ದಾಂಡೇಲಿ : ಇಲ್ಲಿನ ವನಶ್ರೀ ನಗರದ ಮನೆಯೊಂದಕ್ಕೆ ಕನ್ನ ಹಾಕಿದ್ದ ಮೂವರು ಆರೋಪಿಗಳನ್ನು ನಗರ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವನಶ್ರೀ ನಗರದ ಶಂಶುನ್ನಿಸಾ ಅಬ್ದುಲ್ ಮುತಲಿಬ್ ಶೇಖ್ ಅವರ ಮನೆಯಲ್ಲಿ ಕಳ್ಳತನವಾಗಿತ್ತು.  ಮೇ 26ರಂದು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಕಳ್ಳತನ ಮಾಡಿದ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ನಗರದ ಮಾರುತಿ ನಗರದ ನಿವಾಸಿಗಳಾದ ಅಶೋಕ ಗುರವ ಮತ್ತು ಫೈರೋಜ್ ಅಬ್ದುಲ್ ಸತ್ತಾರ್ ದೌಲತ್ತಿ ಹಾಗೂ ಗಾಂಧಿನಗರದ ನಿವಾಸಿ ಮೈಕಲ್ ಬನ್ನಿ ಅಪ್ಪು ಕಕ್ಕೇರಿ ಬಂಧಿತರಾಗಿದ್ದಾರೆ.

ಆರೋಪಿಗಳಿಂದ ಕಳ್ಳತನ ಮಾಡಿದ 2 ಬಂಗಾರದ ಉಂಗುರ,  6 ಜೊತೆ ಬೆಳ್ಳಿಯ ಕಾಲು ಚೈನ್, 4  ಬೆಳ್ಳಿಯ ಕೈಬಳೆ, 3 ವಾಚ್, ಬೆಳ್ಳಿಯ ದೀಪ ಹಚ್ಚುವ ಹಣತೆ, , ಸಣ್ಣ ಡಬ್ಬಾ ಮತ್ತು 3,650 ರೂ.ನಗದು ಹಾಗೂ ಈ ಕೃತ್ಯಕ್ಕೆ ಬಳಸಲಾದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ:ವಿಷ್ಣುವರ್ಧನ್.ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷರಾದ ಸಿ.ಟಿ ಜಯಕುಮಾರ್ ಮತ್ತು ಡಿವೈಎಸ್ಪಿ ಶಿವಾನಂದ ಮದರಖಂಡಿ ಅವರ ಮಾರ್ಗದರ್ಶನದಲ್ಲಿ ಸಿಪಿಐ ಭೀಮಣ್ಣ ಎಂಸೂರಿ ಅವರ ನೇತೃತ್ವದಲ್ಲಿ ಪಿಎಸ್ಐ ಗಳಾದ ಐ.ಆರ್. ಗಡ್ಡೆಕರ್ ಮತ್ತು ರವೀಂದ್ರ ಬಿರಾದರ್, ಎಎಸ್ಐಗಳಾದ ಬಸವರಾಜ ಒಕ್ಕುಂದ, ನಾರಾಯಣ ರಾಥೋಡ್ ಮತ್ತು ಪೊಲೀಸ್ ಸಿಬ್ಬಂದಿಗಳು ಹಾಗೂ ಜಿಲ್ಲಾ ಕೇಂದ್ರದ ಸಿಡಿಆರ್ ವಿಭಾಗದ ಸಿಬ್ಬಂದಿಗಳಾದ ಉದಯ ಗುನಗ, ರಮೇಶ್ ನಾಯ್ಕ ಅವರನ್ನು ಒಳಗೊಂಡ ತಂಡವನ್ನು ರಚಿಸಿ ಆರೋಪಿಗಳ ಪತ್ತೆಗಾಗಿ ತನಿಖೆ ನಡೆಸಲಾಗಿತ್ತು. ದಾಂಡೇಲಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.