ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಮಧ್ಯಪ್ರದೇಶ(Madyapradesh) : ದಯವಿಟ್ಟು ನನ್ನನ್ನು ಕಾಪಾಡಿ ಸರ್, ನನ್ ಹೆಂಡ್ತಿ ಸಿಕ್ಕಾಪಟ್ಟೆ ಹೊಡೀತಾಳೆ., ಹೊಡೆದು.. ಹೊಡೆದು ಕೊಂದು ಹಾಕ್ತಾಳೆ. ಎಂದು ರೈಲ್ವೆ ಉದ್ಯೋಗಿಯೊಬ್ಬರು ಪೊಲೀಸರ ಬಳಿ ಗೋಳಿಟ್ಟ ಘಟನೆ ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಪನ್ನಾದಲ್ಲಿ ಈ ಘಟನೆ ವರದಿಯಾಗಿದೆ.
ಲೋಕೇಶ್ ಮಾಂಝಿ (30) ಅಸಹಾಯಕತೆ ವ್ಯಕ್ತಪಡಿಸಿದ ರೈಲ್ವೆ ಲೋಕೋ ಪೈಲಟ್. ತಮ್ಮ ಪತ್ನಿ ಹರ್ಷಿತಾ ರಾಯಕ್ವಾರ್ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ. ಮನೆಯಲ್ಲಿ ಪತ್ನಿ ಹಲ್ಲೆ ಮಾಡುತ್ತಿರುವ ಸಿಸಿಟಿವಿ ವಿಡಿಯೋವನ್ನ ಲೋಕೇಶ್ ಮಾಂಝಿ ಪೊಲೀಸರಿಗೆ ನೀಡಿದ್ದು ಆಕೆಯನ್ನ ಬಂಧಿಸುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಲೋಕೇಶ್ ಮಾಂಝಿ ಮತ್ತು ಹರ್ಷಿತಾ ರಾಯ್ಯಾರ್ ಜೂನ್ 2023ರಲ್ಲಿ ಮದುವೆಯಾಗಿತ್ತು. ಆರಂಭದಲ್ಲಿ ಸರಿ ಇದ್ದ ಪತ್ನಿ ಬಳಿಕ ನಿಧಾನವಾಗಿ ತನ್ನ ವರಸೆ ತೋರಿಸಲಾರಂಭಿಸಿದಳು. ಮಾತು ಮಾತಿಗೂ ಸಿಟ್ಟು, ಕೋಪ ಮಾಡಿಕೊಂಡು ಇಡೀ ಕುಟುಂಬದ ಶಾಂತಿ ಹಾಳು ಮಾಡುತ್ತಿದ್ದಳಂತೆ. ಮದುವೆಯಾದಾಗಿನಿಂದ ತಮ್ಮ ಪತ್ನಿ, ಅತ್ತೆ ಮತ್ತು ಭಾವ ಹಣ ಮತ್ತು ಆಭರಣಗಳಿಗೆ ಬೇಡಿಕೆ ಇಡುತ್ತಿದ್ದಾರೆ ಎಂದು ಲೋಕೇಶ್ ಮಾಂಝಿ ದೂರಿನಲ್ಲಿ ಅಳಲು ತೋಡಿಕೊಂಡಿದ್ದಾರೆ.
ಅಲ್ಲದೇ ನಾನು ನನ್ನ ತಂದೆ-ತಾಯಿ ಕುಟುಂಬಸ್ಥರೊಂದಿಗೆ ಬೆರೆಯದಂತೆ ನಿರ್ಬಂಧಿಸುತ್ತಾಳೆ. ಸ್ನೇಹಿತರೊಂದಿಗೂ ಮಾತನಾಡಬಾರದು ಎಂದು ಹೇಳುತ್ತಾಳೆ. ಅವಳ ಮಾತು ಮೀರಿ ಅವರನ್ನು ಸಂಪರ್ಕಿಸಿದರೆ ಮನೆಗೆ ಬಂದ ಮೇಲೆ ಜಗಳ ಮಾಡುತ್ತಾಳೆ. ಜಗಳ ಮಾತ್ರವಲ್ಲ ಕೈಗೆ ಸಿಕ್ಕ ವಸ್ತುಗಳಿಂದ ಥಳಿಸುತ್ತಾಳೆ. ಇದಕ್ಕೆ ಪ್ರತಿರೋಧ ತೋರಿದರೆ ಗೃಹ ಹಿಂಸೆ ಮತ್ತು ವರದಕ್ಷಿಣ ಕಿರುಕುಳ ದೂರು ನೀಡುತ್ತೇನೆ ಎಂದು ಹೆದರಿಸುತ್ತಾಳೆ. ಮನೆ ಕೆಲಸಗಳಿಗೆ ಸಹಕರಿಸುವುದಿಲ್ಲ. ಏನೂ ಕೆಲಸ ಮಾಡುವುದಿಲ್ಲ. ದಯವಿಟ್ಟು ನನಗೆ ಸಹಾಯ ಮಾಡಿ ಸರ್ ಎಂದು ಲೋಕೇಶ್ ಮಾಂಝಿ ಪೊಲೀಸರ ಬಳಿ ನೆರವು ಯಾಚಿಸಿದ್ದಾರೆ.
ತಾನು ಮಾಡುತ್ತಿರುವ ಕೃತ್ಯದ ಬಗ್ಗೆ ಪೊಲೀಸರಿಗೆ ಹೇಳಿದರೆ ಅಥವಾ ಪೊಲೀಸರ ಸಂಪರ್ಕಿಸಿದರೆ ತಮ್ಮ ಮಗುವನ್ನೂ ಕೊಂದು ತಾನೂ ಕೂಡ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ. ಒಮ್ಮೆ ಇದೇ ವಿಚಾರವಾಗಿ ಜಗಳವಾದಾಗ ಸೊಳ್ಳೆ ಔಷಧಿ ಕುಡಿದಿದ್ದಳು. ಅವಳ ಇಂತಹ ಕೃತ್ಯಗಳಿಂದ ನನಗೆ ಭಯವಾಗುತ್ತದೆ. ಹೀಗಾಗಿ ನಾನು ಇಷ್ಟು ದಿನ ಸುಮ್ಮನಿದ್ದೆ. ಇದೀಗ ಅವಳ ಕಿರುಕುಳ ಅತಿಯಾಗಿದ್ದು ಕೊನೆ ದಾರಿ ಇಲ್ಲದೇ ನಿಮ್ಮ ಸಹಾಯ ಕೋರುತ್ತಿದ್ದೇನೆ ಎಂದು ಲೋಕೇಶ್ ಮಾಂಝಿ ದೂರಿನಲ್ಲಿ ಹೇಳಿದ್ದಾರೆ.
ಸಂತ್ರಸ್ಥ ಲೋಕೇಶ್ ಮಾಂಝಿ ತಮ್ಮ ಎಲ್ಲ ಆರೋಪಗಳಿಗೂ ಸಾಕ್ಷಿ ಕೂಡ ಇಟ್ಟುಕೊಂಡಿದ್ದು, ಮನೆಯಲ್ಲಿದ್ದ ಸಿಸಿಟಿವಿ ವಿಡಿಯೋಗಳನ್ನು ಪೊಲೀಸರಿಗೆ ನೀಡಿದ್ದಾರೆ. ವಿಡಿಯೋದಲ್ಲಿ ಪತ್ನಿ ಹರ್ಷಿತಾ ಪತಿ ಲೋಕೇಶ್ ಮೇಲೆ ಹಲ್ಲೆ ಮಾಡುತ್ತಿರುವುದು ಸ್ಪಷ್ಟವಾಗಿದೆ. ಅಲ್ಲದೆ ಇದನ್ನು ತಡೆಯಲು ಬಂದ ಮಹಿಳೆ ಮೇಲೂ ಆಕೆ ಹಲ್ಲೆಗೆ ಮುಂದಾಗಿರುವುದು ದಾಖಲಾಗಿದೆ. ಈ ಬಗ್ಗೆ ಸತ್ನಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಇದನ್ನು ಓದಿ : ಕ್ರಿಯಾಶೀಲ ಪೊಲೀಸ್ ಅಧಿಕಾರಿಗೆ ಮುಖ್ಯಮಂತ್ರಿ ಬಂಗಾರದ ಪದಕ ಪ್ರಧಾನ.