ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ (Karwar): ರೋಗಿಗಳಿಗೆ ಕೇವಲ ಚಿಕಿತ್ಸೆ ನೀಡುವುದು ಮುಖ್ಯವಾಗಿರದೇ ವೈದ್ಯರು ಮಾತನಾಡಿಸುವ ರೀತಿಯಿಂದ ರೋಗಿಗಳಿಗೆ ಸಮಾಧಾನವಾಗುವಂತಿರಬೇಕು ಎಂದು ಶಾಸಕ ಸತೀಶ ಸೈಲ್ ಹೇಳಿದ್ದಾರೆ.
ಶುಕ್ರವಾರ ನಗರದ ಮುರಳೀಧರಮಠ ರಸ್ತೆಯಲ್ಲಿ ನೂತನ ವಾಗಿ ಆರಂಭಗೊಂಡ ಮೆಡ್ ಸ್ಕ್ವೇರ್ ಆಯುರ್ವೇದ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.
ಎಲ್ಲಾ ಆಸ್ಪತ್ರೆಗಳಲ್ಲಿಯೂ ರೋಗಿಗಳಿಗೆ ಚಿಕಿತ್ಸೆ ಸಿಗುತ್ತದೆ. ಆದರೆ ಅವರಿಗೆ ಸಮಾಧಾನಕರವಾಗುವ ಸೇವೆ ನೀಡುವುದು ಮುಖ್ಯ ಅದರಿಂದಲೇ ಅರ್ಧ ಖಾಯಿಲೆ ಗುಣವಾಗುತ್ತದೆ. ಮನಸ್ಥಿತಿ ಸರಿ ಇದ್ದರೆ ಮಾತ್ರ ಮನುಷ್ಯ ಆರೋಗ್ಯವಾಗಿರುತ್ತಾನೆ ಎಂದರು. ಅಲೋಪತಿ ಚಿಕಿತ್ಸೆಯಲ್ಲಿ ಸಮಸ್ಯೆಗಳಿರುವ ಕಾರಣಕ್ಕೆ ಇಂದಿನ ಜನರು ಆಯುರ್ವೇದ ಕಡೆಗೆ ಹೆಚ್ಚಾಗಿ ವಾಲುತ್ತಿದ್ದಾರೆ. ರಾಜ್ಯದಲ್ಲಿ 125 ಕೇಂದ್ರಗಳನ್ನು ತೆರೆಯಲು ಸಂಸ್ಥೆ ಮುಂದಾಗಿರುವುದು ಉತ್ತಮ ಸಂಗತಿ. ಇದರಿಂದ ಅನೇಕರಿಗೆ ಉದ್ಯೋಗ ಸಿಗಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೆಕರ ಮಾತನಾಡಿ, ಉತ್ತಮ ಕೆಲಸ ಮಾಡಿದರೂ ಅಪವಾದ ಇರುವುದು ಸಹಜ. ಇದೆಲ್ಲದರ ನಡುವೆ ಎಂ.ಆರ್ ಶೆಟ್ಟಿ ಅವರ ಕುಟುಂಬವು ಉತ್ತಮ ಆಸ್ಪತ್ರೆ ನಿರ್ಮಾಣ ಮಾಡಿದೆ. ಇದರಿಂದ ಜನರಿಗೆ ಉತ್ತಮ ಸೇವೆ ಸಿಗಲಿದೆ ಎಂದರು.
ನಗರಸಭೆಯ ಅಧ್ಯಕ್ಷ ರವಿರಾಜ ಅಂಕೋಲೆಕರ ಮಾತನಾಡಿ, ಇಂದಿನ ಆಹಾರ ಪದ್ದತಿಯಿಂದ ಸಣ್ಣ ವಯಸ್ಸಿನಲ್ಲಿಯೇ ವಿವಿಧ ಖಾಯಿಲೆಗಳು ಬರುತ್ತಿವೆ. ಹೀಗಾಗಿ ನಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳಬೇಕು. ಆಯುರ್ವೇದ ಚಿಕಿತ್ಸೆಯಿಂದ ದೈಹಿಕ ಹಾಗೂ ಮಾನಸಿಕ ನೆಮ್ಮದಿ ಸಿಗುತ್ತದೆ ಎಂದರು.
ಸಂಸ್ಥೆಯ ಅಧ್ಯಕ್ಷ ಡಾ. ಜೀತೇಂದ್ರ ಶೆಟ್ಟಿ, ಆಯುರ್ವೇದ ಕ್ಷೇತ್ರದಲ್ಲಿ ಕೇವಲ ಸಣ್ಣ ಉದ್ಯಮ ಇದೆ. ಆದರೆ ದೊಡ್ಡ ಮಟ್ಟದಲ್ಲಿ ಆಸ್ಪತ್ರೆ ಹಾಗೂ ಮೆಡಿಕಲ್ ಮಾಡಲು ಮುಂದಾಗಿದ್ದೇವೆ ಎಂದು ಹೇಳಿದರು.
ಪ್ರಕೃತಿ ಗ್ರೂಪ್ ಆಫ್ ಕಂಪೆನಿಯ ನಿರ್ದೇಶಕ ಎಂ.ಆರ್ ಶೆಟ್ಟಿ, ಬ್ಯಾಂಕ್ ಆಫ್ ಬರೋಡಾದ ಪಂಕಜ, ವೈದ್ಯೆ ಲಲಿತಾ ಶೆಟ್ಟಿ ಸೇರಿದಂತೆ ಇತರರು ಇದ್ದರು.
ಇದನ್ನು ಓದಿ : ದುಬೈಗೆ ತೆರಳುತ್ತಿದ್ದ ಭಟ್ಕಳ ವ್ಯಕ್ತಿಗೆ ವಿಮಾನದಲ್ಲಿ ಹೃದಯಾಘಾತ.