ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಉಡುಪಿ(Udupi): ಮೀನು ಕದ್ದ ಆರೋಪದಲ್ಲಿ ಮಹಿಳೆ ಮೇಲೆ ಹಲ್ಲೆ ಉಂಟಾದ ಪ್ರಕರಣಕ್ಕೆ ಸಂಬಂಧಿಸಿ ಅಮಾಯಕ ಮೀನುಗಾರ ಮಹಿಳೆಯರನ್ನು ಬಂಧಿಸಿರುವುದನ್ನ ಖಂಡಿಸಿ ಇಂದು ಮಲ್ಪೆಯಲ್ಲಿ(Malpe) ಮೀನುಗಾರರು ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೀನುಗಾರಿಕೆ ಬಂದ್ ಮಾಡಿದ ಸಾವಿರಾರು ಸಂಖ್ಯೆಯ ಪ್ರತಿಭಟನಾಕಾರರು ಮೀನುಗಾರ ಮಹಿಳೆಯರ ಮೇಲೆ ಹಾಕಿರುವ ಜಾತಿನಿಂದನೆ ಕೇಸ್ ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು. ಬಂಧಿಸಿದ ಮೀನುಗಾರ ಮಹಿಳೆಯರನ್ನು ತಕ್ಷಣ ಬಿಡುಗಡೆಗೊಳಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಇನ್ನು ಮುಂದೆ ಬಂದರಿನಲ್ಲಿ ಯಾವುದೇ ರೀತಿಯ ಕಳ್ಳತನವಾದರೂ ಕೇಸು ದಾಖಲಿಸಬೇಕು. ಬಂದರಿನ ಸಮಸ್ಯೆಗಳನ್ನು ಮೀನುಗಾರ ಸಂಘದ ನೇತೃತ್ವದಲ್ಲೇ ಪರಿಹರಿಸಬೇಕು. ಸಂಘದ ಅನುಮತಿ ಇಲ್ಲದೆ ಪೊಲೀಸ್ ಇಲಾಖೆ ಬಂದರಿನ ಒಳಗಿನ ಸಮಸ್ಯೆ ಮಧ್ಯ ಪ್ರವೇಶಿಸುವಂತಿಲ್ಲ. ಸಂಘದಲ್ಲಿ ತೀರ್ಮಾನಿಸಿ ನಾಲ್ಕು ದಿನ ಅಥವಾ ಒಂದು ವಾರದ ಗಡವು ನೀಡುತ್ತೇವೆ. ನ್ಯಾಯ ಒದಗಿಸುವಂತೆ ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಆಡಳಿತಕ್ಕೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಯಶ್ಪಾಲ್ ಸುವರ್ಣ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ್ ನೇತೃತ್ವದಲ್ಲಿ ಮನವಿ ನೀಡಲಾಯಿತು.
ಪ್ರಕರಣ ಸಂಬಂಧ ಪ್ರತಿಭಟನಾ ಸಭೆ : ಮಹಿಳೆಯನ್ನು ಕಟ್ಟಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಸಂಘದ ಮುಖಂಡರು ಹಾಗೂ ನಾಯಕರು ಪ್ರತಿಭಟನಾ ಸಭೆ ನಡೆಸಿದರು.
ಪ್ರತಿಭಟನಾ ಸಭೆಯಲ್ಲಿ ಗೌಜಿ ಗದ್ದಲ ಉಂಟಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಮಾತಿಗೆ ಮೀನುಗಾರರು ಆಕ್ಷೇಪ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ರಾಜಕೀಯ ಭಾಷಣ ಮಾಡದಂತೆ ತರಾಟೆ ತೆಗೆದುಕೊಂಡರು. ಮೀನುಗಾರ ಮಹಿಳೆಯರು ಜೈಲಿನಲ್ಲಿದ್ದಾರೆ. ಈ ವೇಳೆ ರಾಜಕೀಯ ಮಾತನಾಡಬೇಡಿ ಎಂದು ವೇದಿಕೆಯತ್ತ ಪ್ರತಿಭಟನಾಕಾರರು ಧಾವಿಸಿದರು. ಪ್ರತಿಭಟನಾಕಾರರನ್ನು ತಡೆಯಲು ಮುಖಂಡರ ಹರಸಾಹಸ ಪಡಬೇಕಾಯಿತು. ಪೊಲೀಸ್ ಭದ್ರತೆಯಲ್ಲಿ ಕಾಂಗ್ರೆಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ನಿರ್ಗಮಿಸಿದರು.
ಎಸ್ಪಿವಿರುದ್ಧ ಪ್ರಮೋದ್ ಮಧ್ವರಾಜ್ ಕಿಡಿ :
ಉಡುಪಿ ಎಸ್ಪಿ ವಿರುದ್ಧ ಕಿಡಿ ಕಾರಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್(Pramod Madwaraj), ಮೀನುಗಾರಿಕೆ ಬಂದರು ಅಂದ್ರೆ ಏನೆಂದೇ ಗೊತ್ತಿಲ್ಲದವರು ಉಸ್ತುವಾರಿ ಮಂತ್ರಿಯಾಗಿದ್ದಾರೆ. ಬೆಂಗಳೂರಿನಲ್ಲಿ ಕುಳಿತುಕೊಂಡು ದಿಗ್ಬ್ರಮೆಯಾಗಿದೆ ಎಂದು ಹೇಳಿಕೆ ಕೊಡುತ್ತಾರೆ. ಸಿಎಂ ಜಿಲ್ಲೆ ಮೈಸೂರಿನಲ್ಲಿ 300 ಮಂದಿ ಸೇರಿ ಪೊಲೀಸ್ ಸ್ಟೇಷನ್ ಗೆ ಬೆಂಕಿ ಹಾಕಿದಾಗ ಸಿದ್ದರಾಮಯ್ಯ ಗೆ ದಿಗ್ಭ್ರಮೆ ಆಗಿಲ್ಲವಾ?
ನಿಮ್ಮ ಮನೆಗೆ ಕಳ್ಳರು ಹೋಗಿದ್ದರೆ ಪೂಜೆ ಮಾಡುತ್ತೀರಾ ಎಸ್ಪಿ ಅವರೇ. ನಿಮ್ಮ ಮನೆಗೆ ಕಳ್ಳರು ಬಂದರೆ ಕಟ್ಟಿ ಹಾಕುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ಅದಕ್ಕೂ ಆ ಮಹಿಳೆ ಏನು ಆಕ್ಷೇಪ ಮಾಡಿಲ್ಲ. ನನಗೆ ಯಾವುದೇ ದ್ವೇಷ ಇಲ್ಲ ಎಂದು ಸಂತ್ರಸ್ತ ಮಹಿಳೆ ಹೇಳಿದ್ದಾರೆಂದು ಮಧ್ವರಾಜ್ ಪ್ರಸ್ತಾಪಿಸಿದರು.
ಈ ಎಸ್ಪಿ ಇರುವ ತನಕ ಸರ್ಕಾರ ಮೀನುಗಾರರ ವಿರೋಧಿಯಾಗಿರುತ್ತೆ. ಈ ಘಟನೆಯನ್ನು ವಿರೋಧಿಸುವ ದಲಿತ ನಾಯಕರ ಕುಟುಂಬಗಳು ಮಲ್ಪೆ ಬಂದರಿನಿಂದ ಉದ್ದಾರ ಆಗಿವೆ. ಮಹಿಳೆಯರನ್ನು ಜೈಲಿಗೆ ತಳ್ಳುವ ಎಸ್ಪಿ ನಮ್ಮ ಉಡುಪಿಗೆ ಬೇಡ. ಸರ್ಕಾರ ಎಸ್ಪಿಯನ್ನು ವರ್ಗಾವಣೆ ಮಾಡಲೇಬೇಕು. ಇಲ್ಲದಿದ್ದಲ್ಲಿ ಎಸ್ ಪಿ ಕಚೇರಿ ಮುಂದೆ ಧರಣಿ ಮಾಡಲು ನಾನು ಸಿದ್ದ ಎಂದರಲ್ಲದೆ ಈ ಬಗ್ಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಆಗ್ರಹ ಮಾಡುತ್ತೇನೆಂದರು.
ಈ ವೇಳೆ ಉಪಸ್ಥಿತರಿದ್ದ ಶಾಸಕ ರಘುಪತಿ ಭಟ್(Raghupati Bhat) ಸಹ ಪೊಲೀಸ್ ಇಲಾಖೆ ವಿರುದ್ಧ ಕಿಡಿ ಕಾರಿದರು. ಮಲ್ಪೆ ಹಲ್ಲೆ ಪ್ರಕರಣ ದುರದೃಷ್ಟಕರ ಘಟನೆ. ಆದರೆ ಸರಕಾರ ಮತ್ತು ಪೊಲೀಸ್ ಇಲಾಖೆ ನಡೆದುಕೊಂಡ ರೀತಿ ಒಪ್ಪಲು ಸಾಧ್ಯವಿಲ್ಲ. ಪೋಲಿಸ್ ವರಿಷ್ಠಾಧಿಕಾರಿಗಳು ಯಾವ ಆದರದಲ್ಲಿ ಜಾತಿನಿಂದಲೇ ಪ್ರಕರಣ ದಾಖಲಿಸಿದ್ದಾರೆ.
ಆಕೆ ಕದ್ದಾಗ ಹೊಡೆದಿದ್ದಾರೆ ಆಕೆ ದಲಿತ ಎಂದು ತಿಳಿದಿರಲಿಲ್ಲ. ಕಾನೂನು ಪಾಲನೆ ಮಾಡುತ್ತೇನೆ ಎನ್ನುವ ಎಸ್ ಪಿ ಕಾನೂನಿಗೆ ಸರಿಯಾಗಿ ನಡೆದುಕೊಳ್ಳಬೇಕೆಂದರು.
ಮಲ್ಪೆ ಬಂದರಿನಲ್ಲಿ(Malpe Bunder) ರಾಜಿ ಪಂಚಾಯಿತಿಗೆ ಮೂಲಕ ತೀರ್ಮಾನವಾಗುತ್ತದೆ. ತನಿಖೆಗೆಂದು ಕರೆದು ಮೋಸದಿಂದ ಮಹಿಳೆಯರನ್ನು ಬಂಧಿಸಿರುವುದು ಸರಿಯಲ್ಲ. ಫರ್ದರ್ ಸ್ಟೇಟ್ ಮೆಂಟ್ ಮಾಡಿ ಜಾತಿನಿಂದನೆ ಕೇಸ್ ವಾಪಸ್ ಪಡೆಯಬೇಕು. ಈ ಹಿಂದೆ ಮೀನುಗಾರರನ್ನು ಬಂಧಿಸುವ ಧೈರ್ಯ ಪೊಲೀಸ್ ಇಲಾಖೆಗೆ ಇರಲಿಲ್ಲ. ಆದರೀಗ ಮಲ್ಪೆ ಬಂದರಿನ ಇತಿಹಾಸದಲ್ಲಿ ಮೊದಲ ಬಾರಿಗೆ ಈ ರೀತಿ ಮಾಡಲಾಗಿದೆ ಎಂದು ಕಿಡಿಕಾರಿದರು.
ಇದನ್ನು ಓದಿ : ದಾಳಿ ಮಾಡಿದ ಕರಡಿಯೊಂದಿಗೆ ಕಾದಾಡಿದ ವ್ಯಕ್ತಿ. ಗಂಭೀರ ಗಾಯ.
ಕಾರವಾರದಲ್ಲಿ ಮೆಡ್ ಸ್ಕ್ವೇರ್ ಕ್ಲಿನಿಕ್ ಮತ್ತು ಪಂಚಕರ್ಮ ಕೇಂದ್ರ ಲೋಕಾರ್ಪಣೆ.