ನವದೆಹಲಿ : ಈ ಬಾರಿ ಮುಂಗಾರು ಮಾರುತ ಜೂನ್ 1ರಂದೇ ಕೇರಳ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮೇ 19ರಂದು ನೈರುತ್ಯ ಮುಂಗಾರು ಮಾರುತವು ದಕ್ಷಿಣ ಅಂಡಮಾನ್, ಬಂಗಾಳ ಕೊಲ್ಲಿಯ ಆಗ್ನೆಯ ಭಾಗ ಹಾಗೂ ನಿಕೋಬಾರ್ ದ್ವೀಪಗಳನ್ನು ಪ್ರವೇಶಿಸಲಿದೆ. ಜೂನ್ ತಿಂಗಳ ಒಂದರಂದು ಕೇರಳ ಪ್ರವೇಶಿಸಲಿದೆ ಎಂದು ತಿಳಿಸಿದೆ.
ಜೂನ್ 15ರ ವೇಳೆಗೆ ದೇಶಾದ್ಯಂತ ಮುಂಗಾರು ವ್ಯಾಪಿಸಲಿದೆ ಇಲಾಖೆ ತಿಳಿಸಿದೆ. ಕೇರಳ ಪ್ರವೇಶಿಸಿದ ಬಳಿಕ ಒಂದೆರಡು ದಿನಗಳಲ್ಲಿ ಕರ್ನಾಟಕದ ಕರಾವಳಿಗೂ ಮುಂಗಾರು ಪ್ರವೇಶಿಸುವ ನಿರೀಕ್ಷೆಯಿದ್ದು ಈ ಬಾರಿ ವಾಡಿಕೆಗಿಂತ ಅಧಿಕ ಮುಂಗಾರು ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂಚಿತವಾಗಿ ಮಳೆ ಆಗಮನದ ಸಮಾಚಾರ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಈ ಬಾರಿ ಶೇ.106ರಷ್ಟು ಮುಂಗಾರು ಮಳೆ ಬರಲಿದೆ ಎನ್ನಲಾಗಿದೆ. ಈಗಾಗಲೇ ರಾಜ್ಯದಲ್ಲಿ ಪೂರ್ವ ಮುಂಗಾರು ಅಬ್ಬರಿಸುತ್ತಿದ್ದು, ಬಿಸಿಲ ಬೇಗೆಯಲ್ಲಿದ್ದ ಜನರಿಗೆ ತಂಪಿನ ವಾತಾವರಣವನ್ನು ನೀಡಿದ್ದಲ್ಲದೇ, ಮುಂದೆ ಉತ್ತಮ ಮುಂಗಾರು ಮಳೆಯ ಮುನ್ಸೂಚನೆ ಸಿಕ್ಕಿದಂತಾಗಿದೆ.
ರಾಜ್ಯದಲ್ಲಿ ಪೂರ್ವ ಮುಂಗಾರು ಈಗಾಗಲೇ ವೇಗ ಪಡೆದುಕೊಂಡಿದೆ. ಸಾಮಾನ್ಯವಾಗಿ ಕೇರಳಕ್ಕೆ ಜೂನ್ 1 ರಂದು ಮುಂಗಾರು ಪ್ರವೇಶಿದರೆ ಕರ್ನಾಟಕಕ್ಕೆ ಎರಡು ದಿನದ ಬಳಿಕ ಮುಂಗಾರು ಪ್ರವೇಶವಾಗಲಿದೆ. ಅಂದ್ರೆ ಜೂನ್ 3 ಅಥವಾ 4ರಂದು ಕರ್ನಾಟಕದ ಕರಾವಳಿಗೆ ಮುಂಗಾರು ಪ್ರವೇಶಿಸಲಿದ್ದು, ಬಳಿಕ ರಾಜ್ಯಾದ್ಯಂತ ವಿಸ್ತರಣೆಯಾಗುವ ಸಾಧ್ಯತೆಯಿದೆ.