ಕಾರವಾರ : ಜಗತ್ತಿನಲ್ಲೆಡೆ ತ್ಯಾಗದ ಸಂದೇಶದ ಬಕ್ರೀದ್ ಹಬ್ಬಕ್ಕಾಗಿ ಇಸ್ಲಾಂ ಬಂದವರು ತಯಾರಿ ಮಾಡಿಕೊಂಡಿದ್ದಾರೆ.  ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಈದ್ ಉಲ್ ಅಧಾ ಆಚರಣೆಗೆ  ಸಿದ್ಧತೆ ನಡೆಸಲಾಗಿದೆ.

ಉತ್ತರಕನ್ನಡ ಜಿಲ್ಲೆಯ ಕಾರವಾರ, ಭಟ್ಕಳ, ಶಿರಸಿ, ಮುಂಡಗೋಡು, ಹಳಿಯಾಳ ಸೇರಿ ಬೇರೆಬೇರೆ ಭಾಗಗಳಲ್ಲಿ ಹಬ್ಬಕ್ಕಾಗಿ ವಿವಿಧ ಜಾತಿಯ ಕುರಿ, ಮೇಕೆಗಳು ಬಂದಿವೆ. ಕಾರವಾರದಲ್ಲಿ  ಇಬ್ರಾಹಿಂ ಶೇಖ್ ಎಂಬುವವರು ಲಕ್ಷಾಂತರ ರೂ. ಮೌಲ್ಯದ ಕುರಿಗಳನ್ನ ತಂದಿದ್ದಾರೆ. ಮೂರು ಲಕ್ಷ ರೂ. ನ ಆಪ್ರಿಕನ್ ಬೋರ್ ಜಾತಿಯ ಶ್ವೇತ ವರ್ಣದ ಕುರಿಗಳು ಗಮನ ಸೆಳೆಯುತ್ತಿದೆ. ಒಂದೂವರೆ ಕ್ವಿಂಟಲ್ ತೂಕವಿದೆ. ಇದರ ಮರಿಗಳಿಗೆ 80 ಸಾವಿರ ರೂ. ದರವಿದೆಯಂತೆ.  ಇದರ ಜೊತೆ ಆಪ್ರಿಕನ್ ಮಾಲ್ವಾ ಸೇರಿ ಇತರ ಕಾಸ್ಟ್ಲಿ ಜಾತಿಯ ಕುರಿಗಳನ್ನ ಮುಂಬೈನಿಂದ ತಂದಿದ್ದಾರೆ.

ಇಷ್ಟೊಂದು ಅಧಿಕ ದರದ ಕುರಿಗಳನ್ನ ಸಾಕೋದಕ್ಕೆ ತಂದಿಲ್ಲ. ಬಕ್ರೀದ್ ಹಬ್ಬಕ್ಕಾಗಿ ಕುರ್ಬಾನಿ ಮಾಡಲು ತಂದಿದ್ದಾರೆ ಇಬ್ರಾಹಿಂ ಶೇಖ್. ಪ್ರತಿ ವರ್ಷವೂ ಇಬ್ರಾಹಿಂ ಅವರು ಬಕ್ರೀದ್ ಸಂದರ್ಭದಲ್ಲಿ ಕುರಿಗಳನ್ನ ತರುತ್ತಾರೆ.

ಭಟ್ಕಳದಲ್ಲೂ ಸಹ ಬಕ್ರೀದ್ ಗೋಸ್ಕರ ಲಕ್ಷ ರೂ. ಕುರಿ, ಮೇಕೆಗಳು ಬಂದಿವೆ.  ಈದ್-ಉಲ್-ಅಧಾ ಸಂದರ್ಭದಲ್ಲಿ ಮೇಕೆ ಕುರಿಗಳನ್ನ ಬಲಿ ನೀಡಲಾಗುತ್ತದೆ. ಮುಸ್ಲಿಮರಿಗೆ ಮಾರ್ಗದರ್ಶನ ನೀಡಲು ಅಲ್ಲಾಹನು ಕಳುಹಿಸಿದ ಪ್ರವಾದಿಗಳಲ್ಲಿ ಒಬ್ಬರಾದ ಹಜರತ್ ಇಬ್ರಾಹಿಂ ಅವರ ತ್ಯಾಗವನ್ನು ಸ್ಮರಿಸುವ ಹಬ್ಬ.. ತ್ಯಾಗದ ಸಂಕೇತವಾಗಿ  ಭಾರತದಲ್ಲಿ ಬಕ್ರೀದ್ ಆಚರಿಸಲಾಗುತ್ತದೆ.

ಅಲ್ಲಾಹನ ಪ್ರವಾದಿಯಾಗಿರುವ ಇಬ್ರಾಹಿಂನ ತ್ಯಾಗ ಮತ್ತು ಭಕ್ತಿಗೆ ಮೆಚ್ಚಿದ ಅಲ್ಲಾಹನು l ಪ್ರಾಣಿಯನ್ನು ಬಲಿಕೊಡುವಂತೆ ಸಂದೇಶ ನೀಡಿದರು. ಹೀಗಾಗಿ ತಾನು ಸಾಕಿದ ಅತ್ಯಂತ ಪ್ರೀತಿಯ ಕುರಿ ಮರಿಯನ್ನು ಬಲಿ ಕೊಟ್ಟರು. ನಂಬಿಕೆಗಳ ಪ್ರಕಾರ ಈದ್-ಉಲ್- ಅದಾ ದಲ್ಲಿ ಬಲಿ ನೀಡುವ ಸಂಪ್ರದಾಯ ಅಂದಿನಿಂದ ಪ್ರಾರಂಭವಾಯಿತು. ಹಜರತ್ ಇಬ್ರಾಹಿಂ ಅವರ ತ್ಯಾಗದ ನೆನಪಿಗಾಗಿ ಪ್ರತಿವರ್ಷ ಈದ್ ಉಲ್ ಅಧಾ ಹಬ್ಬದ ದಿನದಂದು ಮನೆಯಲ್ಲಿ ಪ್ರೀತಿಯಿಂದ ಸಾಕಿದ ಗಂಡು ಕುರಿ, ಮೇಕೆಯನು ಬಲಿ ನೀಡಲಾಗುತ್ತದೆ. ಅದರ ಮಾಂಸವನ್ನು ಮೂರು ಭಾಗಗಳನ್ನಾಗಿ ಮಾಡಿ ಒಂದನೇ ಭಾಗವನ್ನು ನಿರ್ಗತಿಕರಿಗೆ ಅಥವಾ ಬಡವರಿಗೆ, ಎರಡನೇ ಭಾಗವನ್ನು ಕುಟುಂಬ ಹಾಗೂ ಮೂರನೇ ಭಾಗವನ್ನು ಸಂಬಂಧಿಕರು ಮತ್ತು ಸ್ನೇಹಿತರಿಗೆ ಹಂಚುವ ಪದ್ಧತಿ ಇದೆ. ತ್ಯಾಗ ಬಲಿದಾನಗಳ ಸಂಕೇತವಾಗಿ ಬಕ್ರೀದ್ ಆಚರಿಸಲಾಗುತ್ತದೆ.