ಸಿದ್ದಾಪುರ : ತಾಲೂಕಿನ ಕಳೂರಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ನವಜಾತ ಶಿಶುವಿನ ತಂದೆ ಹಾಗೂ ತಾಯಿ ಪತ್ತೆ ಹಚ್ಚಿ ನೋಂದವರಿಗೆ ನ್ಯಾಯ ನೀಡುವಂತೆ ಉತ್ತರಕನ್ನಡ ಜಿಲ್ಲಾ ರೈತ ಸಂಘದ ಆಗ್ರಹಿಸಿದೆ.
ಕಾರವಾರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮತ್ತು ಜಿಲ್ಲಾಧಿಕಾರಿ ಅವರನ್ನ ಭೇಟಿ ಮಾಡಿದ ಸಂಘದ ಕಾರ್ಯಕರ್ತರು ತನಿಖೆಗೆ ಆಗ್ರಹಿಸಿದ್ದಾರೆ. ಸಿದ್ದಾಪುರ ತಾಲೂಕಿನ ಗೊಳಿಕ್ಕೆ ಗ್ರಾಮದ ಕಳೂರಿನ ಬೈರಾ ರಾಮ ನಾಯ್ಕ ಇವರ ಮನೆಯ ಹಿಂಭಾಗದಲ್ಲಿ ಕೆಲ ದಿನಗಳ ಹಿಂದೆ ಸುಮಾರು ಐದಾರು ತಿಂಗಳ ನವಜಾತ ಶಿಶುವಿನ ಮೃತ ದೇಹ ಪತ್ತೆಯಾಗಿತ್ತು. ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕಂಪ್ಲೇಂಟ್ ನೀಡಿದಂತೆ ಸಿದ್ದಾಪುರ ಠಾಣೆಯ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದರು.
ಆದರೆ ಪ್ರಕರಣ ದಾಖಲಾಗಿ ಎರಡು ತಿಂಗಳಾದರು ಈವರೆಗೂ ಆರೋಪಿತರ ಪತ್ತೆಯಾಗಿಲ್ಲ. ಇಲಾಖೆಯಲ್ಲಿರುವ ಯಾರೊಬ್ಬ ವ್ಯಕ್ತಿ ಈ ಪ್ರಕರಣದಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಸಂಶಯಿಸಿದ ಕಾರ್ಯಕರ್ತರು ನೊಂದವರಿಗೆ ನ್ಯಾಯ ಒದಗಿಸಿಕೊಡುವಂತೆ ಒತ್ತಾಯಿಸಿದ್ದಾರೆ.
ಅಮಾಯಕವಾದ ಮಗುವಿನ ಅಬಾರ್ಷನ್ ಗೆ ಕಾರಣರಾದ ಆ ಕಟುಕ ಹೃದಯದ ವ್ಯಕ್ತಿ ಯಾರು? ಈ ಪ್ರಕರಣ ಮುಚ್ಚಿ ಹಾಕುವಲ್ಲಿ ಇಲಾಖೆಯ ಅಥವಾ ಇತರೆ ಯಾವುದೇ ರಾಜಕೀಯ ವ್ಯಕ್ತಿಗಳ ಒತ್ತಡವಿದೆಯೇ ಎಂಬ ಕುರಿತು ಸೂಕ್ತ ತನಿಖೆ ನಡೆಸಬೇಕು. ಈ ಪ್ರಕರಣವನ್ನು ಉನ್ನತ ಮಟ್ಟದ ಅಧಿಕಾರಿಗಳು ತನಿಖೆಗೆ ತೆಗೆದುಕೊಂಡು ನೊಂದವರಿಗೆ ಸೂಕ್ತ ನ್ಯಾಯ ಒದಗಿಸುವಂತೆ ಎಸ್ಪಿ ಅವರನ್ನ ಒತ್ತಾಯಿಸಿದ್ದಾರೆ.
ಇಲಾಖೆಯಲ್ಲಿರುವ ವ್ಯಕಿಯೋರ್ವನ ಮದುವೆ ದಿನದಂದೆ ಈ ರೀತಿ ಬ್ರೂಣ ಪತ್ತೆಯಾಗಿರೋದು ಸಂಶಯ ಹುಟ್ಟಿಸುತ್ತಿದೆ. ಹೀಗಾಗಿ ತನಿಖೆ ಮಾಡಿ ಎಂದು ಸಿದ್ದಾಪುರದ ನಾಗರಿಕರು ಒತ್ತಾಯಿಸಿದ್ದಾರೆ. ಇಲ್ಲದಿದ್ದಲ್ಲಿ ಈ ಬಗ್ಗೆ ಪ್ರತಿಭಟನೆ ನಡೆಸುತ್ತೇವೆಂದು ರೈತ ಸಂಘ ಎಚ್ಚರಿಸಿದೆ.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಕೇರಿಯಪ್ಪ ನಾಯ್ಕ್, ಮಾಧ್ಯಮ ವಕ್ತಾರ ಇಲಿಯಾಸ್ ಸಾಬ್, ಮಂಜುನಾಥ ನಾಯ್ಕ್, ವಿ ಜಿ ನಾಯ್ಕ್, ಎಸ್ ಎಪ್ ನಾಯ್ಕ್, ಚಂದ್ರಹಾಸ್ ಹೂವಿನ್ಮನೆ, ರಾಜೇಂದ್ರ ನಾಯ್ಕ್, ಸತ್ಯವತಿ ಸೇರಿದಂತೆ ಇತರರು ಹಾಜರಿದ್ದರು.