ಭಟ್ಕಳ :  ಬಸ್ ಹತ್ತುವ ಮೊದಲೇ ಚಾಲಕ ಬಸ್ ಚಲಾಯಿಸಿದ್ದರಿಂದ  ವಿದ್ಯಾರ್ಥಿನಿಯೋರ್ವಳು ಗಾಯಗೊಂಡ ಘಟನೆ ಭಟ್ಕಳ ತಾಲೂಕಿನ ಶಿರಾಲಿಯಲ್ಲಿ ನಡೆದಿದೆ. ಆಕ್ರೋಶಗೊಂಡ ನಾಗರಿಕರು ಬಸ್ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಟ್ಕಳ ತಾಲೂಕಿನ ಮೂಢ ಶಿರಾಲಿಯ ಚಿತ್ರಾ ಮಂಜುನಾಥ ನಾಯ್ಕ ಎನ್ನುವ ವಿದ್ಯಾರ್ಥಿನಿ ಬೈಂದೂರು ಪಿಯು ಕಾಲೇಜಿಗೆ ಹೋಗಬೇಕೆಂದು ಇಂದು ಬೆಳಿಗ್ಗೆ ಕಾಲೇಜಿಗೆ ತೆರಳಲು ಶಿರಾಲಿಯಲ್ಲಿ ಬಸ್ ಗೆ ಕಾಯುತ್ತಿದ್ದಳು. 7.15 ರ ಸುಮಾರಿಗೆ ಕುಮಟಾ ಕಡೆಯಿಂದ ಭಟ್ಕಳ ಕಡೆಗೆ ತೆರಳುತ್ತಿದ್ದ ಜನ ಸ್ನೇಹಿ ಬಸ್ ಶಿರಾಲಿಯಲ್ಲಿ ನಿಲ್ಲಿಸಿದೆ. ಭಟ್ಕಳದ ಕಡೆ ಶಾಲಾ ಕಾಲೇಜೆ ತೆರಳುವ ವಿದ್ಯಾರ್ಥಿಗಳೊಂದಿಗೆ ಈಕೆಯು ಕೂಡ ಬಸ್ ಹತ್ತಲು ಮುಂದಾಗಿದ್ದಾಳೆ.  ವಿದ್ಯಾರ್ಥಿನಿ ಬಸ್ ಹತ್ತುವ ಮೊದಲೇ  ಚಾಲಕ ಬಸ್ ಚಲಾಯಿಸಿದ್ದರಿಂದ  ವಿದ್ಯಾರ್ಥಿನಿ ಬಸ್ ಕೆಳಗಿನಿಂದ ಬಿದ್ದುಗಾಯಗೊಂಡಿದ್ದಾಳೆ. ಅದೃಷ್ಟವಾಶಾತ್  ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಬಸ್ ನಿಂದ ಕೆಳಕ್ಕೆ ಬಿದ್ದಿದರಿಂದ ವಿದ್ಯಾರ್ಥಿನಿಯ ಎರಡು ಮೊಣ ಕಾಲು ಮತ್ತು  ಮುಖದ ಗಲ್ಲಕ್ಕೆ ಗಾಯವಾಗಿದೆ. ತಕ್ಷಣ ಆಕೆಯನ್ನು ಶಿರಾಲಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದ್ದಾರೆ.

*ಭಟ್ಕಳ ಬಸ್ ನಿಲ್ದಾಣಕ್ಕೆ  ವಿದ್ಯಾರ್ಥಿನಿಯ ಪಾಲಕರ ಮುತ್ತಿಗೆ :
ಚಾಲಕ ನಿರ್ವಾಹಕರ ನಿರ್ಲಕ್ಷ ಖಂಡಿಸಿ ವಿದ್ಯಾರ್ಥಿನಿಯ ಪಾಲಕರು ಹಾಗೂ ಸಂಬಂಧಿಕರು ಭಟ್ಕಳ ಬಸ್ ನಿಲ್ದಾಣಕ್ಕೆ ಮುತ್ತಿಗೆ ಹಾಕಿದರು. ಸ್ಥಳಕ್ಕೆ ಡಿಪೋ ಮ್ಯಾನೇಜರ್ ಬರುವಂತೆ ಒತ್ತಾಯಿಸಿದರು. ನಂತರ ವಿಷಯ ತಿಳಿದು ಸ್ಥಳಕ್ಕೆ ಬಂದ ಡಿಪೋ ಮ್ಯಾನೇಜರ್ ದಿವಾಕರ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು. ಅಷ್ಟಕ್ಕೆ ಸುಮ್ಮನಾಗದ ವಿದ್ಯಾರ್ಥಿನಿಯ ಪಾಲಕರು ಸ್ಥಳಕ್ಕೆ ಬಸ್ ಚಾಲಕ ಹಾಗೂ ನಿರ್ವಾಹಕರನ್ನು ಕರೆಸುವಂತೆ ಪಟ್ಟು ಹಿಡಿದರು.  ನಂತರ ಸ್ಥಳಕ್ಕೆ ನಗರ ಠಾಣೆಯ ಪೊಲೀಸರು  ಪಾಲಕರನ್ನು ಸಮಾಧಾನ ಪಡಿಸಿದರು.

ನಂತರ ಮಾದ್ಯಮದವರೊಂದಿಗೆ ಮಾತನಾಡಿದ ವಿದ್ಯಾರ್ಥಿನಿಯ ತಾಯಿ ಮಂಗಳ,  ನನ್ನ ಮಗಳು ಬೆಳ್ಳಿಗ್ಗೆ ಬೈಂದೂರು ಕಾಲೇಜಿಗೆ ತೆರಳಲು ತನ್ನ ಇಬ್ಬರು ಸ್ನೇಹಿತರೊಂದಿಗೆ ಶಿರಾಲಿಯಿಂದ ಭಟ್ಕಳಕ್ಕೆ ಬರುವ ಬಸ್  ಹತ್ತುವ ಪೂರ್ವದಲ್ಲೇ ಬಸ್ ಚಾಲಕ ಬಸ್ ಚಲಾಯಿಸಿಕೊಂಡು ಮುಂದೆ ಸಾಗುವ ವೇಳೆ ಬಸ್ ನಿಂದ ಬಿದ್ದು ಗಾಯಗೊಂಡಿದ್ದಾಳೆ. ಇದನ್ನು ನೋಡಿದ ಆಕೆಯ ಇಬ್ಬರು ಸ್ನೇಹಿತರು ಕೂಡ ಬಸ್ ನಿಂದ ಕೆಳಗೆ ಇಳಿದು ಬಂದಿದ್ದಾರೆ. ಈ ರೀತಿಯ ಬೇಜವಾಬ್ದಾರಿಗೆ ಬಸ್ ಚಾಲಕ ಹಾಗೂ ನಿರ್ವಾಹಕ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಡಿಪೋ ಮ್ಯಾನೇಜರ್ ದಿವಾಕರ ಮಾತನಾಡಿ,  ಕಾಲೇಜಿಗೆ ತೆರಳುವ ವಿದ್ಯಾರ್ಥಿ ಬಸ್ ಹತ್ತುವ ವೇಳೆ ಬಸ್ ನಿಂದ ಬಿದ್ದು ಗಾಯಗೊಂಡಿದ್ದಾರೆ ಎಂದು ಭಟ್ಕಳ ಬಸ್ ನಿಲ್ದಾಣಕ್ಕೆ ಬಂದು ಆಕೆಯ ಪಾಲಕರು ದೂರು ನೀಡಿದ್ದಾರೆ. ಬಳಿಕ ಚಾಲಕರಿಗೆ ದೂರವಾಣಿ ಮೂಲಕ ಕರೆ ಮಾಡಿದಾಗ ಈ ಘಟನೆ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಸದ್ಯ ಅವರು ಕುಮಟಾಗೆ ತೆರಳಿದ್ದು ಪುನಃ ಭಟ್ಕಳಕ್ಕೆ ಬಂದ ನಂತರ ಪರಿಶೀಲನೆ ಮಾಡಿ ವಿದ್ಯಾರ್ಥಿನಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇನೆ ಅದೇ ರೀತಿ ಚಾಲಕರ ತಪ್ಪು ಕಂಡು ಬಂದರೆ ಅವರ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂದರು.