ಕೇರಳ : ವಯನಾಡ್‌ ನಲ್ಲಿ ಉಂಟಾದ ಭೂಕುಸಿತದಿಂದ(LANDSLIDE) ಸಂತ್ರಸ್ತರಾದ ಜನರ ಪುನರ್ವಸತಿಗೋಸ್ಕರ ಕಾಂಗ್ರೆಸ್ (CONGRESS) ಪಕ್ಷದಿಂದ ನೂರಕ್ಕೂ ಹೆಚ್ಚು ಮನೆ ನಿರ್ಮಿಸಿಕೊಡುವುದಾಗಿ  ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ವಯನಾಡ್‌ನ ಮಾಜಿ ಸಂಸದ ರಾಹುಲ್ ಗಾಂಧಿ (RAHUL GANDHI) ಹೇಳಿದ್ದಾರೆ.

ವಯನಾಡ್ ಜಿಲ್ಲಾಡಳಿತ ಮತ್ತು ಪಂಚಾಯತ್‌ನ ಅಧಿಕಾರಿಗಳೊಂದಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ (PRIYANKA GANDHI)  ಮತ್ತು ಇತರ ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ವಯನಾಡ್  ಸಭೆ ನಡೆಸಿದ ನಂತರ ರಾಹುಲ್ ಮಾಧ್ಯಮದವರಿಗೆ ಈ ವಿಷಯ ತಿಳಿಸಿದರು.

ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ, ಧರೆಗುರುಳಿದ ಮನೆಗಳು ಮತ್ತು ಜನರ ಶೋಧ ಕಾರ್ಯಾಚರಣೆ ಮತ್ತು ರಕ್ಷಣೆಗೆ ಕೈಗೊಂಡ ಕಾರ್ಯತಂತ್ರಗಳ ಬಗ್ಗೆ ಅಧಿಕಾರಿಗಳು ರಾಹುಲ್ ಗಾಂಧಿಗೆ ಸಭೆಯಲ್ಲಿ ಮಾಹಿತಿ ನೀಡಿದರು.

ಈ ವೇಳೆ ಮಾತನಾಡಿದ ರಾಹುಲ್ ಗಾಂಧಿ, “ಭೂಕುಸಿತವು ಕೇರಳ(KERAL) ಹಿಂದೆಂದೂ ಕಂಡಿರದ ಭೀಕರ ದುರಂತವಾಗಿದೆ. ಆದ್ದರಿಂದ ಇದನ್ನು ವಿಭಿನ್ನ ರೀತಿಯ ದುರಂತವೆಂದು ಪರಿಗಣಿಸಬೇಕಾಗಿದೆ. ಈ ವಿಚಾರವನ್ನು ಕೇಂದ್ರ ಹಾಗೂ ಕೇರಳ ಸರ್ಕಾರದೊಂದಿಗೆ ಪ್ರಸ್ತಾಪಿಸಲಾಗುವುದು” ಎಂದು ಹೇಳಿದರು.

ಭೂಕುಸಿತದಲ್ಲಿ ಬದುಕುಳಿದವರಲ್ಲಿ ಹೆಚ್ಚಿನವರು ಭೂಕುಸಿತ ಪೀಡಿತ ಪ್ರದೇಶಗಳಿಗೆ ಪುನಃ ಮರಳಲು ಬಯಸುವುದಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ, ಅವರಿಗೆ ಸುರಕ್ಷಿತ ಪ್ರದೇಶದಲ್ಲಿ ಪುನರ್ವಸತಿ ಕಲ್ಪಿಸಬೇಕೆಂದರು.

ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಭೂಕುಸಿತ ದುರಂತ ಸಂಭವಿಸಿದ ಚೂರಲ್ಮಲಾ ಮತ್ತು ಮುಂಡಕ್ಕೈ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿದ್ದರು. ಶುಕ್ರವಾರವು ಕೂಡ ಅವರು ದುರಂತ ಪ್ರದೇಶಗಳಿಗೆ ತೆರಳಿ ಪರಿಸ್ಥಿತಿ ವೀಕ್ಷಿಸಿದರು ಮತ್ತು ಪರಿಹಾರ ಶಿಬಿರಗಳಲ್ಲಿ ಬದುಕುಳಿದವರೊಂದಿಗೆ ಸಂವಾದ ನಡೆಸಿದ್ದಾರೆ.