ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ದಾಂಡೇಲಿ(Dandeli): ನಗರದ ಜೆ.ಎನ್. ರಸ್ತೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ದಾಂಡೇಲಿ(Dandeli) ನಗರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ(Judicial Custody) ವಿಧಿಸಿದೆ.

ಅಶೋಕ ದೇಮಣ್ಣ ಗುರವ, ಪೈರೋಜ್ ಅಬ್ದುಲ್ ಸತ್ತಾರ್ ದವಲತ್ತಿ ಹಾಗೂ ಅಕ್ಷರ ಫಕ್ರುದ್ದೀನ್ ನರಗುಂದ ಬಂಧಿತರಾಗಿದ್ದಾರೆ. ಮೂವರು ಮಾರುತಿ ನಗರ, ದಾಂಡೇಲಿ ನಿವಾಸಿಗಳಾಗಿದ್ದಾರೆ.

ಜುಲೈ 27ರಂದು ಸಂಜೆ 6.15ರ ಸುಮಾರಿಗೆ ಮೂವರು ಒಟ್ಟಾಗಿ ಬಂದು ಹನುಮಾನ್ ಬಾರ್‌ನಲ್ಲಿ ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಜಾತಿ ನಿಂದನೆ ನಡೆಸಿ, ಕೊಲೆ ಮಾಡುವ ಉದ್ದೇಶದಿಂದ ಕೋಯಿತಾ (ಕುಡಗೋಲು) ಹಾಗೂ ಕಬ್ಬಿಣದ ರಾಡ್‌ನಂತಹ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿತ್ತು. ಈ ಸಂಬಂಧ ದಾಂಡೇಲಿ(Dandeli) ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಮೇಲಾಧಿಕಾರಿಗಳ ಮಾರ್ಗದರ್ಶನದಂತೆ ವಿಶೇಷ ಪತ್ತೆ ತಂಡವನ್ನು(Special Investigation Team) ರಚಿಸಿ, ಖಚಿತ ಮಾಹಿತಿಯ ಆಧಾರದ ಮೇಲೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಕೋಯಿತಾ (ಕುಡಗೋಲು), ಕಬ್ಬಿಣದ ರಾಡ್ ಹಾಗೂ ಒಂದು ಸ್ಕೂಟಿಯನ್ನು ಜಪ್ತಿ ಮಾಡಲಾಗಿದೆ.

ಬಂಧಿತ ಆರೋಪಿಗಳನ್ನು ದಸ್ತಗಿರಿ ನಿಯಮಾನುಸಾರ ಕ್ರಮ ಕೈಗೊಂಡು ಸೂಕ್ತ ರಿಮಾಂಡ್‌ನೊಂದಿಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ., ಡಿವೈಎಸ್‌ಪಿಗಳಾದ ಶಿವಾನಂದ ಮದರಕಂಡಿ ಹಾಗೂ ಸಿಪಿಐ ಶಿವಾನಂದ ಅಂಬಿಗೇರ ಮಾರ್ಗದರ್ಶನದಲ್ಲಿ ದಾಂಡೇಲಿ ನಗರ ಪೊಲೀಸ್ ಠಾಣೆಯ ಪಿಎಸ್‌ಐಗಳಾದ ಅಮೀನ್ ಎಂ. ಅತ್ತಾರ್ ಮತ್ತು ಕಿರಣ್ ಬಿ. ಪಾಟೀಲ್, ಎಎಸ್‌ಐಗಳಾದ ರಾಜಪ್ಪ ದೊಡಮನಿ ಹಾಗೂ ನಜೀರ್ ಹಳಿಯಾಳಕರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಕೃಷ್ಣಪ್ಪ ಬೆಳವರಿ, ಸುನೀಲ್ ಲುಗಾಡೆ, ಬಸವರಾಜ ತೇಲಸಂಗ್, ರಮೇಶ್ ನಿಂಬರಗಿ, ಪ್ರಸನ್ನಕುಮಾರ್ ಜಿ.ಎನ್., ಕುಮಾರ ಹರಿಜನ, ಲೋಕೇಶ್ ದೇವರೆಡ್ಡಿ, ಚಂದ್ರಶೇಖರ ಪಾಟೀಲ್, ಉಮೇಶ್ ಹನಗಂಡಿ ಪೊಲೀಸ್ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದರು.

ಪ್ರಕರಣದ ಆರೋಪಿಗಳನ್ನು ಅಲ್ಪಾವಧಿಯಲ್ಲೇ ಪತ್ತೆಹಚ್ಚಿ ಬಂಧಿಸುವಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ಇಲಾಖೆ ಅಭಿನಂದಿಸಿದೆ.