ಭಟ್ಕಳ : ಭಟ್ಕಳ ಶ್ರೀರಾಮ್ ಪೈನಾನ್ಸ್ ನಲ್ಲಿ ಹಣ
ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತ ತಲೆ ಮರೆಸಿಕೊಂಡಿದ್ದ ಮಾಸ್ಟರ್ ಮೈಂಡ್ ಆರೋಪಿಯನ್ನು ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಹಾಗೂ ಮೂರನೇ ಆರೋಪಿಗಳನ್ನು ಈ ಹಿಂದೆ ಬಂಧಿಸಲಾಗಿತ್ತು. ಆದರೆ ಪ್ರಕರಣದ ಮುಖ್ಯ ಆರೋಪಿ ಹಾಗೂ  ರಾಘವೇಂದ್ರ ರಾಜೀವ ಸ್ವಾಮಿ ಕುಂದಾಪುರ ಈತ ತಲೆ ಮರೆಸಿಕೊಂಡಿದ್ದ. ಸದ್ಯ ಆರೋಪಿಯನ್ನು ಬಂಧಿಸುವಲ್ಲಿ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

  ಭಟ್ಕಳ ಶ್ರೀ ರಾಮ ಫೈನಾನ್ಸ್ ಶಾಖೆಯಲ್ಲಿ ಕೆಲಸ ಮಾಡುವ ಅವಧಿಯಲ್ಲಿ ಜನವರಿ 1, 2023 ರಿಂದ ಮೇ, 2 2024 ವೇಳೆ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದ. ಪೈನಾನ್ಸಿನಲ್ಲಿ ಸಾಲ ಪಡೆದ ಕೆಲವು ಸಾಲಗಾರರಿಗೆ ಸಂಭಂದಿಸಿದ ವಾಹನಗಳ ಸಾಲವನ್ನು ಪೂರ್ತಿಯಾಗಿ ಚುಕ್ತಾಗೊಳಿಸಿ ಕಂಪೆನಿಯ ಹೈಪೋತಿಕೇಶನ್ ಸರ್ಟಿಫಿಕೇಟ್ ತಯಾರಿ ಮಾಡಿಕೊಂಡಿದ್ದ.  ಹೈಪೋತಿಕೇಶನ್ ಸರ್ಟಿಫಿಕೇಟ್ಗೆ ಕಂಪನಿಯ ಶೀಲ್ ಅನ್ನು ಬಳಸಿ ಅದಕ್ಕೆ ಮುಖ್ಯ ಕಚೇರಿಯಿಂದ ಸಹಿ ಪಡೆಯದೆ ಅವರೇ ಅದಕ್ಕೆ ನಕಲಿ ಸಹಿ ಮಾಡಿ ಆರ್.ಟಿ. ಓ ದಲ್ಲಿ ನೀಡಿ ಬೇರೆಯವರ ಹೆಸರಿಗೆ ವರ್ಗಾವಣೆ ಮಾಡಲು ಅನುಕೂಲ ಮಾಡಿಕೊಟ್ಟಿದ್ದ. ಇದರಿಂದ ಕಂಪನಿಗೆ ಹಾಗೂ ಗ್ರಾಹಕರಿಗೆ ಮೋಸ ಮಾಡಿದ್ದರು.

ಸದರಿ ಆರೋಪಿತರು ಕಂಪನಿಯಲ್ಲಿ ಸಾಲ ಪಡೆದ ಸಾಲ ಮರುಪಾವತಿ ಮಾಡದೇ ಇರುವ ಗ್ರಾಹಕರ ವಾಹನಗಳನ್ನು ಶ್ರೀರಾಮ ಪೈನಾನ್ಸನ ಮೇಲಾಧಿಕಾರಿಗಳ ಅನುಮೋದನೆಯನ್ನು ಪಡೆಯದೇ ತಮ್ಮ ವಶಕ್ಕೆ ಪಡೆದುಕೊಂಡು ಸದರಿ ವಾಹನವನ್ನು ಕಂಪನಿಯ ನಿಯಮಾವಳಿಗಳನ್ನು ಪಾಲಿಸದೇ ಮಾರಾಟ ಮಾಡಿ ಬಂದ ಹಣವನ್ನು ತಮ್ಮ ಸ್ವಂತ ಖರ್ಚಿಗೆ ಬಳಸಿಕೊಂಡಿದ್ದರು.

ಕಂಪನಿಗೆ ಹಾಗೂ ಗ್ರಾಹಕರಿಗೆ ಮೋಸ, ವಂಚನೆ, ನಂಬಿಕೆ ದ್ರೋಹವನ್ನು ಎಸಗಿರುತ್ತಾರೆ. ಹಾಗೂ ಸದರಿ ಆರೋಪಿತರು ಕಳೆದ ಕೆಲವು ತಿಂಗಳುಗಳಿಂದ  ಗ್ರಾಹಕರಿಂದ ಲೋನ್ ಸೆಟ್ಮೆಂಟ್ ಮಾಡುತ್ತೇವೆ ಎಂದು ಅವರಿಂದ ಹಣವನ್ನು ಪಡೆದು ಕಂಪನಿಗೆ ಆ ಹಣವನ್ನು ಮರು ಪಾವತಿ ಮಾಡುತ್ತಿರಲಿಲ್ಲ. ತಮ್ಮ ಸ್ವಂತ ಖರ್ಚಿಗೆ ದುರ್ಬಳಕೆ ಮಾಡಿಕೊಂಡು ಹಾಗೂ ಗ್ರಾಹಕರಿಂದ ಸಾಲದ ಕಂತುಗಳನ್ನು ಸಾಲದ ಖಾತೆಗೆ ಜಮಾ ಮಾಡುತ್ತೇವೆ ಎಂದು ಸುಳ್ಳು ಹೇಳಿ ಅವರಿಂದ ಹಣವನ್ನು ಪಡೆದು ಗ್ರಾಹಕರ ಸಾಲದ ಖಾತೆಗೆ ಕಟ್ಟದೇ ತಮ್ಮ ಸ್ವಂತ ಖರ್ಚಿಗೆ ದುರ್ಬಳಕೆ ಮಾಡಿಕೊಂಡು ಕಂಪನಿಗೆ ವಂಚಿಸಿ, ನಂಬಿಕೆ ದ್ರೋಹ ಮಾಡಿ ಕರ್ತವ್ಯ ಲೋಪ ಎಸಗಿ ಒಟ್ಟೂ 89,79,524 ರೂ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದರು. ಈ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಶ್ರೀರಾಮ್ ಪೈನಾನ್ಸ್  ವತಿಯಿಂದ ದೂರು ದಾಖಲಾಗಿತ್ತು.
ಅಂತು ಪ್ರಮುಖ ಆರೋಪಿಯನ್ನ ಬಂಧಿಸುವಲ್ಲಿ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.