ಹೊನ್ನಾವರ : ಪಕ್ಷಕ್ಕಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ್ದರೂ,  ನಾಯಕರಿಗೆ ಗೋಚರಿಸದೇ ಇರುವ ನೋವು ಜಿಲ್ಲಾ ಹಾಗೂ ತಾಲೂಕು ಮಟ್ಟದ ನಾಯಕರನ್ನ  ಕಾಡುತ್ತಿದೆ. ಹೀಗಾಗಿ ಉತ್ತರಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಒಬ್ಬೊಬ್ಬರೇ ರಾಜೀನಾಮೆ ನೀಡುತ್ತಿದ್ದಾರೆ.

ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್.ತೆಂಗೇರಿ ನೋವಿನಿಂದ ತಮ್ಮ ಅಳಲನ್ನು ತೋಡಿಕೊಂಡು ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ.

ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ಪಕ್ಷದ ಕಾರ್ಯಾಲಯದಲ್ಲಿ ಏರ್ಪಡಿಸಿದ ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿಯವರ 33 ನೇ ಪುಣ್ಯತಿಥಿ ಕಾರ್ಯಕ್ರಮದ ನಂತರ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅಧಿಕಾರವಿಲ್ಲದ ಸಂದರ್ಭದಲ್ಲಿ ಹಗಲು-ರಾತ್ರಿ ಪಕ್ಷ ಸಂಘಟಿಸಿದ್ದ ನಮ್ಮಂತವರಿಗೆ, ಪಕ್ಷ ಅಧಿಕಾರಕ್ಕೆ ಬಂದಾಗ ಮೂಲೆ ಗುಂಪು ಮಾಡುತ್ತಿರುವ ಉದ್ದೇಶ ತಿಳಿಯದಾಗಿದೆ. ಆದರೂ ಕಾಂಗ್ರೆಸ್ ಪಕ್ಷದ ಮೇಲೆ ನನಗೆ ಯಾವುದೇ ನೋವು, ಹತಾಶೆ ಇಲ್ಲ. ಕಾಂಗ್ರೆಸ್ ಪಕ್ಷ ಹೆಮ್ಮರವಾಗಿ ಬೆಳೆದು ದೇಶದ ಆಡಳಿತ ಸೂತ್ರ ಹಿಡಿದು, ದೇಶದ ಎಲ್ಲಾ ಜಾತಿ, ಧರ್ಮದ ಜನ ನೆಮ್ಮದಿಯಿಂದ ಬದುಕುವಂತಾಗಬೇಕು. ಬರಿಗೈಯಿಂದ ಪಕ್ಷಕ್ಕೆ ಬಂದು, ಬರಿಗೈಯಿಂದ ವಾಪಸ್ಸಾಗುತ್ತಿದ್ದೇನೆ.  ಹೊನ್ನಾವರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅರ್ಥಪೂರ್ಣ ರಕ್ತದಾನ ಕಾರ್ಯಕ್ರಮ ನಡೆಸಿ ನನ್ನ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷತೆಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ನೊಂದು ನುಡಿದರು.

ಆದರೆ ಕಾಂಗ್ರೆಸ್ ಪಕ್ಷ ಕಳೆದ ವರ್ಷ ರಾಜ್ಯದಲ್ಲಿ ಅಧಿಕಾರಕ್ಕೆರಿದ ನಂತರ ನಮ್ಮ ಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಮಾಧಾನದಿಂದ ಇಲ್ಲಾ ಅನ್ನುವುದು ನನ್ನ ಅಭಿಪ್ರಾಯ. ನಾವು ಪಕ್ಷದ ಸಂಘಟನೆಯನ್ನು ಪ್ರೀತಿಸುವವರು. ಅಧಿಕಾರ ಸ್ಥಾನ ಮಾನವನ್ನು ನಾನು ಯುವ ಕಾಂಗ್ರೆಸ್‌ನಲ್ಲಿ ಕಾರ್ಯನಿರ್ವಹಿಸುವಾಗ ಚಿಕ್ಕಪುಟ್ಟ ಸ್ಥಾನಮಾನ ಕೇಳಿದಾಗ ನೀನಿನ್ನೂ ಚಿಕ್ಕವ, ಮುಂದೆ ತುಂಬಾ ಭವಿಷ್ಯ ಇದೆ ಅನ್ನುತ್ತಿದ್ದರು. ಈಗ ಬಹಳಷ್ಟು ಕಾಲ ಕಳೆದಿದೆ. ನೋಡ ನೋಡುತ್ತಾ ನಮ್ಮ ವಯಸ್ಸು ಕಳೆದು ಮುದುಕರಾಗುತ್ತಿದ್ದೇವೆ. ನಾವು ಪಕ್ಷದಲ್ಲಿ ಸೂಕ್ತ ಸ್ಥಾನ ಮಾನ ಅಪೇಕ್ಷಿಸಿದರೇ, ಪ್ರಭಲ ಜಾತಿಗಳಿಗೆ ಪ್ರಥಮ ಆದ್ಯತೆ ನೀಡುವುದರಿಂದ ಪಕ್ಷಕ್ಕೆ ಅನುಕೂಲವಾಗಲಿದ್ದೂ, ನಿಮ್ಮದು ಚಿಕ್ಕ ಸಮಾಜ ಅನ್ನುವ ಉಡಾಫೆ ಮಾತು ಕೆಲ ನಾಯಕರ ಬಾಯಿಂದ ಕೇಳಿ ಬರುತ್ತಿದೆ. ಅಂದರೆ ಕೆಲಸಕ್ಕೆ ನಾವು, ಅಧಿಕಾರಕ್ಕೆ ಇನ್ನೊಬ್ಬರು ಅನ್ನುವ ತತ್ವ ಇದರಲ್ಲಿ ಅಡಗಿದಂತಿದೆ. ಪಕ್ಷಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿ, ಜೀವನದುದ್ದಕ್ಕೂ ತನು-ಮನ-ಧನ ಸಮರ್ಪಿಸಿ, ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯವನ್ನು ಸ್ವಂತ ಖರ್ಚಿನಲ್ಲಿ ನಿರ್ವಹಿಸಿ, ಬಾಡಿಗೆ ಮನೆಯಲ್ಲಿ ಬದುಕುವ ನಮ್ಮಂತವರಿಗೂ ಜಾತಿ ಮಾನದಂಡ ಮಾಡುವುದು ಸರಿಯೇ ? ನಿಜಾ ಹೇಳಬೇಕೆಂದರೆ ಹೊನ್ನಾವರ ಪಟ್ಟಣದಲ್ಲಿ ನನ್ನ ಸಮಾಜದ ಬೆರೆಳೆಣಿಕೆಯಷ್ಟು ಮನೆಯಿದ್ದರೂ, ಯಾರಿಗೂ ನನ್ನ ಜಾತಿ ಯಾವುದೆಂದು ಇದುವರೆಗೂ ತಿಳಿದಿಲ್ಲ. ನಮ್ಮ ಮಾನವೀಯ ಅಂತಃಕರಣದ ನೆರಳಲ್ಲಿ ಹೊನ್ನಾವರವೆಂಬ ನಗರದಲ್ಲಿ ಪಕ್ಷಾತೀತವಾಗಿ ನನ್ನನ್ನು ವೈಯಕ್ತಿಕವಾಗಿ ಪ್ರೀತಿಸುತ್ತಾರೆ. ಇದು ನನ್ನ ಮೇಲೆ ಜನ ಇಟ್ಟಿರುವ ವಿಶ್ವಾಸ ಎಂದು ಭಾವಿಸಿದ್ದೇನೆ. ಅದಕ್ಕೆ ನಾನು ಹೊನ್ನಾವರ ಜನತೆಗೆ ಚಿರಋಣಿಯಾಗಿದ್ದೇನೆ.


ಕಳೆದ ಕೆಲವು ತಿಂಗಳ ಹಿಂದೆ ಯಾವುದಾದರೂ ಸರಕಾರಿ ನಾಮನಿರ್ದೆಶನಕ್ಕೆ ಅರ್ಜಿ ಸಲ್ಲಿಸುವಂತೆ ಪಕ್ಷ ನನಗೆ ಸೂಚಿಸಿತ್ತು. ಅದರಂತೆ ನಾನು ಪಕ್ಷದ ಹಿರಿಯ ಮುಖಂಡರೊಬ್ಬರ ಹೆಸರನ್ನು ರಾಜ್ಯ ಸಮಿತಿಗೆ ಮತ್ತು ನನ್ನ ಹೆಸರನ್ನು ಜಿಲ್ಲಾ ಕೆ.ಡಿ.ಪಿ. ಸದಸ್ಯತ್ವಕ್ಕೆ ವಿನಂತಿಸಿದ್ದೆ. ಯಾವುದೇ ವಿಶೇಷ ಸೌಲತ್ತು ಇರದ ಈ ಸಮಿತಿಯಲ್ಲಿ ಸೇರಿದರೇ, ಪಕ್ಷದ ಶಾಸಕರಿಲ್ಲದ ನಮ್ಮ ಭಾಗದಲ್ಲಿ ಕಾರ್ಯಕರ್ತರ ಸಮಸ್ಯೆಯನ್ನು ಮೂರು ತಿಂಗಳಿಗೊಮ್ಮೆ ನಡೆಯುವ ತ್ರೈಮಾಸಿಕ ಸಭೆಯಲ್ಲಿ ಅಧಿಕಾರಸ್ಥರ ಗಮನ ಸೆಳೆಯಬಹುದು ಅನ್ನುವುದು ನನ್ನ ಉದ್ದೇಶವಾಗಿತ್ತು. ಆದರೆ ಪಕ್ಷಕ್ಕಾಗಿ 40ವರ್ಷ ದುಡಿದ ನನ್ನ ಹೆಸರನ್ನು ಕೈ ಬಿಟ್ಟು, ನಮ್ಮ ಭಾಗದಲ್ಲಿ ಪಕ್ಷದ ಪ್ರಾಥಮಿಕ ಸದಸ್ಯರಲ್ಲದವರನ್ನು ಕೆ.ಡಿ.ಪಿ. ಸದಸ್ಯರನ್ನಾಗಿ ಮಾಡಿರುವುದು ಸರಿಯೇ ? ನನಗಿಂತ ಹಿರಿಯರಾದವರನ್ನು ನೇಮಿಸಿದ್ದರೇ ನನ್ನ ಯಾವ ಅಭ್ಯಂತರವು ಇರಲಿಲ್ಲ. ಪಕ್ಷದ ಬ್ಲಾಕ್ ಅಧ್ಯಕ್ಷನಾದ ನನ್ನ ಹೆಸರಿದ್ದು, ಇನ್ನೊಬ್ಬರ ನೇಮಕ ಮಾಡುವಾಗ ಕನಿಷ್ಠ ಸೌಜನ್ಯಕ್ಕೂ ನನ್ನ ಬಳಿ ಯಾರೂ ಚರ್ಚಿಸಿಲ್ಲ. ನಾನು ಹಲವಾರು ಬಾರಿ ಪಕ್ಷದ ವೇದಿಕೆಯಲ್ಲಿ ಸ್ಪಷ್ಟಪಡಿಸಿದ್ದೆ.ನನಗೆ ಯಾವುದೇ ಹುದ್ದೆಯ ಮೇಲೆ ಆಸೆ ಇಲ್ಲ. ಆದರೆ ನನ್ನ ಜೊತೆ ಪಕ್ಷ ಕಟ್ಟುವಲ್ಲಿ ಕೈ ಜೋಡಿಸಿದ ಕಾರ್ಯಕರ್ತರಿಗೆ   ಅನ್ಯಾಯವಾಗಬಾರದು ಅಂತಾ ಹಲವಾರು ಬಾರಿ ಹೇಳಿದ್ದೆ. ಆದರೂ ಪಕ್ಷದ ಬ್ಲಾಕ್ ಅಧ್ಯಕ್ಷನಾದ ನನ್ನ ಗಮನಕ್ಕೆ ತಾರದೇ, ಚರ್ಚಿಸದೆ ಎಲ್ಲವನ್ನೂ ನಡೆಸಲಾಗುತ್ತಿದೆ. ಇದರಿಂದ ತುಂಬಾ ನೋವು ಅನುಭವಿಸಿದ ನಾನು ಇತ್ತೀಚೆಗೆ ನಡೆದ ಪಕ್ಷದ ಸಭೆಯಲ್ಲಿ, ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ಈ ಎಲ್ಲಾ ಬೆಳವಣಿಗೆಯ ಕುರಿತಂತೆ ಸವಿಸ್ತಾರವಾಗಿ ವಿವರಿಸಿ, ಮುಂದಿನ ದಿನದಲ್ಲಿ ಸರಕಾರದ ಯಾವುದೇ ಲಾಭದಾಯಕ ಹುದ್ದೆ,ಸ್ಥಾನ,ಮಾನ, ನಾಮನಿರ್ದೆಶನ ಸ್ವೀಕರಿಸುವುದಿಲ್ಲ ಎಂದು ಪ್ರಮಾಣ ಮಾಡಿದ್ದೇನೆ. ಪಕ್ಷದ ಸಂಘಟನಾತ್ಮಕ ಹುದ್ದೆಯಲ್ಲಿ ಜೀವದ ಕೊನೆ ಉಸಿರಿರುವವರೆಗೂ ಪದಾಧಿಕಾರಿಯಾಗಿ ದುಡಿಯುವ ವಾಗ್ದಾನ ಮಾಡಿದ್ದೇನೆ ಎಂದರು. ಪಕ್ಷ ಸಂಘಟಿಸಲು ಸಹಕಾರ ನೀಡಿದ ಜಿಲ್ಲೆಯ ಮತ್ತು ನನ್ನ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಪ್ರತಿಯೊಬ್ಬ ಕಾರ್ಯಕರ್ತರಿಗೆ, ಪಕ್ಷದ ಅಭಿಮಾನಿಗಳಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಉಪಾಧ್ಯಕ್ಷ ದಾಮೋದರ ನಾಯ್ಕ,ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಬಾಲಚಂದ್ರ ನಾಯ್ಕ, ಬ್ಲಾಕ್ ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷ ಕುಪ್ಪು ಗೌಡ,ಬ್ಲಾಕ್ ಪರಿಶಿಷ್ಠ ಜಾತಿ ವಿಭಾಗದ ಅಧ್ಯಕ್ಷ ಕೃಷ್ಣ ಹರಿಜನ,ಬ್ಲಾಕ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಜಕ್ರಿಯ್ಯಾ ಶೇಖ, ಇಂಟೆಕ್ ಜಿಲ್ಲಾ ಕಾರ್ಯದರ್ಶಿ ಕೇಶವ ಮೇಸ್ತ,ಸಾಮಾಜಿಕ ಜಾಲತಾಣದ ಬ್ಲಾಕ್ ಅಧ್ಯಕ್ಷ ರಾಮಕೃಷ್ಣ ನಾಯ್ಕ, ನಗರ ಘಟಕದ ಅಧ್ಯಕ್ಷ ಚಂದ್ರಶೇಖರ ಚಾರೋಡಿ, ಬ್ಲಾಕ ಕಾರ್ಯದರ್ಶಿ ಶ್ರೀಕಾಂತ ಮೆಸ್ತ, ಮೀನುಗಾರ ಮುಖಂಡ ಸುರೇಶ ರುಕ್ಕು ಮೇಸ್ತ, ವಸಿಂ ಸಾಬ್,ಬಿಸಿಸಿ ಕಾರ್ಯದರ್ಶಿ ಜ್ಯೋತಿ ಮಹಾಲೆ,ಮಾಜಿ ಪಟ್ಟಣ ಪಂಚಾಯತ್ ಸದಸ್ಯೆ ಸುಧಾ ನಾಯ್ಕ,ಸಂತೋಷ ಮೇಸ್ತ,ಗಣೇಶ ಆಚಾರಿ, ಮಂಜು ಮುಕ್ರಿ,ಲರ‍್ಸನ್ ರೊಡ್ರಗಿಸ್, ವಾಸುದೇವ ಪುಲ್ಕರ್  ಇನ್ನೂ ಹಲವಾರು ಮುಖಂಡರು ಉಪಸ್ಥಿತರಿದ್ದರು.