ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಅಂಕೋಲಾ (Ankola):  ತಮ್ಮ ಜಾನಪದ ಹಾಡುಗಳ ಮೂಲಕ  ಗಮನ ಸೆಳೆದಿದ್ದ ಪದ್ಮಶ್ರೀ ಸುಕ್ರಿ ಬೊಮ್ಮು ಗೌಡ ವಿಧಿವಶರಾಗಿದ್ದಾರೆ.

ಅವರಿಗೆ 91 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ದಿನಗಳಿಂದ ವಯೋ ಸಹಜ ಕಾಯಿಲೆಯಿಂದ ನರಳುತ್ತಿದ್ದ ಸುಕ್ರಿ ಗೌಡ ಇಂದು ಬೆಳಗಿನ ಜಾವ 2-30 ಗಂಟೆಗೆ ನಿಧನರಾದರು.

ಬುಡಕಟ್ಟು ಜನಾಂಗದ ಸುಕ್ರಿ ಗೌಡ ನೂರಾರು ಹಾಡುಗಳನ್ನ ಕಟ್ಟಿ ಹಾಡುತ್ತಿದ್ದರು. ಹೀಗಾಗಿ ಜಾನಪದ ಕೋಗಿಲೆ ಎಂದೇ ಖ್ಯಾತಿಯಾಗಿದ್ದರು. ಅಂಕೋಲಾ ತಾಲೂಕಿನ ಬಡಗೇರಿಯ ಹೆಸರನ್ನ ಇಡೀ ದೇಶಕ್ಕೆ ಪರಿಚಯಿಸಿದ್ದರು.
ಪುಗಡಿ ತರ್ಲೆ ಮುಂತಾದ ಹಾಲಕ್ಕಿಗಳ ಮತ್ತು ಜಿಲ್ಲೆಯ ಜನಪದ ಲೋಕದ ಸಾಧಕಿ ಆಗಿದ್ದ ಇವಳ ಪ್ರತಿಭೆಗೆ ಸಾವಿರಾರು ಸನ್ಮಾನ ಗೌರವಗಳ ಜೊತೆ 2017ರಲ್ಲಿ ರಾಷ್ಟ್ರದ ಉನ್ನತ ನಾಗರಿಕ ಗೌರವ ಪದ್ಮಶ್ರೀ ಪುರಸ್ಕಾರ ಒಲಿದು ಬಂದಿತ್ತು.

ಗಾಂಧೀಜಿ ಅವರ ಪರಿಕಲ್ಪನೆಯ ವ್ಯಸನಮುಕ್ತ ಸಮಾಜ ನಿರ್ಮಾಣದ ಕನಸಿನಿಂದ ಮದ್ಯಪಾನ ವಿರೋಧಿ ಹೋರಾಟದಲ್ಲಿ ಬಹುತೇಕ ಯಶಸ್ಸು ನೀಡಿದ್ದರು. ತಮ್ಮ ಗ್ರಾಮವನ್ನ ಮದ್ಯ ಮುಕ್ತ ಗ್ರಾಮವನ್ನಾಗಿ ಮಾಡಿದ್ದರು.

ಕೆಲ ತಿಂಗಳ ಹಿಂದೆ ಇನ್ನೋರ್ವ ಪದ್ಮಶ್ರೀ ಪುರಸ್ಕೃತೆ ತುಳಸೀ ಗೌಡ ಅವರನ್ನು ಕಳೆದುಕೊಂಡಿದ್ದ ಜಿಲ್ಲೆ ಈಗ ಸುಕ್ರಿ ಗೌಡರನ್ನು ಕಳೆದುಕೊಳ್ಳುವ ಮೂಲಕ ಹೀಗೆ ಎರಡು ಪದ್ಮಶ್ರೀ ಪುರಸ್ಕೃತರನ್ನು ಕಳೆದುಕೊಂಡಂತಾಗಿದೆ. ಮಧ್ಯಾಹ್ನದ ಬಳಿಕ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ನಡೆಯಲಿದೆ.

ಇದನ್ನು ಓದಿ : ಮೈಕ್ರೋ ಫೈನಾನ್ಸ್ ಆರ್ಭಟಕ್ಕೆ ಮುಗುದಾರ. ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ.