ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹಳಿಯಾಳ (Haliyal): ಸರ್ಕಾರದಿಂದ ಅಂಗನವಾಡಿ ಮಕ್ಕಳಿಗೆ ಹಾಗೂ ಬಾಣಂತಿ ಮತ್ತು ಗರ್ಭಿಣಿ ಮಹಿಳೆಯರಿಗೆ ಉಚಿತವಾಗಿ ನೀಡುವ ಪೌಷ್ಟಿಕ ಆಹಾರ ದನದ ಕೊಟ್ಟಿಗೆಯಲ್ಲಿ ಪತ್ತೆಯಾದ ಘಟನೆ  ಬಿ.ಕೆ ಹಳ್ಳಿಯಲ್ಲಿ ನಡೆದಿದೆ. 

ಜಮೀನನಲ್ಲಿರುವ  ದನದ ಕೊಟ್ಟಿಗೆಯಲ್ಲಿ ಅಕ್ರಮವಾಗಿ ದಾಸ್ತಾನು ಇಡಲಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ದೂರು ದಾಖಲಾಗಿದೆ.

  ಖಚಿತ ಮಾಹಿತಿಯ ಮೇರೆಗೆ ತಹಶೀಲ್ದಾರ್ ಪ್ರವೀಣ್ ಹುಚ್ಚಣ್ಣನವರ ಹಾಗೂ ಸಿಪಿಐ ಜೈಪಾಲ್ ಪಾಟೀಲ್ ನೇತೃತ್ವದಲ್ಲಿ ದಾಳಿ ಮಾಡಲಾಗಿತ್ತು.

ಕಾವಲವಾಡದ ನಿವಾಸಿ ವಿಷ್ಣು ಮಿಶಾಳಿ ಮತ್ತು  ಬಿ.ಕೆ ಹಳ್ಳಿಯ ಸಹದೇವ ರುದ್ರಪ್ಪ ಗೌಡ ಇಬ್ಬರು ಸೇರಿ ಸರಕಾರದಿಂದ ಅಂಗನವಾಡಿ ಮಕ್ಕಳಿಗೆ ಉಚಿತವಾಗಿ ಪೂರೈಕೆಯಾಗುವ ಹಾಲಿನ‌ ಪುಡಿ ಮತ್ತು ಪುಷ್ಟಿ ಪುಡಿಗಳ ಪ್ಯಾಕೆಟ್ ಗಳನ್ನು ಅಕ್ರಮವಾಗಿ ಖರೀದಿಸಿದ್ದರು. ಬಳಿಕ ವಾಹನದಲ್ಲಿ  ಬಿ.ಕೆ ಹಳ್ಳಿ ಸರ್ವೆ ನಂಬರ್ 23ರಲ್ಲಿನ ಸಹದೇವ ರುದ್ರಪ್ಪಗೌಡ ಇವರ ಹೊಲದ ದನದ ಕೊಟ್ಟಿಗೆಯಲ್ಲಿ ದಾಸ್ತಾನು ಮಾಡುವ ಸಮಯದಲ್ಲಿ ತಹಶೀಲ್ದಾರ್ ಪ್ರವೀಣ್ ಹುಚ್ಚಣ್ಣನವರ ಹಾಗೂ ಸಿಪಿಐ ಜೈಪಾಲ್ ಪಾಟೀಲ್ ನೇತೃತ್ವದಲ್ಲಿ  ಅಧಿಕಾರಿಗಳ ಮತ್ತು ಪೊಲೀಸರ ತಂಡ ದಾಳಿಯನ್ನು ಮಾಡಿತ್ತು.

ದಾಳಿಯ ಸಂದರ್ಭದಲ್ಲಿ  35 ಚೀಲಗಳು ಹಾಲಿನ ಪುಡಿ,    205.4 ಕೆ.ಜಿ  ಪೌಷ್ಟಿಕ ಆಹಾರದ ಚೀಲ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ.ಕೆ.ಹಳ್ಳಿಯ ಸಹದೇವ ರುದ್ರಪ್ಪ ಗೌಡ ಮತ್ತು ಪಟ್ಟಣದ ದೇಶಪಾಂಡೆ ನಗರದ ನಿವಾಸಿ ಲಕ್ಷ್ಮಣ ನಾಗಪ್ಪ ಹುನಗಂದ ಅವರನ್ನ ಬಂಧಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ವಿಷ್ಣು ವಿಶಾಳಿ ಪರಾರಿಯಾಗಿದ್ದಾನೆ. ಈತ ಕಾಂಗ್ರೆಸ್ ಮುಖಂಡ ಎಂದು ಹೇಳಲಾಗಿದೆ.

ಪ್ರಮುಖ ಆರೋಪಿ ಕಾಂಗ್ರೆಸ್ ಮುಖಂಡ ಹಾಗೂ ಕಾವಲವಾಡ ಸಹಕಾರಿ ಸಂಘದ ಅಧ್ಯಕ್ಷ ವಿಷ್ಣು ಮಿಶಾಳಿ ಅಂಗನವಾಡಿಗಳಿಗೆ ಆಹಾರ ವಸ್ತುಗಳ ಪೂರೈಕೆಯನ್ನು ಗುತ್ತಿಗೆ ಪಡೆದಿದ್ದ ಎನ್ನಲಾಗಿದ್ದು   ಬಂಧನಕ್ಕಾಗಿ ಸಿಪಿಐ ಜೈಪಾಲ್ ಪಾಟೀಲ್ ಅವರ ನೇತೃತ್ವದಲ್ಲಿ ಪಿಎಸ್ಐ ವಿನೋದ್ ರೆಡ್ಡಿ ಅವರು ಬಲೆ ಬೀಸಿದ್ದಾರೆ.