ಅಂಕೋಲಾ :  112 ನಂಬರಿನ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ ವ್ಯಕ್ತಿಯೋರ್ವ ಡಬಲ್ ಮರ್ಡರ್ ಆಗಿದೆ ಎಂದು ತಿಳಿಸಿದ್ದ. ಅಲರ್ಟ್ ಆದ ಪೊಲೀಸರು ಸ್ಥಳಕ್ಕೆ ಧಾವಿಸಿ  ಶವದ ಹುಡುಕಾಟ ನಡೆಸಿದ ಕುತೂಹಲಕಾರಿ ಘಟನೆ ತಾಲೂಕಿನ ಹಿಲ್ಲೂರಿನ ಬಿಲ್ಲನಬೈಲ್ ಗ್ರಾಮದಲ್ಲಿ ನಡೆದಿದೆ.

 ಹಿಲ್ಲೂರಿನ ಬಿಲ್ಲನಬೈಲನ ಮಂಜುನಾಥ ಬೊಮ್ಮಯ್ಯ naಯಕ ಎಂಬಾತ ಶುಕ್ರವಾರ ಸಂಜೆ  ಸಹಾಯವಾಣಿಗೆ ಕಾಲ್ ಮಾಡಿ ತನ್ನ ಪತ್ನಿ ಹಾಗೂ  ಮಗಳನ್ನು ಯಾರೋ ಭೀಕರವಾಗಿ ಕೊಲೆ ಮಾಡಿದ್ದಾರೆ. ನನಗೆ ಹೆದರಿಕೆ ಆಗ್ತಾ ಇದೆ ಎಂದು ತಿಳಿಸಿ ಕೂಡಲೆ ಸ್ಥಳಕ್ಕೆ ಬರುವಂತೆ ವಿನಂತಿಸಿದ್ದಾನೆ.

  ಕಾರವಾರದಿಂದ ವೈಯರಲೆಸ್ ಮೂಲಕ ಹೈ ಅಲರ್ಟ್ ಮಾಡಲಾಗಿತ್ತು.   ಕೂಡಲೆ ಅಂಕೋಲಾ ಪಿಎಸೈ ಉದ್ಧಪ್ಪ ಧರೆಪ್ಪನವರ್, ಎಎಸೈ ಲಲಿತಾ ರಜಪೂತ್ ಹಾಗೂ ಸಿಬ್ಬಂದಿ ಪ್ರವೀಣ ಪೂಜಾರ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿ,  37 ಕಿಮಿ ದೂರದ   ಹಿಲ್ಲೂರಿಗೆ ತೆರಳಿದ್ದರು. ಕರೆ ಮಾಡಿದ ಮಂಜುನಾಥ್ ಬೊಮ್ಮಯ್ಯ ನಾಯಕ ಅವರ ಮನೆಯ ಸುತ್ತಮುತ್ತ ಶವದ ಹುಡುಕಾಟ ನಡೆಸಿದ್ದರು. ಆದರೆ   ಶವ ಪತ್ತೆಯಾಗಿಲ್ಲ.


 ಅಲ್ಲಿಯೇ ಮುಗುಳ್ನಗುತ್ತಲೆ ಬಂದ  ಮಂಜುನಾಥ ನಾಯಕ ನಿಮಗೆ ನನ್ನ ಪತ್ನಿ ಹಾಗೂ ಮಗಳ ಶವ ಸಿಕ್ಕಿತೆ ಎಂದು ಪೊಲೀಸರಲ್ಲಿ ಪ್ರಶ್ನಿಸಿದ್ದಾನೆ. ಅದು ಸಿಗಲ್ಲಾ ಬಿಡಿ ಅವರು ಮುಂದೆ ಕೊಲೆ ಆದರೂ ಆಗಬಹುದು. ನಾನೆ ಮುನ್ನೆಚ್ಚರಿಕೆಯಾಗಿ ಕರೆ ಮಾಡಿದ್ದೆ. ಅವರ ಮನೆಯಲ್ಲಿ ಕಾಣಾತಾ ಇಲ್ಲಾ. ಹಾಗಾಗಿ ಸುಳ್ಳು ಕರೆ ಮಾಡಿದ್ದೆ ಎಂದು ಪೊಲೀಸರ ಮುಂದೆ ಹಲ್ಲು ಕಿರಿದು ನಕ್ಕಿದ್ದಾನೆ. ಇತನ ಮಾತು ಕೇಳಿ ಪಿತ್ತ ನೆತ್ತಿಗೆ ಏರಿ ನಾಲ್ಕು ಲಾಠಿ ಏಟು ನೀಡಿದ್ದಾರೆ. 

ಹಿಲ್ಲೂರು ಗ್ರಾಮದಲ್ಲಿ ಕೊಲೆಯಾಗಿದೆ ಎಂದು ವಿಷಯ ತಿಳಿದ ಕೂಡಲೆ ನೂರಾರು ಜನರು ಸ್ಥಳದಲ್ಲಿ ಜಮಾಯಿಸಿದ್ದರು. ಆದರೆ  ಆತ ಮಾನಸಿಕ ಅಸ್ವಸ್ಥನಾಗಿ ಕಳೆದೊಂದು ವರ್ಷದಿಂದ ಹೀಗೆ ಮಾಡುತ್ತಿದ್ದಾನೆ. ಈತನ ಕಿರುಕುಳದಿಂದ ಬೇಸತ್ತು ಪತ್ನಿ–ಮಕ್ಕಳು ಬೇರೆಯವರ ಮನೆಯಲ್ಲಿ ವಾಸ ಮಾಡುತ್ತಿರುವುದಾಗಿ ತಿಳಿದು ಬಂದಿದೆ.ಮಾನಸಿಕ ಅಸ್ವಸ್ಥ ಎಂದು ತಿಳಿದ ಪೊಲೀಸರು ಪುನಃ ಅಂಕೋಲಾ ಠಾಣೆಯತ್ತ ವಾಪಾಸ್ ಆಗಿದ್ದಾರೆ.

ಡಬಲ್ ಮರ್ಡರ್ ಪ್ರಕರಣವೆಂದು ಕಾರವಾರದಿಂದ ಶ್ವಾನದಳ, ಬೆರಳಚ್ಚು ತಜ್ಷರ ತಂಡ ಅಂಕೋಲಾಕ್ಕೆ ವಾಹನದಲ್ಲಿ ಆಗಮಿಸುತ್ತಿತ್ತು. ನಂತರ ಫೇಕ್ ಕಾಲ್ ಎಂದು ಗೊತ್ತಾಗುತ್ತಿದ್ದಂತೆ ವಾಪಾಸ್ ಬಂದಿದ್ದಾರೆ.