ಬೆಂಗಳೂರು : ನೀವೇನಾದ್ರು ಯಾರಿಗಾದ್ರು ಡುಮ್ಮ, ಡುಮ್ಮಿ ಅಂತಾ ಕರೀತಿದ್ರೆ ಇವತ್ತಿಂದ ಕರೆಯೋದನ್ನ ಬಿಟ್ಬಿಡಿ. ಯಾಕಂದ್ರೆ ರಾಜಧಾನಿ ಬೆಂಗಳೂರಲ್ಲಿ ಆಗಬಾರದ ಘಟನೆಯೊಂದು ನಡೆದಿದೆ.
ಪತಿ ಹೀಯಾಳಿಸಿದರೆಂದು ಬೇಸತ್ತು ಪತ್ನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಂಜುನಾಥ ನಗರದಲ್ಲಿ ನಿವಾಸಿ 31 ವರ್ಷದ ಸಂಧ್ಯಾ ಎಂಬಾಕೆ ಮೃತ ಮಹಿಳೆಯಾಗಿದ್ದಾಳೆ. ಖಾಸಗಿ ಪ್ರೌಢ ಶಾಲೆ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಂಧ್ಯಾಳಿಗೆ ಗಂಡ ಡುಮ್ಮಿ ಎಂದು ಕರೆಯುತ್ತಿದ್ದಾನಂತೆ. ಹೀಗಾಗಿ ನೊಂದು ತನ್ನ ಪ್ರಾಣ ಕಳೆದುಕೊಂಡಿದ್ದಾಳೆ.
ಜಯಪ್ರಕಾಶ್ ಮತ್ತು ಸಂದ್ಯಾ ದಂಪತಿಗೆ ನಾಲ್ಕು ವರ್ಷದ ಗಂಡು ಮಗುವಿದೆ. ಮಗುವಿಗೆ ತೀವ್ರ ಅನಾರೋಗ್ಯ ಸಮಸ್ಯೆ ಉಂಟಾಗಿತ್ತು. ಸಾಕಷ್ಟು ಹಣವನ್ನು ಮಗನ ಚಿಕಿತ್ಸೆಗಾಗಿ ಖರ್ಚು ಮಾಡಿದ್ದರು. ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾಗ ಸಂಧ್ಯಾ ಅವರಿಗೆ ಗರ್ಭಪಾತವಾಯಿತು. ಬಳಿಕ ಆಕೆಯ ಆರೋಗ್ಯದ ಮೇಲೆ ಪರಿಣಾಮ ಬೀರಿತ್ತು. ದಪ್ಪವಾಗಿದ್ದರಿಂದ ಗಂಡ ಮತ್ತು ಹೆಂಡತಿ ನಡುವೆ ಸಣ್ಣಪುಟ್ಟ ವಿಚಾರಗಳಿಗೆ ಜಗಳ ಶುರುವಾಗಿತ್ತು. ಪದೇ ಪದೇ ಗಂಡ ಪತ್ನಿಗೆ ಡುಮ್ಮಿ ಎಂದು ಹೀಯಾಳಿಸುತ್ತಿದ್ದನಂತೆ. ಹೀಗಾಗಿ ಸಂಧ್ಯಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಆಸ್ಪತ್ರೆಗೆ ಕುಟುಂಬದವರು ಕರೆದೊಯ್ದು ಚಿಕಿತ್ಸೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.