ಮುಂಡಗೋಡ:  ಜೈಲಿನಲ್ಲಿದ್ದುಕೊಂಡು   ವಂಚನೆಯ ಆರೋಪಿಗೆ ಸಹಾಯ ಮಾಡಿದ ಆರೋಪಿಗೆ ನ್ಯಾಯಾಲಯ  ಎರಡು ವರ್ಷ ಕಾರಾಗೃಹ ಶಿಕ್ಷೆ ಮತ್ತು ೧೦ ಸಾವಿರ ದಂಡವನ್ನು ವಿಧಿಸಿದೆ.

ಧಾರವಾಡ ಸೆಂಟ್ರೆಲ್ ಜೈಲಿನ ಸ್ವೀಪರ್ ರಾಜು ಅರಮನೆ ಅವರಿಗೆ ನ್ಯಾಯಾಲಯವು ಎರಡು ವರ್ಷ ಕಾರಾಗೃಹ ಶಿಕ್ಷೆ ಮತ್ತು ಹತ್ತು ಸಾವಿರ ದಂಡ ವಿಧಿಸುವಂತೆ ತೀರ್ಪು ನೀಡಿದೆ.

2014 ರಲ್ಲಿ  ಮುಂಡಗೋಡದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಶೋಕ ಭಟ್‌ರವರ ಮೇಲೆ ನಡೆದ ಲೋಕಯುಕ್ತ ದಾಳಿಯನ್ನು ಉಪಯೋಗಿಸಿಕೊಂಡು ಧಾರವಾಡ ಸೆಂಟ್ರಲ್ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಮುರುಗೇಶ ಕುಂಬಾರ ಎಂಬಾತನು ಅದೇ ಜೈಲಿನಲ್ಲಿದ್ದ ರಾಜು ಅರಮನೆ ಎಂಬಾತನ ಸಹಾಯ ಪಡೆದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಶೋಕ ಭಟ್ ರವರಿಗೆ ನಿಮ್ಮ ಮೇಲಿನ ಪ್ರಕರಣಕ್ಕೆ ಸಂಬಂಧಿಸಿ ನನಗೆ ಹಣ ನೀಡಿದಲ್ಲಿ ಬಿ ರಿಪೋರ್ಟನ್ನು ಹಾಕುವುದಾಗಿ ಹೇಳಿ ಅಶೋಕರಿಂದ 50 ಸಾವಿರ ರೂ. ಹಣ ಪಡೆದು ವಂಚಿಸಿದ್ದನು.

  ಪೊಲೀಸ ಠಾಣೆಯಲ್ಲಿ ಮುರುಗೇಶ ಕುಂಬಾರ ಹಾಗೂ ರಾಜು ಅರಮನೆ ಎಂಬುವರ ಮೇಲೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡಿದ್ದ ಆಗಿನ ಸಿಪಿಐ ಹುಸೇನಖಾನ ಪಠಾಣ ತನಿಖೆ ಮಾಡಿ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ಆದರೆ ಪ್ರಮುಖ ಆರೋಪಿ ಮುರುಗೇಶ ಕುಂಬಾರ  ಪತ್ತೆಯಾಗಿರಲಿಲ್ಲ. ಆದರೆ ಈತನಿಗೆ ಸಹಾಯ ಮಾಡಿದ ರಾಜು ಅರಮನೆ ಎಂಬಾತನನ್ನ ಬಂಧಿಸಿದರು.

ಪ್ರಕರಣದಲ್ಲಿ ರಾಜು ಅರಮನೆ ಎಂಬಾತನಿಗೆ ಮಾತ್ರ ಇಲ್ಲಿನ ಸಿವಿಲ್ ಜಡ್ಜ್ ಮತ್ತು ಜೆ.ಎಮ್.ಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ವಿನೋದ ಬಳಾನಾಯಕ ಅವರು  ಶನಿವಾರ ತೀಪು ನೀಡಿದ್ದಾರೆ. ಸರಕಾರದ ಪರವಾಗಿ ಸಹಾಯಕ ಅಭಿಯೋಜಕರಾದ ಪ್ರಸಾದ ರಮೇಶ ಹೆಗಡೆ ಅವರು ಪ್ರಕರಣದಲ್ಲಿ ಗಂಭೀರ ಸಾಕ್ಷ್ಯವನ್ನು  ಇಟ್ಟು  ಆರೋಪಿತನಿಗೆ ಶಿಕ್ಷೆ ವಿಧಿಸಬೇಕೆಂದು  ವಾದ ಮಂಡಿಸಿದ್ದರು.