ಕಾರವಾರ : ಮನೆಯಲ್ಲಿ ಯಾವುದೇ ಶುಭ ಕಾರ್ಯಗಳು ಮಾಡೋದಾದ್ರೆ ಮೊದಲು ಗಣೇಶನನ್ನ ಆರಾಧಿಸೋದು ಸಾಮಾನ್ಯ. ಗಣಪನನ್ನ ನೆನೆದರೇ ಕಾರ್ಯ ಸಿದ್ದಿ ಗ್ಯಾರಂಟಿ.

ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅಮದಳ್ಳಿಯ ವೀರಗಣಪತಿ ದೇವರು ಭಕ್ತರ ಪಾಲಿನ ಶ್ರದ್ಧಾಕೇಂದ್ರವಾಗಿವೆ. ಈ ಕ್ಷೇತ್ರಕ್ಕೆ ಬಂದ್ರೆ ನಿಮ್ಮ ಇಷ್ಟಾರ್ಥಗಳು ಸಾಕಾರವಾಗುತ್ತೆ. ಸುಮಾರು ಎರಡು ಸಾವಿರ ವರ್ಷಗಳ ಹಿಂದಿನ ಉದ್ಭವ ಗಣಪತಿ. ಉತ್ತರಕನ್ನಡ ಜಿಲ್ಲೆಯ ಸುಂದರ ಪರಿಸರದ ನಡುವೆ ಹಲವು ದೇವಾಲಯಗಳಿವೆ. ಅಮದಳ್ಳಿಯ ಶ್ರೀ ವೀರಗಣಪತಿ ದೇವಾಲಯವೂ ಕೂಡ ಹಸಿರು ಪರಿಸರದ ನಡುವೆ ನೆಲೆನಿಂತಿದೆ.

ಗಣೇಶ ಧಾರ್ಮಿಕವಾಗಿ ಅಗ್ರ ಸ್ಥಾನ ಪಡೆದಿದ್ದಾನೆ.
ಇಲ್ಲಿನ ದೇವರು ಭಕ್ತರ ಪಾಲಿನ ಆರಾಧ್ಯ ದೈವ. ಕಾರವಾರ ಮತ್ತು ಅಂಕೋಲಾ ನಡುವೆ ರಾಷ್ಟ್ರೀಯ ಹೆದ್ದಾರಿ 66 ಪಕ್ಕದಲ್ಲಿ ಅಮದಳ್ಳಿಯಲ್ಲಿ ಶ್ರೀ ವೀರಗಣಪತಿ ದೇವಾಲಯವಿದೆ.

ರಾಜ್ಯದ ಕೆಲವೇ ಕೆಲವು ಉದ್ಬವ ದೇವಾಲಯಗಳಲ್ಲಿ ಈ ದೇವಾಲಯವೂ ಒಂದು. ಎರಡು ಸಾವಿರ ವರ್ಷಗಳ ಹಿಂದೆ ಗಣಪ ಇಲ್ಲಿ ನೆಲೆ ನಿಂತಿದ್ದಾನೆ. 1984ರಲ್ಲಿ ಇಲ್ಲಿ ದೇವಾಲಯ ಸ್ಥಾಪನೆಯಾಗಿದ್ದರ ಹಿಂದೆ ರೋಚಕ ಇತಿಹಾಸವಿದೆ. ನಿಸರ್ಗ ನಿರ್ಮಿತ ಈ ದೇವರ ವಿಗ್ರಹ. ಸಂಪೂರ್ಣ ಕಲ್ಲಿನ ಉದ್ಬವ ಮೂರ್ತಿಯಾಗಿದೆ.

ಉಡುಪಿ ಮೂಲದ ಸದ್ಯ ದಿವಂಗತರಾಗಿರುವ ಪಿ ಜಿ ನಾಯ್ಕ ಎಂಬ ಕಸ್ಟಮ್ ಅಧಿಕಾರಿಯೊಬ್ಬರು ಈ ಮಾರ್ಗದಲ್ಲಿ ತೆರಳುವಾಗ ವಾಹನ ಅವರ ಕೆಟ್ಟು ನಿಂತಿತಂತೆ. ಜೀಪ್ ರಿಪೇರಿ ಮಾಡುವ ವೇಳೆ ಈ ಭಾಗದಲ್ಲಿ ಓಡಾಡಿದಾಗ ಕಲ್ಲಿನ ಗಣಪತಿ ಮೂರ್ತಿ ಕಂಡು ಅಚ್ಚರಿಗೆ ಒಳಗಾಗಿದ್ದರು. ಕೆಲ ವರ್ಷಗಳ ಹಿಂದೆ ಅವರ ಕನಸಿನಲ್ಲಿ ಕಾಣಿಸಿದ ಗಣಪತಿ ಮೂರ್ತಿ ಇದೇ ರೀತಿಯಾಗಿ ಗೋಚರಿಸಿದ್ದರಿಂದ ಪ್ರಸಿದ್ದ ಜ್ಯೋತಿಷಿ ಬಳಿ ವಿಚಾರಿಸಿದಾಗ ಗಣಪತಿ ಇರೋದು ಖಚಿತಪಡಿಸಿದ್ದರು. ಜ್ಯೋತಿಷಿ ಅವರು ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ಒಳ್ಳೆಯದಾಗುತ್ತೆ ಎಂದಾಗ ಇಲ್ಲಿ ಪುಟ್ಟ ದೇವಾಲಯ ನಿರ್ಮಾಣವಾಗಿದೆ.

ಅಮದಳ್ಳಿಯ ವೀರ ಗಣಪತಿ ವಿಶಿಷ್ಟವಾದ ಶಕ್ತಿ ಹೊಂದಿದೆ. ಇಲ್ಲಿ ನಾಗದೇವತಾ, ಚೌಡೇಶ್ವರಿ, ಯಕ್ಷಿಣಿ ದೇವರ ಮೂರ್ತಿ ಇದೆ. ನಿತ್ಯ ಕುಂಕುಮಾರ್ಚನೆ, ಪಂಚಾಮೃತಾಭಿಷೇಕ, ಮಹಾಪೂಜೆ ನಡೆಯುತ್ತೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು, ಪ್ರಯಾಣಿಕರು, ಸ್ಥಳೀಯರು ದೇವರನ್ನ ಪೂಜಿಸಲು ಶುರು ಮಾಡಿದಾಗ ಈಗ ಪ್ರಸಿದ್ದ ಶಕ್ತಿ ದೇವಾಲಯವಾಗಿ ಮಾರ್ಪಾಟ್ಟಿದೆ.

ಬೇಡಿದ್ದನ್ನ ನೀಡುವ ಗಣನಾಯಕನ ಸನ್ನಿಧಿಗೆ ರಾಜ್ಯ ಮಾತ್ರವಲ್ಲ ಗೋವಾ, ಮಹರಾಷ್ಟ್ರ ವಿದೇಶಗಳಿಂದಲೂ ಭಕ್ತರು ಇಲ್ಲಿಗೆ ಆಗಮಿಸ್ತಾರೆ. ಅಮದಳ್ಳಿ ವೀರ ಗಣಪತಿ ದೇವರನ್ನ ಕಾಣಲು ಎರಡು ಕಣ್ಣುಗಳು ಸಾಲದು. ಭಕ್ತರು ಇಲ್ಲಿಗೆ ಬಂದು ಪ್ರಾರ್ಥನೆ ಮಾಡಿ, ಸುಖ, ಸಂತೋಷ, ನೆಮ್ಮದಿ ಕಾಣುತ್ತಾರೆ.

ಬೆಳಿಗ್ಗೆ ಐದು ಗಂಟೆಗೆ ದೇವಾಲಯ ಬಾಗಿಲು ತೆರೆಯುತ್ತದೆ.
ತ್ರಿಕಾಲ ಪೂಜೆ ನಡೆಸಲಾಗುತ್ತದೆ. ಪ್ರತಿ ಸೋಮವಾರ ವಿಶೇಷ ಪೂಜೆ, ಸಂಕಷ್ಟಿಯಂದು ವಿಶೇಷ ಸಂಭೃಮವಿರುತ್ತೆ. ಏಕಾದಶಿ ಹೊರತುಪಡಿಸಿ ಪ್ರತಿ ದಿನವೂ ಐದು ತೆಂಗಿನಕಾಯಿ ಗಣಹೋಮ ನಡೆಸಲಾಗುತ್ತೆ. ಭಕ್ತರು ತಮ್ಮ ಅಭಿಷ್ಟಗಳನ್ನ ಹೇಳಿಕೊಂಡರೆ ಪರಿಹಾರ ನೀಡುತ್ತಾನೆ ನಿತ್ಯ ಕುಂಕುಮಾರ್ಚನೆ, ಅಷ್ಟೋತ್ತರ ಅರ್ಚನೆ, ಸತ್ಯಗಣಪತಿ ವೃತ , ರಂಗಪೂಜೆ ಸೇವೆಯನ್ನ ಸಲ್ಲಿಸ್ತಾರೆ. ಭಕ್ತರು ಇಲ್ಲಿಗೆ ಬಂದು ಪ್ರಾರ್ಥಿಸಿದ್ದರೆ ಫಲ ಸಿಗೋದು ಗ್ಯಾರಂಟಿ.

ಉತ್ತರಕನ್ನಡ ಜಿಲ್ಲೆಯ ಖ್ಯಾತ ಗುತ್ತಿಗೆದಾರರಾದ ಜಿ ಕೆ ರಾಮ್ ಅವರ ಅಧ್ಯಕ್ಷತೆಯಲ್ಲಿ ದೇವಾಲಯ ಸಮಿತಿ ಸ್ಥಾಪನೆ ಮಾಡಲಾಗಿತ್ತು. ಸದ್ಯ ಅವರ ಪುತ್ರ ಜಿ ಕೆ ಶಿವಪ್ರಸಾದ ಅವರ ಅಧ್ಯಕ್ಷತೆಯಲ್ಲಿ ಸಮಿತಿ ನಡೆದುಕೊಂಡು ಬಂದಿದೆ. ಬರುವ ಭಕ್ತರಿಗೆ ನೆಮ್ಮದಿ ಸಿಗುವ ನಿಟ್ಟಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ. ದೇವಾಲಯದ ಪಕ್ಕದಲ್ಲಿ ಉದ್ಯಾನವನ ಮಾಡಲಾಗಿದೆ. 

ಬರುವ ಭಕ್ತರ ವಿಶ್ರಾಂತಿಗಾಗಿ ಆಸನದ ವ್ಯವಸ್ಥೆ ಮಾಡಲಾಗಿದೆ. ಜಾತ್ರೆಯ ಸಂದರ್ಭದಲ್ಲಿ ಕೇರಳ, ಆಂದ್ರಪ್ರದೇಶ, ತಮಿಳುನಾಡು, ಗೋವಾ ಭಾಗದ ಭಕ್ತರು ಬರುತ್ತಾರೆ. ಜಾತ್ರೆಯ ಸಂದರ್ಭದಲ್ಲಿ ನಿರಂತರವಾಗಿ ಅನ್ನಸಂತರ್ಪಣೆ ಮಾಡಲಾಗುತ್ತದೆ. ಸತತ 18 ವರ್ಷಗಳಿಂದ ಗೋವಾದ ಮಡಗಾಂವ ಮೂಲದ ಇಚ್ಛಿತ್ ಗುರುದಾಸ ತಳಾವಳಿಕರ್ ಅವರು ಅನ್ನಸಂತರ್ಪಣೆ ಕಾರ್ಯವನ್ನ ನಡೆಸಿಕೊಂಡು ಬಂದಿದ್ದಾರೆ.

ಕಾರವಾರದಿಂದ ಅಂಕೋಲಾ ಮಾರ್ಗವಾಗಿ ಅಮದಳ್ಳಿ 18 ಕಿಲೋಮೀಟರ್ ದೂರವಿದೆ. ಉದ್ಭವ ಗಣಪತಿ ದೇವರ ಶಕ್ತಿ ಅಪಾರವಾಗಿದ್ದು, ನೀವು ಕೂಡ ಭೇಟಿ ನೀಡಿ.

ಶ್ರೀ ವೀರಗಣಪತಿ ದೇವರ 40ನೇ ವಾರ್ಷಿಕ ಮಹೋತ್ಸವ:
ಇದೇ ಬರುವ ಮೇ 9 ಮತ್ತು 10ರಂದು ಶ್ರೀ ವೀರಗಣಪತಿ ದೇವರ 40 ನೇ ವಾರ್ಷಿಕ ಮಹೋತ್ಸವ ನಡೆಯಲಿದೆ. 9ರಂದು ಗುರುವಾರ ಬೆಳಿಗ್ಗೆ 10-30ಕ್ಕೆ ಸಾಮೂಹಿಕ ಗಣಪತಿ ವೃತ, 10 ರಂದು ಶುಕ್ರವಾರ ಅಕ್ಷಯ ತೃತೀಯ ದಿನದಂದು ಬೆಳಿಗ್ಗೆ 5-30ಕ್ಕೆ ಮಂಗಳಾರತಿ, 9-30ರಿಂದ 11-30 ಸಾಮೂಹಿಕ ಹಾಗೂ ಶ್ರೀ ದೇವಸ್ಥಾನದ ವತಿಯಿಂದ 108 ತೆಂಗಿನಕಾಯಿ ಗಣಹೋಮ ಮತ್ತು ಪೂರ್ಣಾಹುತಿ ನಡೆಯಲಿದೆ.

ಮಧ್ಯಾಹ್ನ 12ರಿಂದ 1-30ರವರೆಗೆ ಅಭಿಷೇಕ, ಮಹಾಪೂಜೆ ಮತ್ತು ಪ್ರಸಾದ ವಿತರಣೆ. ಬಳಿಕ 2 ಗಂಟೆಗೆ ಅನ್ನಸಂತರ್ಪಣೆ ಜರುಗಲಿದೆ. ಸಾಯಂಕಾಲ 7-30ರಿಂದ 8-30ರವರೆಗೆ ರಂಗಪೂಜೆ ಮತ್ತು ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ.

ಶ್ರೀದೇವರಿಗೆ ಗಣಹೋಮ, ಸತ್ಯಗಣಪತಿ ವೃತ ಮುಂತಾದ ವಿಶೇಷ ಸೇವೆ ಸಲ್ಲಿಸಬಯಸುವವರು ತಮ್ಮ ಹೆಸರನ್ನ ಶ್ರೀ ದೇವಸ್ಥಾನದಲ್ಲಿ ಮುಂಚಿತವಾಗಿ ನೊಂದಾಯಿಸಿಕೊಳ್ಳಬೇಕೆಂದು ಶ್ರೀ ವೀರಗಣಪತಿ ದೇವಾಲಯ ಸಮಿತಿಯ ಅಧ್ಯಕ್ಷರಾದ ಶಿವಪ್ರಸಾದ ಜಿ ಕೆ, ಉಪಾಧ್ಯಕ್ಷರಾದ ರವೀಂದ್ರ ಅಮದಳ್ಳಿ ಕಾರ್ಯದರ್ಶಿ ವಿ ಪಿ ಗಾಂವಕರ್, ಸದಸ್ಯರಾದ ಜಿ ಡಿ ಗೋವಿಂದಕುಮಾರ, ಮಾರುತಿ ಪಿ ಕೊಳಂಬಕರ, ನಾರಾಯಣ ವೈ ಖಾರ್ವಿ, ದಿವಾಕರ ಆರ್ ಅಮದಳ್ಳಿ, ಸುಭಾಷ್ ಎಸ್ ನಾಯ್ಕ ತಿಳಿಸಿದ್ದಾರೆ.