ಕಾರವಾರ : ಅಮದಳ್ಳಿ ಗ್ರಾಮದಲ್ಲಿ ಚತುಷ್ಪಥ ರಾಷ್ಟೀಯ ಹೆದ್ದಾರಿ ಅರೆಬರೇ ಕಾಮಗಾರಿ ವಿರೋಧಿಸಿ ನಾಗರಿಕರು ಧಿಡೀರ್ ಪ್ರತಿಭಟನೆ ನಡೆಸಿದ್ದಾರೆ.
ಸೋಮವಾರ ಮಧ್ಯಾಹ್ನ ಬೈಕ್ ನಲ್ಲಿ ಬರುತ್ತಿದ್ದ ಬ್ರಹ್ಮದೇವವಾಡದ ವಿನಾಯಕ ಗೌಡ ಎಂಬಾತನಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದಾನೆ. ಇದರಿಂದ ಆಕ್ರೋಶಗೊಂಡ ನಾಗರಿಕರು ಕೆಲ ಕಾಲ ಹೆದ್ದಾರಿ ತಡೆ ನಡೆಸಿದರು. ಐಆರ್ಬಿ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಐಆರ್ಬಿ ಕಂಪನಿ ಯವರು ಅಮದಳ್ಳಿ ಬಳಿ ಅಪೂರ್ಣ ಕಾಮಗಾರಿ ನಡೆಸಿ ಹಾಗೇ ಬಿಟ್ಟಿದ್ದಾರೆ. ಹೀಗಾಗಿ ಪದೇಪದೇ ಅಪಘಾತಗಳು ಸಂಭವಿಸಿ ಸಾವುನೋವುಗಳಾಗುತ್ತಿವೆ ಎಂದು ಪ್ರತಿಭಟನಾಕಾರರು ಅಸಮಧಾನಗೊಂಡರು. ಪ್ರತಿನಿತ್ಯ ಅಪಘಾತವಾಗುತ್ತಿದ್ದರೂ ಗುತ್ತಿಗೆ ಕಂಪನಿ ಎಚ್ಚೆತ್ತುಕೊಳ್ಳುತ್ತಿಲ್ಲ. ಸ್ಥಳಕ್ಕೆ ಕಾರವಾರ ಪೊಲೀಸರು ಆಗಮಿಸಿ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದರು. ಸ್ಥಳಕ್ಕೆ ಕಂಪನಿ ಅಧಿಕಾರಿಗಳು ಬರುವಂತೆ ನಾಗರಿಕರು ಪಟ್ಟು ಹಿಡಿದರು.
ನಂತರ ಕಂಪನಿಯ ಇಂಜಿನಿಯರ್ ಆಗಮಿಸಿ ಇನ್ನೂ 15 ದಿನದೊಳಗೆ ಹೆದ್ದಾರಿ ಸರಿಪಡಿಸುವ ಬಗ್ಗೆ ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಾಸ್ ತೆಗೆದುಕೊಳ್ಳಲಾಯಿತು. ಹೆದ್ದಾರಿ ತಡೆಯಿಂದ ಕೆಲ ಕಾಲ ವಾಹನಗಳು ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಲ್ಲುವಂತಾಗಿತ್ತು.