ಅಂಕೋಲಾ: ಮಂಗಳಮುಖಿಯರ ವೇಷತೊಟ್ಟು ಹಣ ಕೀಳುತ್ತಿದ್ದ ಪುರುಷನೊಬ್ಬ ನೈಜ ಮಂಗಳಮುಖಿಯ ಕೈಗೆ ಸಿಕ್ಕಿಬಿದ್ದು ಗೂಸಾ ತಿಂದ ಘಟನೆ ನಡೆದಿದೆ.
ಸುರತ್ಕಲ್ ಮೂಲದ ವ್ಯಕ್ತಿ ಕಳೆದ ಕೆಲವು ದಿನಗಳಿಂದ ಮಂಗಳಮುಖಿಯರಂತೆ ಬಟ್ಟೆಗಳನ್ನು ಧರಿಸಿ ಗಡ್ಡ ಮೀಸೆ ಬೋಳಿಸಿಕೊಂಡು ಜಿಲ್ಲೆಯಾದ್ಯಂತ ಹಣ ಬೇಡುತ್ತಿದ್ದ. ಅಸಲಿ ಮಂಗಳಮುಖಿಯರು ತೆರಳುವ ಕೆಲವು ಸ್ಥಳಗಳಲ್ಲಿ ಅವರಿಗಿಂತ ಮುಂಚೆ ಹಣ ಪಡೆದುಕೊಂಡು ಕಣ್ಮರೆಯಾಗುತ್ತಿದ್ದ. ಮಂಗಳಮುಖಿಯರು ಅಂಗಡಿಗಳಿಗೆ ತೆರಳಿದಾಗ ಈಗಾಗಲೇ ಹಣ ನೀಡಿರುವುದಾಗಿ ಅಂಗಡಿಕಾರರು ತಿಳಿಸಿದ ವೇಳೆ ಯಾರೋ ಅಪರಿಚಿತರು ಮಂಗಳಮುಖಿಯರ ಹೆಸರಿನಲ್ಲಿ ಹಣ ಎತ್ತುತ್ತಿರುವುದು ತಿಳಿದು ಬಂದಿದೆ.
ಮುರುಡೇಶ್ವರದಲ್ಲಿ ಇದೇ ರೀತಿಯಾಗಿ ಅಂಗಡಿಗೆ ತೆರಳಿ ಮಂಗಳಮುಖಿಯರ ವೇಷದಲ್ಲಿ ಭಿಕ್ಷೆ ಸಂಗ್ರಹಿಸಿದ್ದ. ಮಂಗಳಮುಖಿಯರ ಸಂಘದವರು ನಕಲಿ ಮಂಗಳಮುಖಿಯರನ್ನು ಪತ್ತೆ ಹಚ್ಚಲು ಪ್ಲ್ಯಾನ್ ಮಾಡಿದ್ದರು.ನಿನ್ನೆ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯ ಅಂಗಡಿಯಲ್ಲಿ ಮಂಗಳಮುಖಿಯೆಂದು ಹೇಳಿಕೊಂಡು ಹಲವರಿಂದ ಹಣ ವಸೂಲಿ ಮಾಡಿದ್ದ. ಈ ನಡುವೆ ನಿಯಮಿತವಾಗಿ ಬರುವ ಮಂಗಳಮುಖಿಯರ ಪರಿಚಯಸ್ಥ ಬೆಳಂಬಾರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಾದೇವ ಗೌಡ ನಕಲಿ ಮಂಗಳಮುಖಿಯನ್ನು ಪತ್ತೆ ಮಾಡಿದ್ದಾರೆ. ಅವನ ಹಿಂದೆಯೇ ನಿಯಮಿತವಾಗಿ ಬರುವ ಮಂಗಳಮುಖಿ ಹಣ ಕೇಳಲು ಬಂದಾಗ ಅಂಗಡಿಕಾರರು ಈಗಾಗಲೇ ಹಣ ನೀಡಿದ್ದಾಗಿ ಹೇಳಿ ನಕಲಿ ಮಂಗಳಮುಖಿಯನ್ನು ತೋರಿಸಿದ್ದಾರೆ. ಸಿನಿಮಾ ಶೈಲಿಯಲ್ಲಿ ಬೆನ್ನತ್ತಿದ್ದ ನೈಜ ಮಂಗಳಮುಖಿ ವೇಷ ಧರಿಸಿದ ಪುರುಷನನ್ನು ಪಟ್ಟಣದ ಕ್ರೈಸ್ತ ಮಿತ್ರ ಚರ್ಚ್ ಬಳಿ ಹಿಡಿದು ಸಖತ್ ಗೂಸಾ ನೀಡಿದ್ದಾರೆ.
ವೇಷ ಧರಿಸಿದ ವ್ಯಕ್ತಿಯ ಬ್ಯಾಗ್ ಪರಿಶೀಲಿಸಿದಾಗ ಪುರುಷರ ಬಟ್ಟೆಗಳು ದೊರೆತಿದ್ದು, ಎಲ್ಲಿಯೂ ಕೆಲಸ ಸಿಗದೇ ಇದ್ದಾಗ ಈ ದಂಧೆಗೆ ಇಳಿದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ನಂತರ ಸಂಘದ ಮುಖ್ಯಸ್ಥೆಗೆ ಕರೆ ಮಾಡಿ ಈ ವಿಷಯ ತಿಳಿಸಿದಾಗ ಇನ್ನೊಮ್ಮೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.