ಶಿರಸಿ : ಹಲವು ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ಅರೋಪಿಯೋರ್ವ ಬಂಧನ ವೇಳೆ ಕಲ್ಲು ತೂರಾಟ ಮಾಡಿ,  ಪೊಲೀಸರ ಮೇಲೆ ಹಲ್ಲೆ ಮಾಡಿದ ಘಟನೆ ಶಿರಸಿ ತಾಲೂಕಿನ ಮಳಲಿಯಲ್ಲಿ ತಡವಾಗಿ ಗೊತ್ತಾಗಿದೆ.

ಅರ್ಜುನ್ ಅಲಿಯಾಸ್ ಅರುಣ ಲಕ್ಷ್ಮಣ ಗೌಡ (27) ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಅರುಣ್ ವಿರುದ್ಧ ಬನವಾಸಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ  ದಾಖಲಾಗಿತ್ತು ಅಲ್ಲದೇ, ಐಟಿ ಆ್ಯಕ್ಟ್‌ನಡಿ ಶಿರಸಿ ಠಾಣೆಯಲ್ಲಿ ಮತ್ತು ಕುಂದಾಪುರದಲ್ಲೂ ಸಹ ಪ್ರಕರಣ ದಾಖಲಾಗಿದೆ.

ಅರುಣ್ ಯುವತಿಯರ ಜತೆ ಚಾಟ್ ಮಾಡಿ ಅವರನ್ನ ಯಾಮಾರಿಸಿ ಫೋಟೋ ತೆಗೆದು ಅಶ್ಲೀಲವಾಗಿ ಎಡಿಟ್ ಮಾಡುವ ಖಯಾಲಿ ಹೊಂದಿದ್ದಾನೆ. ಸಾಮಾಜಿಕ ಜಾಲ ತಾಣಗಳಲ್ಲಿ ಹಾಕುವುದಾಗಿ ಬ್ಲ್ಯಾಕ್ ಮೇಲ್ ಮಾಡಿ ಯುವತಿಯರನ್ನು ಶೋಷಿಸುತ್ತಿದ್ದ ಎನ್ನಲಾಗಿದೆ.

ಪೊಲೀಸರು ಆರೋಪಿಯನ್ನು ಹಿಡಿಯಲು ಹೋದಾಗ ಈತನ ಜೊತೆಗೆ ಸಂಬಂಧಿಕರು ಸಹ ಕಲ್ಲು ತೂರಾಟ ಮಾಡಿದ್ದಾರೆ. ಘಟನೆಯಲ್ಲಿ ತಾಯಿ ನಾಗವೇಣಿ ಲಕ್ಷ್ಮಣ ಗೌಡ (50) ಹಾಗೂ ಸಂಬಂಧಿ ಬಾಲಚಂದ್ರ ಗೌಡ (42) ಎಂಬವರು ಕಲ್ಲು ತೂರಾಟ ನಡೆಸಿದ್ದಾರೆ.

ಘಟನೆಯಲ್ಲಿ ಬನವಾಸಿ ಪೊಲೀಸ್ ಠಾಣೆಯ ಜಗದೀಶ ಕೆ., ಮಂಜಪ್ಪ ಪಿ., ಮಂಜುನಾಥ ಡಿ. ನಡುವಿನಮನೆ ಎಂಬವರಿಗೆ ಗಾಯವಾಗಿದೆ. ಕೊನೆಗೆ ಆರೋಪಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಸದ್ಯ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ  ಆರೋಪಿ  ಅರುಣ್ ಗೌಡ ಚಿಕಿತ್ಸೆ ಪಡೆಯುತ್ತಿದ್ದಾನೆ.

ಕಲ್ಲು ತೂರಾಟ ಮಾಡಿದ ಪ್ರಕರಣದಲ್ಲಿ ಸಂಭಂದಿ ಬಾಲಚಂದ್ರ ಗೌಡನನ್ನ ಪೊಲೀಸರು ಬಂಧಿಸಿದ್ದಾರೆ. ತಾಯಿ ನಾಗವೇಣಿ ಲಕ್ಷ್ಮಣಗೌಡ ಪರಾರಿಯಾಗಿದ್ದಾಳೆ. ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ಪ್ರತಾಪ ಪಚ್ಚಪ್ಪಗೋಳ  ತನಿಖೆ ನಡೆಸಿದ್ದಾರೆ.