ಶಿರಸಿ: ಅಂಡಗಿ ಅರಣ್ಯ ವ್ಯಾಪ್ತಿಯಲ್ಲಿ ಕಾಡು ಹಂದಿಯನ್ನ ಬೇಟೆಯಾಡಿ ಮಾಂಸ ತಯಾರಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬನವಾಸಿ ವಲಯದ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

  ತಾಲೂಕಿನ ಬನವಾಸಿ ಸಮೀಪದ ಸಂತೋಳ್ಳಿಯ ಬಸವರಾಜ ಯಲ್ಲಪ್ಪ ಚೆನ್ನಯ್ಯ ಹಾಗೂ ಹೆಬ್ಬತ್ತಿಯ ಉಮೇಶ ಚನ್ನಪ್ಪ ಚೆನ್ನಯ್ಯ ಬಂಧಿತ ವ್ಯಕ್ತಿಗಳಾಗಿದ್ದಾರೆ.

   ಬನವಾಸಿ ವಲಯ ದಾಸನಕೊಪ್ಪ ಶಾಖೆಯ ಅಂಡಗಿ ಅರಣ್ಯ ವ್ಯಾಪ್ತಿಯಲ್ಲಿ ಇವರಿಬ್ಬರೂ ಕಾಡುಹಂದಿ ಭೇಟೆಯಾಡಿ ಮಾಂಸ ತಯಾರಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಪರಿಶೀಲನೆಗೆ ತೆರಳಿದ್ದಾಗ ಕಾಡಿನಲ್ಲಿ ಪರಾರಿಯಾಗಿದ್ದರು. ಬಸವರಾಜ ಯಲ್ಲಪ್ಪ ಚೆನ್ನಯ್ಯನನ್ನು ಬನವಾಸಿ ದಾಸನಕೊಪ್ಪ ರಸ್ತೆಯ ಕಡಗೋಡ ಕ್ರಾಸ್ ಬಳಿ ಮತ್ತು ಉಮೇಶ ಚನ್ನಪ್ಪ ಚೆನ್ನಯ್ಯನನ್ನು ಸಂತೊಳ್ಳಿ ಮನೆಯಲ್ಲಿ ಬಂಧಿಸಿದ್ದಾರೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಅಜ್ಜಯ್ಯ ಜಿ.ಆರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹರೀಶ ಸಿ.ಎನ್ ಮಾರ್ಗದರ್ಶನದಲ್ಲಿ ಬನವಾಸಿ ವಲಯಾರಣ್ಯಾಧಿಕಾರಿ ವರದ ರಂಗನಾಥ ನೇತೃತ್ವದಲ್ಲಿ ನಡೆದ ಕಾರ್ಯಚರಣೆ ನಡೆಸಲಾಗಿತ್ತು.  ಉಪ ವಲಯ ಅರಣ್ಯಾಧಿಕಾರಿ ಕಾರ್ತಿಕ ನಾರ್ವೆಕರ್, ಗಸ್ತು ಅರಣ್ಯ ಪಾಲಕರಾದ ದಯಾನಂದ ಬೋರ್ಕರ್, ಸಿದ್ದಪ್ಪ ನಾವಿ, ಅರಣ್ಯ ವೀಕ್ಷಕರಾದ ಚಂದ್ರು ಗೌಡ, ಗಿರೀಶ ಕುರುಬರ ಪಾಲ್ಗೊಂಡಿದ್ದರು.