ಶಿರಸಿ: ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರಕ್ಕೆ ಜನರ ಸಾವು ತಮಾಷೆ ವಿಷಯವಾಗಿದೆ. ಹಿಂದಿನ ವಿಧಾನಸಭಾ ಚುನಾವಣೆ ಸಮಯದಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕುಮಟಾಕ್ಕೆ ಬಂದು ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು ಮಾಡುತ್ತೇವೆ ಎಂದು ಹೇಳಿದ್ದರು. ಲೋಕಸಭೆ ಚುನಾವಣೆಗೂ ಮುನ್ನ ಆಸ್ಪತ್ರೆ ಮೆಡಿಕಲ್ ಕಾಲೇಜು ಮಾಡುತ್ತೇವೆ ಎಂದು ಈಗ ಸುದ್ದಿನೇ ಇಲ್ಲ ಎಂದು ಕಾಂಗ್ರೆಸ್ ಸರಕಾರ- ಕ್ಕೆ ಮನುಷ್ಯತ್ವ ಇದೆಯೇ ಎಂದು ಸಾಮಾಜಿಕ ಹೋರಾಟಗಾರ ಹಾಗೂ ಬಿಜೆಪಿ ರೈತ ಮೋರ್ಚಾದ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ವೈಯಕ್ತಿಕವಾಗಿ ಮಂಕಾಳ ವೈದ್ಯರನ್ನು ಬಹಳ ಗೌರವಿಸುತ್ತೇನೆ. ಇತ್ತೀಚೆಗೆ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದೇನೆ. ನಿಮ್ಮ ಆಯಸ್ಸು ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡಿದ್ದೇನೆ. ಆದರೆ ಜಿಲ್ಲೆ ಅಭಿವೃದ್ಧಿ ವಿಚಾರದಲ್ಲಿ ಮಾತಾಡಲೇಬೇಕು ಅಲ್ಲವೇ? ಎಂದರು.
ಚುನಾವಣೆಗೂ ಮುನ್ನ ಸ್ವಂತ ಖರ್ಚಿನಿಂದ ಆಸ್ಪತ್ರೆ ಮಾಡುತ್ತೇನೆ ಎಂದು ಹೇಳಿದ ಸಚಿವರು, ಹೇಳುವುದು ಒಂದು ಮಾಡುವುದು ಇನ್ನೊಂದು, ಒಂದು ವರ್ಷವಾದರೂ ಆಸ್ಪತ್ರೆ ಸುದ್ದಿನೇ ಇಲ್ಲ. ಜಿಲ್ಲೆಯ ಜನರಿಗೆ ಕ್ಯಾನ್ಸರ್, ಹೃದಯ ಸಮಸ್ಯೆ ಬಂದರೂ ಮಂಗಳೂರು, ಹುಬ್ಬಳ್ಳಿ ಹೋಗಬೇಕು. ವಾಹನ ಅಪಘಾತ ಆಗಿ ತಲೆಗೆ ಪೆಟ್ಟು ಬಿದ್ದರೂ ಮಂಗಳೂರು ಹೋಗ ಬೇಕು, ವಾಹನ ಅಪಘಾತದಲ್ಲಿ ಮಂಗಳೂರು ಹೋಗಬೇಕಾದರೆ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಈಗಾಗಲೇ ವಾಹನ ಅಪಘಾತ ಜೀವ ಕಳೆದುಕೊಂಡ
ಕುಟುಂಬ ಎಷ್ಟು ಕಷ್ಟ ಪಡುತ್ತಿದ್ದಾರೆ ಎಂಬ ಕಲ್ಪನೆ ಇದೆಯೇ ? ಎಂದು ಅವರು ಪ್ರಶ್ನಿಸಿದರು.
ಇನ್ನು ಕಾಯಲು ಸಾಧ್ಯವಿಲ್ಲ. ತಾವು ಕುಮಟಾದಲ್ಲಿ ಹಿಂದೆ ಘೋಷಣೆ ಆಗಿದ್ದ ಆಸ್ಪತ್ರೆಗೆ ಹಣ ಬಿಡುಗಡೆ ಮಾಡಬೇಕು ಶಿರಸಿಯಲ್ಲಿ ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಸೆಂಟರ್ ಘೋಷಣೆ ಆಗಬೇಕು, ಬೇಕಾದರೆ ಖಾಸಗಿ ಮತ್ತು ಸರಕಾರಿ ಪಾಲುದಾರಿಕೆಯಲ್ಲಿ ಮಾಡಬಹುದು , ಅದಕ್ಕಾಗಿ ಸಮಿತಿ ರಚನೆ ಮಾಡಿ ಇನ್ನು 45 ದಿನ ಗಡುವು ನೀಡುತ್ತೇವೆ, ಅಷ್ಟರೊಳಗೆ ಘೋಷಣೆ ಆಗದೇ ಇದ್ದರೆ ಸಚಿವರ ಕಚೇರಿ ಎದುರು ಸತ್ಯಾಗ್ರಹ ಮಾಡುತ್ತೇನೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯೆ ರೇಖಾ ಹೆಗಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಷಾ ಹೆಗಡೆ, ಜಿಪಂ ಮಾಜಿ ಸದಸ್ಯೆ ಶೋಭಾ ನಾಯ್ಕ, ಶಿರಸಿ ನಗರ ಪ್ರಾಧಿಧಿಕಾರದ ಮಾಜಿ ಅಧ್ಯಕ್ಷ ನಂದನ ಸಾಗರ, ಜನಧ್ವನಿ ಸಂಘಟನೆಯ ಜಿಲ್ಲಾಧ್ಯಕ್ಷ ಉಮೇಶ್ ಹರಿಕಾಂತ ಉಪಸ್ಥಿತರಿದ್ದರು.