ಕಾರವಾರ : 2024ರ ಲೋಕಸಭ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಬಾರೀ ಮುನ್ನಡೆಯನ್ನ ಗಳಿಸಿದೆ. ಜೊತೆಗೆ ರಾಜ್ಯದಲ್ಲೂ ಕೂಡ ಅತೀ ಹೆಚ್ಚು ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಕರಾವಳಿಯ ಮೂರು ಕ್ಷೇತ್ರಗಳಲ್ಲಿ ಮತ್ತೆ ಪಾರಮ್ಯ ಮೆರೆಯೋ ಮೂಲಕ ಕಾಂಗ್ರೆಸ್ ನ್ನ ಮಖಾಡೆ ಮಲಗಿಸಿದ್ದಾರೆ.
ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಮತದಾರ ಬಿಜೆಪಿಗೆ ಸ್ಪಷ್ಟ ಚಿತ್ರಣ ನೀಡಿದ್ದಾನೆ. ಬಹು ನಿರೀಕ್ಷಿತ ಉತ್ತರಕನ್ನಡ ಕ್ಷೇತ್ರದಲ್ಲಿ ಮಾಜಿ ಶಾಸಕ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸತ್ ಪ್ರವೇಶಿಸಿದ್ದಾರೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸೋಲನ್ನಪ್ಪಿದ ಕಾಗೇರಿಗೆ ಬಿಜೆಪಿ ಮತ್ತೆ ಎಂಪಿ ಎಲೆಕ್ಷನ್ ಗೆ ಅವಕಾಶ ನೀಡಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಅಭಿಮಾನ, ದೇಶದ ಭದ್ರತೆ ಕಾರಣ, ಕಾರ್ಯಕರ್ತರ ಸಂಘಟಿತ ಪ್ರಯತ್ನದಿಂದ ಕಾಗೇರಿ ಬಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಬೆಳಿಗ್ಗೆ ಮತ ಎಣಿಕೆ ಆರಂಭದಿಂದ ಪ್ರತಿ ಸುತ್ತಿನಲ್ಲೂ ಕಾಗೇರಿ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಅವರಿಗಿಂತ ಹೆಚ್ಚು ಲೀಡ್ ಪಡೆದುಕೊಳ್ಳುತ್ತಾ ಸಾಗಿದರು. ಎಲ್ಲಾ 23 ಸುತ್ತುಗಳ ಬಳಿಕ ವಿಶ್ವೇಶ್ವರ ಕಾಗೇರಿ ಕೊನೆಯಲ್ಲಿ ಒಟ್ಟು 782495 ಮತಗಳನ್ನ ಪಡೆದುಕೊಂಡರು. ಕಾಂಗ್ರೆಸ್ ನ ಅಂಜಲಿ ನಿಂಬಾಳ್ಕರ್ ಒಟ್ಟು 445067 ಮತ ಗಳಿಸಲು ಶಕ್ತರಾದರು. ಒಟ್ಟು 337428 ಮತಗಳ ಬಾರೀ ಅಂತರದಿಂದ ಕಾಗೇರಿ ಜಯಭೇರಿ ಬಾರಿಸಿದ್ದಾರೆ.
ಅಂಚೆ ಮತಗಳು ಸಹ ಕಾಗೇರಿಗೆ ಹೆಚ್ಚು ಬಿದ್ದಿವೆ. ಬಿಜೆಪಿಗೆ 4608, ಕಾಂಗ್ರೆಸ್ ಗೆ ಒಟ್ಟು 1771 ಮತಗಳು ಸಂದಿವೆ.
ಇನ್ನೂ ಉಡುಪಿ -ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ನ ಕೆ ಜಯಪ್ರಕಾಶ್ ಹೆಗಡೆ ಅವರನ್ನ ಕೋಟ ಶ್ರೀನಿವಾಸ ಪೂಜಾರಿ ಸೋಲಿಸಿದ್ದಾರೆ. ಇನ್ನೂ ದಕ್ಷಿಣಕನ್ನಡದಲ್ಲಿ ಬಿಜೆಪಿ ಬ್ರಿಜೇಶ್ ಚೌಟ ಅವರು ಕಾಂಗ್ರೆಸ್ ನ ಪದ್ಮರಾಜ್ ಪೂಜಾರಿ ವಿರುದ್ಧ ಸುಮಾರು 149208 ಅಂತರಗಳಿಂದ ಗೆಲುವು ಸಾಧಿಸಿದ್ದಾರೆ.