರು ಮತ್ತು ಮಾನಸಿಕ ದೌರ್ಜನ್ಯವನ್ನು ನೀಡುತ್ತಿದ್ದರು ಎಂದು ಭಾಸ್ಕರ್ ಹೇಳಿದ್ದಾನೆ. ಇದರಿಂದಾಗಿ ತಾನು ದಾಂಡೇಲಿಯ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯಲ್ಲಿ ಚಾಲಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದೇನೆ.  ಎರಡು ಮೂರು ದಿನಗಳ ಹಿಂದೆ ರಾಮನಗರಕ್ಕೆ ಹೋಗಿದ್ದ ಸಂದರ್ಭದಲ್ಲಿ ತನ್ನ ಮೇಲೆ ಮತ್ತೆ ಮಾನಸಿಕ ದೌರ್ಜನ್ಯ ಕಿರುಕುಳ ನಡೆದಿದೆ ಎಂದಿದ್ದಾನೆ. ಹಾಗಾಗಿ ಇದನ್ನು ತಡೆಯಲಾರದೆ ಗುರುವಾರ ಸಂಜೆ ರಾಮನಗರ ಪೊಲೀಸ್ ಠಾಣೆ ಮುಂಭಾಗದಲ್ಲಿ ಭಾಸ್ಕರ್ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದೇನೆಂದು ಹೇಳಿದ್ದಾನೆ.

ಈ ಬಗ್ಗೆ ಎಸ್ಪಿ ವಿಷ್ಣುವರ್ಧನ್ ಅವರಲ್ಲಿ ವಿಚಾರಿಸಿದರೆ ಈಗಾಗಲೇ ವ್ಯಕ್ತಿಯ ಮೇಲೆ 107 ಕೇಸ್ ದಾಖಲಾಗಿತ್ತು. ಹೀಗಾಗಿ ಪದೇ ಪದೇ ಠಾಣೆಗೆ ಬಂದು ಗಲಾಟೆ ಮಾಡುತ್ತಿದ್ದ. ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆಂದು ಬೆದರಿಸುತ್ತಿದ್ದ. ಈಗ ತಾನೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದಿದ್ದಾರೆ.