ಭಟ್ಕಳ: ಕೋಕ್ತಿ ಕೆರೆಗೆ ರಕ್ತ ಮಿಶ್ರಿತ ನೀರು ಹರಿದು ಬರುತ್ತಿರುವುದಕ್ಕೆ ಸ್ಥಳೀಯರು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಕೆರೆಯ ಸಮೀಪ ಇರುವ ಬಂದರ್ ರೋಡ್ 2ನೇ ಕ್ರಾಸ್, ಕೋಕ್ತಿನಗರದ ಮನೆಗಳಲ್ಲಿ ಪ್ರಾಣಿ ವಧೆ ನಡೆಸಿ ರಕ್ತವನ್ನು ಚರಂಡಿಯ ಮೂಲಕ ಕೆರೆಗೆ ಬಿಡುತ್ತಿದ್ದರು. ಇದನ್ನ ಗಮನಿಸಿದ ನಾಗರಿಕರು ಸಂಬಂಧಪಟ್ಟ ಪುರಸಭೆಗೆ ವಿಷಯ ತಿಳಿಸಿದ್ದಾರೆ.
ಬಂದರ ರಸ್ತೆ, ಕೋಕ್ತಿ ನಗರದ ಅಕ್ಕಪಕ್ಕದಲ್ಲಿ ಯುಜಿಡಿ ಕಾಮಗಾರಿ ಪ್ರಗತಿಯಲ್ಲಿದೆ. ಈ ನಡುವೆ ರಕ್ತವನ್ನು ಚರಂಡಿಯಲ್ಲಿ ಹರಿ ಬಿಟ್ಟು , ಮಳೆ ನೀರಿನೊಂದಿಗೆ ರಕ್ತವೂ ಕೋಕ್ತಿ ಕೆರೆ ಸೇರುತಿತ್ತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವಂತೆ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು, ವಿವಿಧ ಸಂಘಟನೆ ಮುಖಂಡರು ಸೇರಿ ಕೆರೆಯ ನೀರು ಕಲುಷಿತವಾಗಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರು.
ಸ್ಥಳೀಯ ನಾಗರಿಕರು ಪೂಜ್ಯ ಭಾವನೆಯಿಂದ ಕಾಣುವ ಕೆರೆ ಮಲೀನಗೊಂಡಿರುವದು ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆಯೆಂದು ಅಸಮಾಧಾನಗೊಂಡಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಆಗಮಿಸಿದ ಪುರಸಭೆಯ ಅಧಿಕಾರಿಗಳು ಮತ್ತು ಒಳಚರಂಡಿ ಇಲಾಖೆ ಅಧಿಕಾರಿಗಳು ದೌಡಾಯಿಸಿ ಪರಿಶೀಲಿಸಿದರು.
ರಕ್ತ ಮಿಶ್ರಿತ ನೀರನ್ನ ಟ್ಯಾಂಕರ್ ಮೂಲಕ ತೆಗೆದು ಬೇರೆಡೆ ಸಾಗಿಸಿದರು. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ತಂಜೀಂ ಅಧ್ಯಕ್ಷ ಇನಾಯತ್ ಉಲ್ ಶಾಬಂದ್ರಿ ಸ್ಥಳಕ್ಕೆ ಆಗಮಿಸಿ ಈ ಘಟನೆಯನ್ನು ಖಂಡಿಸಿದ್ದಾರೆ. ಭಟ್ಕಳ ಪಟ್ಟಣಕ್ಕೆ ಅನುಕೂಲವಾಗುವ ಕೋಕ್ತಿ ಕೆರೆಯ ನೀರನ್ನ ಮಲೀನಗೊಳಿಸಿರುವದು ಅಪರಾಧ ಎಂದರು.
ಮಾಜಿ ಯೋಧ ಶ್ರೀಕಾಂತ ನಾಯ್ಕ, ಪರಮೇಶ್ವರ ಗೊಂಡ ಸೇರಿದಂತೆ ವಿವಿಧ ಸಂಘಟನೆ ಮುಖಂಡರು ಮತ್ತು ಗೊಂಡ ಸಮುದಾಯದ ನಾಗರಿಕರು ಇದ್ದರು. ಡಿವೈಎಸ್ಪಿ ಮಹೇಶ ಎಂ.ಕೆ., ನಗರ ಠಾಣೆ ಪಿಎಸ್ಐ, ಎಎಸ್ಐ ಸೇರಿ ಪೊಲೀಸರು ಪರಿಸ್ಥಿತಿ ನಿಭಾಯಿಸಿದರು.