ಇ ಸಮಾಚಾರ ಡಿಜಿಟಲ್‌ ನ್ಯೂಸ್‌ (esamachara digital news) ಬಾಗಲಕೋಟೆ(Bagalkote) : ಅಪ್ಪನ ಸಾವಿನ ಬಳಿಕ ಆಸ್ತಿ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಜಗಳ ನಡೆದು ನ್ಯಾಯಕ್ಕಾಗಿ ಮಕ್ಕಳು ತಂದೆಯ ಮೃತದೇಹದೊಂದಿಗೆ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟಿಸಿದ ಘಟನೆ ನಡೆದಿದೆ.

ಬಾಗಲಕೋಟೆ(Bagalkote) ಜಿಲ್ಲೆಯ ಜಮಖಂಡಿಯ (Jamakhandi) ನಿವಾಸಿ ಯಲ್ಲಪ್ಪ ವಾಗೆನ್ನವರ ಮೃತರಾಗಿದ್ದರು. ತಂದೆಯ ಹೆಸರಿನಲ್ಲಿದ್ದ ಜಮೀನನ್ನು ತಮ್ಮ ಗಮನಕ್ಕೆ ಬಾರದಂತೆ ಬೇರೊಬ್ಬರ ಹೆಸರಿಗೆ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿರುವ ಕುಟುಂಬಸ್ಥರು, ಆಸ್ತಿಯನ್ನು ಸಮಾನವಾಗಿ ಹಂಚಿಕೆ ಮಾಡುವಂತೆ ಒತ್ತಾಯಿಸಿದ್ದಾರೆ.

ಮೃತ ಯಲ್ಲಪ್ಪ ಅವರಿಗೆ ಇಬ್ಬರು ಪತ್ನಿಯರಿದ್ದು, ಎರಡೂ ಕುಟುಂಬಗಳ ಮಕ್ಕಳ ನಡುವೆ ಆಸ್ತಿ ವಿಚಾರವಾಗಿ ಭಿನ್ನಾಭಿಪ್ರಾಯ ಉಂಟಾಗಿತ್ತು ಎನ್ನಲಾಗಿದೆ. ಜಮಖಂಡಿ ಪಟ್ಟಣದ ಹೊರವಲಯದಲ್ಲಿರುವ ಸುಮಾರು 2 ಎಕರೆ 17 ಗುಂಟೆ ಜಮೀನು ವಿವಾದ ನಡೆಯುತಿತ್ತು.

ಈ ಹಿಂದೆ ಯಲ್ಲಪ್ಪ ಅಬರು ತಮ್ಮ ಹೆಸರಿನಲ್ಲಿದ್ದ ಜಮೀನನ್ನು ತೌಸಿಕ್ ಪಾರ್ತಹಳ್ಳಿ ಎಂಬುವರ ಹೆಸರಿಗೆ ವರ್ಗಾವಣೆ ಮಾಡಿರುವ ಆರೋಪ ಕೇಳಿಬಂದಿದೆ. ಸೆಪ್ಟೆಂಬರ್ 5ರಂದು ಜಮೀನಿನ ಖರೀದಿ ಪತ್ರ ಮಾಡಿಕೊಡಲಾಗಿದ್ದು, ಮರುದಿನವೇ ಯಲ್ಲಪ್ಪ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಬೆಳವಣಿಗೆ ಕುಟುಂಬದಲ್ಲಿ ಮತ್ತಷ್ಟು ಅನುಮಾನ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ . ಹೀಗಾಗಿ ತಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಮಕ್ಕಳು ತಹಶೀಲ್ದಾರ್ ಕಚೇರಿ ಮುಂದೆ ಮೃತದೇಹ ಇಟ್ಟು ಪ್ರತಿಭಟಿಸಿದ್ದಾರೆ.