ಕಾರವಾರ : ಕೋಟ್ಯಂತರ ರೂಪಾಯಿ  ಅವ್ಯವಹಾರವಾಗಿದ್ದ  ಕಾರವಾರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಗೆ  ಸಹಕಾರ ಇಲಾಖೆಯ ಜಂಟಿ ನಿಬಂಧಕ ಡಾ. ಸುರೇಶ ಗೌಡ ದೌಡಾಯಿಸಿ ಬಂದಿದ್ದಾರೆ. ವಿಷಯ ತಿಳಿದ ಗ್ರಾಹಕರು, ಪ್ರತಿನಿಧಿಗಳು ಅಧಿಕಾರಿಗಳಿಗೆ ಮುತ್ತಿಗೆ ಹಾಕಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಕಳೆದ ಕೆಲ ದಿನಗಳಿಂದ ಕಾರವಾರದ ಪ್ರತಿಷ್ಟಿತ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಸುಮಾರು 54 ಕೋಟಿ ರೂಪಾಯಿ ಅವ್ಯವಹಾರದ ಸುದ್ದಿ ಎಲ್ಲೆಡೆ ಮಾತಾಗುತ್ತಿದೆ. ಠೇವಣಿಯನ್ನು ಹಿಂಪಡೆಯಲು ಪ್ರತಿನಿತ್ಯ ಗ್ರಾಹಕರು ಮುಗಿ ಬೀಳ್ತಿದ್ದಾರೆ. ಆದ್ರೆ ಬ್ಯಾಂಕಿಂದ ಹಣ ಮಾತ್ರ ಸಿಗುತ್ತಿಲ್ಲ. ಹೀಗಾಗಿ ಗ್ರಾಹಕರು ಕೆರಳಿ ಕೆಂಡವಾಗಿದ್ದರೆ. ತಾವೂ ಕಷ್ಟಪಟ್ಟು ದುಡಿದು ಇಟ್ಟ ಹಣ ನಮಗೆ ಕೊಡಿ ಎಂದು ಹೇಳುತ್ತಿರುವ ದೃಶ್ಯ ಮನ ಕಲಕುತ್ತಿದೆ.

ಮಕ್ಕಳ ಮದುವೇಗೋ, ಶಿಕ್ಷಣಕ್ಕೋ, ಮುಂದೆ ಮನೆ ಕಟ್ಟುವ ಆಲೋಚನೆಯಿಂದಲೋ, ಹೀಗೆ ಮುಂದಿನ ಒಳ್ಳೆಯದಕ್ಕಾಗಿ ಠೇವಣಿ ಇಟ್ಟ ಹಣ ಗೋಲ್ಮಾಲ್ ಆಗಿದೆ. ಬಡ ಗ್ರಾಹಕರ ಹಣವನ್ನ ತಿಂದವರ್ಯಾರು ಎಂಬ ಚರ್ಚೆ ನಡೆದಿದೆ.

ಬ್ಯಾಂಕಿನ ಅಧಿಕಾರಿಗಳು, ಸಿಬ್ಬಂದಿಗಳು ತಿಂದರೆ, ಆಡಳಿತ ಮಂಡಳಿಯಿಂದ ಅಪರಾತಪರಾ ಆಗಿದೆಯಾ ಎಂಬ ಸಂಶಯ ಶುರುವಾಗಿದೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ಎಪ್ಐಆರ್ ಆಗಿಲ್ಲ.

ಇವತ್ತು ಬೆಳಗಾವಿಯಿಂದ ಸಹಕಾರ ಇಲಾಖೆಯ ಜಂಟಿ ನಿಬಂಧಕರು ಕಾರವಾರಕ್ಕೆ ಆಗಮಿಸಿದ್ದರು.  ಗ್ರಾಹಕರು ಮುತ್ತಿಗೆ ಹಾಕಿ ನ್ಯಾಯ ಕೊಡಿಸಿ ಎಂದು ಆಗ್ರಹಿಸಿದರು.

ಗ್ರಾಹಕರಾದ ದೀಪಕ ಹನೆಹಳ್ಳ ಮಾತನಾಡಿ, ಪ್ರಕರಣದ ಕುರಿತು ಮೃತರಾದ ಬ್ಯಾಂಕ್‌ ವ್ಯವಸ್ಥಾಪಕರ ವಿರುದ್ಧ ದೂರು ನೀಡಿದ್ದಾರೆ. ಹಿಂದಿನ ವ್ಯವಸ್ಥಾಪಕ ಗುರು ಬಾಂದೇಕರ ಅವರು ಅಪಘಾತದಲ್ಲಿ ಮೃತರಾಗಿದ್ದಾರೆ. ಆದರೆ ಅದು ಹಿಟ್ ಅಂಡ್ ರನ್ ಪ್ರಕರಣದ ರೀತಿ ಇದೆ. ಜತೆಗೆ ಅಧಿಕಾರಿಗಳು ಬ್ಯಾಂಕಿಗೆ ಬಂದಾಗಲೂ ಬ್ಯಾಂಕಿನ ಆಡಳಿತ ಮಂಡಳಿಯ ಒಬ್ಬರೂ ಕೂಡ ಬರಲಿ ಹೀಗಾಗಿ ಈ ಅವ್ಯವಹಾರದಲ್ಲಿ ಆಡಳಿತ ಮಂಡಳಿಯೂ ಪಾಲ್ಗೊಂಡಿದೆ ಹೀಗಾಗಿ ಉನ್ನತ ಮಟ್ಟದ ತನಿಖೆ ಆಗಬೇಕೆಂದು ಒತ್ತಾಯಿಸಿದರು.

ಸಹಕಾರ ಇಲಾಖೆಯ ಜಂಟಿ ನಿಬಂಧಕ ಡಾ. ಸುರೇಶ ಗೌಡ ಅವರು ಗ್ರಾಹಕರೊಂದಿಗೆ ಮಾತನಾಡಿ, ಸದ್ಯ ಬ್ಯಾಂಕಿನ ಕಡತಗಳನ್ನು ಪರಿಶೀಲಿಸಿ ಸರಕಾರಕ್ಕೆ ತಿಳಿಸುತ್ತೇವೆ. ಜತೆಗೆ ಇನ್ಸೂರೆನ್ಸ್ ಬಗ್ಗೆಯೂ ಆರ್‌ಬಿಐ ಅಧಿಕಾರಿಗಳೊಂದಿಗೆ ಮಾತನಾಡುತ್ತೇವೆ. ಈಗಾಗಲೇ ಇಲಾಖೆಯ ಸಚಿವರೊಂದಿಗೆ ವಿಷಯದ ಬಗ್ಗೆ ಚರ್ಚಿಸಲಾಗಿದೆ. ಇಲಾಖೆ ಹಾಗೂ ಆರ್‌ಬಿಐ ಅಧಿಕಾರಿಗಳು ಪರಿಶೀಲನೆ ನಡೆಸಿ ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಯಾವುದೇ ಕಾರಣಕ್ಕೂ ಗ್ರಾಹಕರು ವಿಚಲಿತರಾಗುವ ಅವಶ್ಯಕತೆ ಇಲ್ಲ ಎಂದು ಭರವಸೆ ನೀಡಿದರು.