ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ(Karwar): ಮಾಜಿ ನಗರಸಭೆ ಸದಸ್ಯ, ಸತೀಶ್ ಕೊಳಂಬಕರ್ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಒಟ್ಟು ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ.
ಪ್ರಮುಖ ಆರೋಪಿ ನಿತೇಶ್ ತಾಂಡೇಲ್, ನಿತ್ಯಾನಂದ ಹರಿಕಂತ್ರ ಮತ್ತು ಸುರೇಂದ್ರ ನಾಯ್ಕ ಅವರನ್ನು ಗೋವಾದಲ್ಲಿ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಮ್. ನಾರಾಯಣ ಮಾದ್ಯಮಗಳಿಗೆ ತಿಳಿಸಿದ್ದಾರೆ.
ಕೊಲೆ ನಡೆದಾಕ್ಷಣ ವಿಚಾರಣೆಗಾಗಿ ನಿತೇಶ್ ಸ್ನೇಹಿತ ದರ್ಶನ್ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಆದರೆ, ಅವರ ಪಾತ್ರ ಇಲ್ಲದೇ ಇರುವುದರಿಂದ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದರು.
ಭಾನುವಾರ ನಡೆದ ಘಟನೆಗೆ ಸಂಬಂಧಿಸಿದಂತೆ ಸತೀಶ್ ಅವರನ್ನು ಕೊಲೆ ಮಾಡಿರುವುದು ಯಾರೂ ಎನ್ನುವುದು ಗೊತ್ತಾಗಿರಲಿಲ್ಲ. ಸ್ಥಳದಲ್ಲಿದ್ದವರು ಬೇರೆ ಊರಿನಿಂದ ಬಂದು ತರಕಾರಿ ಮಾರುವ ವ್ಯಾಪಾರಿಗಳಾಗಿದ್ದರಿಂದ ಅವರಿಗೆ ಆರೋಪಿಯ ಮುಖ ಪರಿಚಯ ಇರಲಿಲ್ಲಿ ಹಾಗಾಗಿ ಅಕ್ಕಪ್ಪಕ್ಕದಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಕೃತ್ಯ ನಡೆಸಿರುವುದು ನಿತೇಶ್ ತಾಂಡೇಲ ಎನ್ನುವುದು ಪೊಲೀಸರಿಗೆ ಗೊತ್ತಾಗಿದೆ.
ಸತೀಶ್ ಕೊಲೆ ಪ್ರಕರಣವನ್ನು ಬೇಧಿಸಲು ಡಿವೈಎಸ್ಪಿ ಗಿರೀಶ್ ನೇತೃತ್ವದಲ್ಲಿ ಪಿಎಸ್ಐ ಕುಮಾರ ಕಾಂಬ್ಳೆ ಮತ್ತು ಪಿಎಸ್ಐ ರವೀಂದ್ರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಕೊಲೆ ನಡೆದಿರುವ ಐದೇ ನಿಮಿಷಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ವೊಂದು ನಿತೇಶ್ ಮೊಬೈಲ್ನಿಂದ ದರ್ಶನ್ ಅವರ ಮೊಬೈಲ್ಗೆ ಹೋಗಿರುವುದು ಪೊಲೀಸ್ ಇಲಾಖೆಯ ಸೊಷಿಯಲ್ ಮಿಡಿಯಾ ಮಾನೆಟರಿಂಗ್ ತಂಡಕ್ಕೆ ಲಭ್ಯವಾಯಿತು. ಅದರ ಆಧಾರದ ಮೇಲೆ ದರ್ಶನ್ ಅವರನ್ನು ತನಿಖಾ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಡೆದ ಕಥೆ ಗೊತ್ತಾಗಿದೆ.
ನಿತೇಶ್ ತಾಂಡೇಲ್, ನಿತ್ಯಾನಂದ ಹರಿಕಂತ್ರ, ಸುರೇಂದ್ರ ನಾಯ್ಕ ಮತ್ತು ದರ್ಶನ್ ಗೆಳೆಯರು. ಹತ್ಯೆಗೀಡಾದ ಸತೀಶ್ ಅವರು ನಗರಸಭೆಯ ಅಂಗಡಿಯೊಂದನ್ನು ಬಾಡಿಗೆಗೆ ಪಡೆದಿದ್ದರು. ಕಾನೂನಲ್ಲಿ ಅವಕಾಶ ಇಲ್ಲದೇ ಇದ್ದರೂ 4ಲಕ್ಷ ರೂಪಾಯಿ ಮುಂಗಡ ಹಣ ಮತ್ತು 30 ಸಾವಿರ ರೂಪಾಯಿ ಬಾಡಿಗೆಗೆ ಅದನ್ನು ಮೂರನೇ ವ್ಯಕ್ತಿ ಅಂದರೆ ನಿತೇಶ್ ತಾಂಡೇಲ ತೆಗೆದುಕೊಂಡಿದ್ದ. ಸುಮಾರು ಮೂರು ತಿಂಗಳು ಕಾಲ ಅಂಗಡಿ ನಡೆಸಿದ ನಿತೇಶ್ ಅವರು ವ್ಯಾಪಾರದಲ್ಲಿ ನಷ್ಟವಾಗಿದ್ದರಿಂದ ಅದನ್ನು ನಡೆಸಲು ಸಾಧ್ಯವಾಗುವುದಿಲ್ಲ ಎಂದು ಸತೀಶ್ ಅವರಿಗೆ ತಿಳಿಸಿ ಮುಂಗಡ ಹಣ ಮರಳಿಸಲು ಹೇಳಿದರು. ನಿನ್ನಿಂದ ನನಗೆ ನಷ್ಟವಾಯಿತು ಎಂದು ಸತೀಶ್ ಆ ಸಂದರ್ಭದಲ್ಲಿ ನಿತೇಶ್ಗೆ ಹೇಳಿದ್ದ. ಅಲ್ಲಿಂದ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಗಲಾಟೆ ಆರಂಭವಾಗಿತ್ತು.
ಇದೇ ವಿಷಯವಾಗಿ ಕಡಲತೀರದಲ್ಲಿ ಒಂದೆರಡು ಸಲ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿತ್ತು. ಗಲಾಟೆಯೂ ಆಗಿತ್ತು. ಆದರೆ, ಇದ್ಯಾವುದೂ ಪೊಲೀಸ್ ಠಾಣೆಗೆ ಬಂದಿರಲಿಲ್ಲ. ಕಳೆದ ವರ್ಷ ಸತೀಶ್ ಕೊಳಂಬಕರ ಅವರು ನಿತೇಶ್ಗೆ ಬಾಡಿಗೆ ನೀಡಿದ್ದ ಅಂಗಡಿಯ ಬೀಗ ಒಡೆದು ಅಂಗಡಿಯಲ್ಲಿದ್ದ ನಿತೇಶ್ಗೆ ಸೇರಿದ ಸಾಮಾನುಗಳನ್ನು ಹೊರಗೆ ಹಾಕಿ ಅಂಗಡಿಗೆ ಬೀಗ ಹಾಕಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಊರಿನ ಮುಖಂಡರು ಮೀಟಿಂಗ್ ಮಾಡಿ ಇಬ್ಬರ ನಡುವೆ ಆದ ವ್ಯವಹಾರದ ಬಗ್ಗೆ ಮಾತನಾಡಿ ನಿತೇಶ್ ಅವರಿಗೆ ನಷ್ಟವಾಗಿದೆ ಅವರ ಹಣವನ್ನು ಮರಳಿಸಿ ಎಂದು ಸತೀಶ್ಗೆ ತಿಳಿಸಿದ್ದರು. ಆದರೆ, ಸತೀಶ್ ಮಾತ್ರ ಹಣ ಮರಳಿಸಿರಲಿಲ್ಲ.
ನಂತರ ಪ್ರಕರಣ ಕಾರವಾರ ಠಾಣೆಗೆ ಬಂದಾಗ ಠಾಣೆಯ ಅಧಿಕಾರಿಗಳು ಪ್ರಕರಣ ಸಿವಿಲ್ ಸ್ವರೂಪದ್ದಾಗಿರುವುದರಿಂದ ಇದನ್ನು ಬೇರೆ ಕಡೆ ಪರಿಹಾರ ಮಾಡಿಕೊಳ್ಳಿ ಎಂದು ಹಿಂಬರಹ ಕೊಟ್ಟಿದ್ದರು. ಹೀಗೆ ಈ ಬೆಳವಣಿಗೆಯ ನಂತರ ಹಣಕಾಸಿನ ವ್ಯವಹಾರಕ್ಕೆ ಇಬ್ಬರ ನಡುವೆ ಗಲಾಟೆ ಹೀಗೆ ಮುಂದುವರಿದು ಸತೀಶ್ ಅವರು ನಿತೇಶ್ಗೆ ಮೂರು ಲಕ್ಷ 40 ಸಾವಿರ ರೂಪಾಯಿ ಮರಳಿಸಿದ್ದರು. 60 ಸಾವಿರ ರೂಪಾಯಿ ಕೊಡುವುದು ಬಾಕಿ ಇತ್ತು.
ಬಾಕಿ ಉಳಿಸಿಕೊಂಡಿದ್ದ 60 ಸಾವಿರ ಹಣವನ್ನು ಮರಳಿಸುವಂತೆ ನಿತೇಶ್ ಅವರು ಸತೀಶ್ಗೆ ಕೇಳುತ್ತಲೇ ಇದ್ದ. 60 ಸಾವಿರ ಕೊಡುವುದಿದೆ ಎಂದು ನಿತೇಶ್ ಊರೆಲ್ಲ ಹೇಳಿಕೊಂಡು ತನ್ನ ಗೌರವಕ್ಕೆ ಧಕ್ಕೆ ತಂದಿರುವ ಬಗ್ಗೆ ಸತೀಶ್ ಅವರು ನಿತೇಶ್ನನ್ನು ಹಲವಾರು ಬಾರಿ ತಡೆದು ಪ್ರಶ್ನಿಸಿರುತ್ತಾರೆ. ಆ ಸಂದರ್ಭದಲ್ಲಿಯೂ ಮಾತಿಗೆ ಮಾತು ಬೆಳೆದಿರುತ್ತದೆ ಅಲ್ಲಿಯೇ ತಣ್ಣಗಾಗಿರುತ್ತಿತ್ತು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಏಪ್ರಿಲ್ 6ರಂದು ನಗರದ ಹೊಟೆಲೊಂದರಲ್ಲಿ ಕುಳಿತಿದ್ದ ಸತೀಶ್ ಅವರು ಮಾತನಾಡುವುದಿದೆ ಎಂದು ನಿತೇಶ್ನನ್ನು ಅಲ್ಲಿ ಕರೆಯಿಸಿಕೊಂಡಿದ್ದಾನೆೆ. ಈ ಸಂದರ್ಭದಲ್ಲಿ ಮಾತನಾಡಿದ ಸತೀಶ್ `ನೀನು 60 ಸಾವಿರಕ್ಕಾಗಿ ನನ್ನ ಮಾನ ಮರ್ಯಾದೆ ತೆಗೆಯುತ್ತಿದ್ದೀಯಾ ಎಂದು ನಿತೇಶ್ನನ್ನು ಪ್ರಶ್ನಿಸುತ್ತಾನೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ನಿತೇಶ್ ತಾಂಡೇಲ ಅವರು ಹೊಟೆಲಿನಲ್ಲಿಯೇ ಸತೀಶ್ ಮೇಲೆ ಹಲ್ಲೆ ನಡೆಸುತ್ತಾರೆ. ಬಳಿಕ ತಣ್ಣಗಾಗಿ ಎಲ್ಲರೂ ಮನೆಗೆ ಹೋಗುತ್ತಾರೆ. ಅಂದು ನಡೆದ ಘಟನೆಯನು ಹೊಟೆಲ್ನವರು ಪೊಲೀಸರ ಗಮನಕ್ಕೆ ತಂದಿರುವುದಿಲ್ಲ.
ಘಟನೆಯ ಬಳಿಕ ಹೊಟೆಲ್ನ ಸಿಸಿಟಿವಿ ದೃಶ್ಯಗಳನ್ನು ನೋಡಿದಾಗ ಅಲ್ಲಿ ಗಲಾಟೆ ಆಗಿದ್ದು ಪೊಲೀಸರು ಕನ್ಫರ್ಮ್ ಮಾಡಿಕೊಂಡರು. ಹೊಟೆಲ್ನಲ್ಲಿ ಗಲಾಟೆ ನಡೆದ ಸಂದರ್ಭದಲ್ಲಿ ಸತೀಶ್ ಅವರು ನಿನ್ನನ್ನು ಮುಗಿಸುತ್ತೇನೆ ಎಂದು ನಿತೇಶ್ಗೆ ಬೆದರಿಕೆ ಹಾಕಿದ್ದಾರೆ. ನೀನು ನನಗೆ ಹೊಡೆದಿದ್ದೀಯಾ ಸುಪಾರಿ ಕೊಟ್ಟು ನಿನ್ನನ್ನು ಮುಗಿಸುತ್ತೇನೆ ಎಂದು ಧಮ್ಕಿ ಹಾಕಿದ್ದಾರೆ. ಬಳಿಕ ನಿತೇಶ್ ಅವರನ್ನು ಹೊಡೆಯಲು ಗೋವಾದ ರೊಮಿಯೊ ಎಂಬುವರಿಗೆ ಸತೀಶ್ ಸುಪಾರಿ ನೀಡಿದ್ದು ನಿನ್ನನ್ನು ಹೊಡೆಯಲು ಸುಪಾರಿ ಕೊಟ್ಟಿದ್ದೇನೆ. ಹುಷಾರಾಗಿರು ಎಂದು ಬೆದರಿಕೆ ಬಂದಿತ್ತು.
ಅಂದಿನಿಂದ ನಿತೇಶ್, ನಿತ್ಯಾನಂದ ಮತ್ತು ಸುರೇಂದ್ರ ನಾಯ್ಕ ಈ ಮೂವರು ಕುಳಿತು ಸುಪಾರಿ ಕೊಟ್ಟಿರುವ ಬಗ್ಗೆ ಚರ್ಚೆ ನಡೆಸುತ್ತಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಭಾನುವಾರ ಬೆಳಿಗ್ಗೆ ಸತೀಶ್ ಅವರೇ ನಿತೇಶ್ ಅವರನ್ನು ಸ್ಥಳಕ್ಕೆ ಕರೆಯಿಸಿಕೊಂಡಿದ್ದರು. ಸ್ಥಳಕ್ಕೆ ಬಂದ ನಿತೇಶ್ ಏನೋ ನನ್ನನ್ನು ಗುರಾಯಿಸಿ ನೋಡುತ್ತೀಯಾ ಎಂದು ಸತೀಶ್ ಕೇಳಿದ್ದಾನೆ. `ನಾನು ನಿನಗೇಕೆ ಗುರಾಯಿಸಲಿ ನನ್ನ ದುಡ್ಡು ಕೊಡು ಎಂದು ನಿತೇಶ್, ಸತೀಶ್ಗೆ ಹೇಳಿದ್ದಾನೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಹೆಲ್ಮೆಟ್ನಿಂದ ಸತೀಶ್ ಕೊಳಂಬಕರ್ ಬಡಿದಿದ್ದ. ತೀವ್ರ ಸಿಟ್ಟಿಗೆದ್ದ ನಿತೇಶ್ ಅವರು ಚಾಕು ತೆಗೆದುಕೊಂಡು ಮೂರು ಸಲ ಸತೀಶ್ಗೆ ಇರಿದಿದ್ದಾರೆ. ಸತೀಶ್ ನೆಲಕ್ಕೆ ಕುಸಿದು ಬಿದ್ದ ಬಳಿಕ ಚಾಕು ತೆಗೆದುಕೊಂಡು ತನ್ನ ಬೈಕ್ನಲ್ಲಿ ಬಸ್ ನಿಲ್ದಾಣದ ಸಮೀಪ ವಿರುವ ತನ್ನ ಅಜ್ಜಿಮನೆಗೆ ಹೋಗಿ ಸ್ನಾನ ಮಾಡಿ ತನ್ನ ಸ್ನೇಹಿತ ನಿತ್ಯಾನಂದನಿಗೆ ದೂರವಾಣಿ ಕರೆ ಮಾಡಿದ್ದ.
ನಿತ್ಯಾನಂದ ಬಳಿ ಮೊಬೈಲ್ ಇರದೇ ಇರುವುದರಿಂದ ನಿತ್ಯಾನಂದನ ಮಾವನಿಗೆ ಮೊಬೈಲ್ಗೆ ಕರೆ ಮಾಡಿ ನಿತ್ಯಾನಂದನನ್ನು ಬಸ್ ನಿಲ್ದಾಣಕ್ಕೆ ಕರೆಯಿಸಿಕೊಂಡರು ಇಬ್ಬರೂ ಸೇರಿ ಗೋವಾಕ್ಕೆ ಕಾಲ್ಕಿತ್ತಿದ್ದಾರೆ.
ನಿತ್ಯಾನಂದ ಬಂದ ಬಳಿಕ ಸುರೇಂದ್ರನನ್ನೂ ಅಲ್ಲಿಗೆ ಕರೆಯಿಸಿಕೊಳ್ಳುತ್ತಾರೆ. ಗೋವಾದಲ್ಲಿರುವ ಸ್ನೇಹಿತ ಸಮೀರ್ ನಾಯ್ಕ ಅವರನ್ನೂ ಅಲ್ಲಿಗೆ ಕರೆಯಿಸಿಕೊಂಡು ಎಲ್ಲರೂ ಸೇರಿ ಗೋವಾದ ಕಲ್ಲಂಗುಟ್ ಕಡಲತೀರದಲ್ಲಿ ಇರುವ ಬಾರ್ನಲ್ಲಿ ಪಾರ್ಟಿ ಮಾಡುತ್ತಾರೆ.
ಗೋವಾ ಕಡಲತೀರದಲ್ಲಿರುವ ವಿಷಯ ತನಿಖಾ ತಂಡದ ಕುಮಾರ ಕಾಂಬ್ಳೆ ಮತ್ತು ರವೀಂದ್ರ ಅವರಿಗೆ ಗೊತ್ತಾಗಿ ಅಲ್ಲಿಗೆ ತೆರಳಿದ ಪೊಲೀಸ್ ತಂಡ ಮೂವರನ್ನು ಬಂಧಿಸಿ ಕಾರವಾರಕ್ಕೆ ಕರೆದುಕೊಂಡು ಬರುತ್ತಾರೆ. ಪ್ರಾಥಮಿಕ ವಿಚಾರಣೆ ನಡೆಸಿದಾಗ ನಿತೇಶ್ ತಪ್ಪೊಪ್ಪಿಕೊಂಡಿದ್ದಾನೆ ಎಂದರು.
ಸತೀಶ್ಗೆ ಕೊಲೆ ಮಾಡಿದ್ದ ನಿತೇಶ್ ಚಾಕು ಎಲ್ಲಿಟ್ಟಿದ್ದ, ಬಟ್ಟೆ ಎಲ್ಲಿ ಬದಲಾಯಿಸಿದ್ದ ಮತ್ತು ಸ್ಕೂಟರ್ ಎಲ್ಲಿತ್ತು. ಬೈಕ್ ಎಲ್ಲಿ ಬಿಟ್ಟಿದ್ದರು. ಅಲ್ಲದೇ ಅವರು ಎಲ್ಲೆಲ್ಲಿ ಹೋಗಿದ್ದಾರೆ ಎನ್ನುವುದಕ್ಕೆ ಸಾಕ್ಷ್ಯದ ಅಗತ್ಯ ಇರುವ ಹಿನ್ನೆಲೆಯಲ್ಲಿ ಆರೋಪಿ ನಿತೇಶನ್ನನ್ನು ಮಂಗಳವಾರ ಸ್ಥಳ ಮಹಜರು ಮಾಡಲು ಗೋವಾದ ಕಲ್ಲಂಗುಟ್ ಕಡಲತೀರಕ್ಕೆ ಕರೆದುಕೊಂಡು ಹೋಗಲಾಗಿತ್ತು. ಗೋವಾದಿಂದ ರಾತ್ರಿ 7 ಗಂಟೆ ಸುಮಾರಿಗೆ ಮರಳಿ ಬರುತ್ತಿರುವ ಸಂದರ್ಭದಲ್ಲಿ ಮಾಜಾಳಿ ಗಡಿ ದಾಟಿದ ನಂತರ ದೇವತಿದೇವಸ್ಥಾನದ ಬಳಿ ಬಂದಾಗ ಮೂತ್ರವಿಸರ್ಜನೆ ಮಾಡುವುದಾಗಿ ನಿತೇಶ್ ಹೇಳಿದ್ದಾರೆ. ಮೂತ್ರವಿಸರ್ಜನೆ ಮಾಡಲು ಇಳಿದ ನಿತೇಶ್ ಅವರು ಪೊಲೀಸರನ್ನು ಯಾಮಾರಿಸಿ ತಪ್ಪಿಸಿಕೊಂಡು ಪರಾರಿಯಾಗಲು ಪ್ರಯತ್ನಿಸಿದ್ದಾರೆ.
ಪಿಎಸ್ಐ ಕುಮಾರ್ ಕಾಂಬ್ಳೆ, ಹೆಡ್ಕಾನ್ಸ್ಟೇಬಲ್ ಹಸನ್ ಕುಟ್ಟಿ ಮತ್ತು ಕಾನ್ಸ್ಟೇಬಲ್ ಸತೀಶಯ್ಯ ಅವರ ಮೇಲೆ ನಿತೇಶ್ ಅಲ್ಲಿ ನೆಲೆದ ಮೇಲೆ ಬಿದ್ದಿದ್ದ ಬಿಯರ್ ಬಾಟಲ್ನಿಂದ ಹಲ್ಲೆ ಮಾಡಿದ್ದಾನೆ. ಈ ಸಂದರ್ಭದಲ್ಲಿ ಪಿಎಸ್ಐ ಮತ್ತು ಕಾನ್ಸ್ಟೇಬಲ್ಗಳಿಗೆ ಗಾಯವಾಗಿದೆ. ತಕ್ಷಣವೇ ಪಿಎಸ್ಐ ಕುಮಾರ ಅವರು ಓಡಿ ಹೋಗದಂತೆ ಮನವೊಲಿಸಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಎರಡು ಬಾರಿ ಗುಂಡು ಹಾರಿಸಿದರೂ ಕೇಳದೇ ಇದ್ದಾಗ ಸ್ವಯಂ ರಕ್ಷಣೆಗಾಗಿ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹೊಡೆದಿದ್ದಾರೆ
ಎಂದು ಎಸ್ಪಿ ಅವರು ಹೇಳಿದ್ದಾರೆ.
ಈಗಾಗಲೇ ನೀನು ತಪ್ಪು ಮಾಡಿದ್ದೀಯಾ ಮತ್ತೆ ಏನು ಮಾಡಲು ಹೋಗಬೇಡ ಎಂದು ಪೊಲೀಸರು ಅನೇಕ ಬಾರಿ ತಿಳಿಸಿದರೂ ಆರೋಪಿ ನಿತೇಶ್ ಕೇಳಲಿಲ್ಲ.` ಸತೀಶ್ ಕೊಳಂಬಕರ್ ನನಗೆ ಅನ್ಯಾಯ ಮಾಡಿದ್ದಾನೆ. ನೀವೂ ನನಗೆ ಅನ್ಯಾಯ ಮಾಡುತ್ತಿದ್ದೀರಿ ಎಂದು ಹೇಳಿ ಹಲ್ಲೆಗೆ ಮುಂದಾದಾಗ ಪಿಎಸ್ಐ ಅವರು ನಿತೇಶನ್ ಅವರ ಎಡ ಕಾಲಿಗೆ ಗುಂಡು ಹೊಡೆದಿದ್ದಾರೆ ಎಂದು ಅವರು ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.