ಕುಮಟಾ: ಪಟ್ಟಣದ ಚಿನ್ನದ ಅಂಗಡಿಗಳಿಗೆ ನುಗ್ಗಿದ ಖತರ್ನಾಕ್ ಕಳ್ಳರ ಗ್ಯಾಂಗ್ ಚಿನ್ನಾಭರಣಗಳನ್ನು ಕದಿಯುವ ಹೊಂಚು ಹಾಕುತ್ತಿದ್ದ ವೇಳೆ ಸಿಕ್ಕಿಬಿದ್ದ ಘಟನೆ ನಡೆದಿದೆ.

ಪಟ್ಟಣದ ಕುಂಭೇಶ್ವರ ರಸ್ತೆಯ ಜ್ಯುವೆಲರಿ ಅಂಗಡಿಯಲ್ಲಿ ಒಟ್ಟು ಎಂಟು ಜನ  ಕಳ್ಳರನ್ನು  ಬಂಧಿಸಲು ಪೊಲೀಸರು ಯಶಸ್ವಿಯಾಗಿದ್ದಾರೆ.

ಬಿಜಾಪುರ ಜಿಲ್ಲೆಯ ತಾಂಡಾ ನಿವಾಸಿಗಳಾದ ಕವಿತಾ ಸಂಜೀವ್ ನಾಯ್ಕ(31), ಚಾಂದೂಬಾಯ್ ಗಣೇಶ ರಾಥೋಡ್ (45),  ಶೀಲಾಬಾಯಿ ರಾಜು ರಾಥೋಡ್ (40),  ಜನಾಬಾಯಿ ಪವಾರ್ (40), ಸಂಜೀವ್ ನಾಯ್ಕ (41), ಗಣೇಶ ಭೀಮ್ ಸಿಂಗ್ ರಾಥೋಡ್ (48), ಕಿರಣ ತಾರಾಸಿಂಗ್ ನಾಯ್ಕ(28) ಮತ್ತು ವಿನೋದ ಪವಾರ್(25) ಬಂಧಿತರು.

ಇವರೆಲ್ಲರೂ ಕುಂಭೇಶ್ವರ ರಸ್ತೆಯ ಜ್ಯುವೆಲರಿ ಅಂಗಡಿಯಲ್ಲಿ ಚಿನ್ನ ಖರೀದಿಸುವ ನೆಪದಲ್ಲಿ ಅಂಗಡಿ ಪ್ರವೇಶಿಸಿದ್ದರು.  ಬಿಜಾಪುರದಿಂದ ಕುಮಟಾಕ್ಕೆ ಬಂದ ಈ ತಂಡದ  ವರ್ತನೆಯಿಂದ ಅನುಮಾನಗೊಂಡ  ಅಂಗಡಿಗಳ ಮಾಲೀಕರು ತಮ್ಮ ವಾಟ್ಸ್‌ಗ್ರುಪ್‌ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡು ಎಲ್ಲ ಜ್ಯುವೆಲರಿ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.  ಪೊಲೀಸರಿಗೂ ಕೂಡ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಕುಮಟಾ ಪೊಲೀಸರು  ಕಳ್ಳರ ತಂಡವನ್ನ ಹಿಡಿಯಲು ಜಾಲ ಬೀಸಿದ್ದರು. ದಾಳಿಯಲ್ಲಿ ನಾಲ್ವರು ಮಹಿಳೆಯರು ಹಾಗೂ ನಾಲ್ವರು ಪುರುಷರಿದ್ದರು.

ಕೆಲ ವರ್ಷಗಳಿಂದ  ಕುಮಟಾದ ಹಲವು ಭಾಗಗಳಲ್ಲಿ ಕಳುವು ಮಾಡಲು ಯತ್ನಿಸಿದ್ದರೆನ್ನಲಾಗಿದೆ.  ಈ ಬಗ್ಗೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.