ಉಡುಪಿ (Udupi): ಕರಾವಳಿಯಲ್ಲಿ ವರುಣ ಅಬ್ಬರಿಸಿ ಬೋಬ್ಬಿರಿಯುತ್ತಿದ್ದಾನೆ. ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕುಂದಾಪುರ (KUNDAPURA)ತಾಲೂಕಿನ ಕಮಲಶಿಲೆ ದೇವಸ್ಥಾನಕ್ಕೆ ನೀರು ನುಗ್ಗಿದೆ. ಬೆಳಗಿನ ಜಾವ ಮೂರುವರೆ ಸುಮಾರಿಗೆ ನದಿಯ ನೀರು ದೇವಿಯ ಚರಣ ಸ್ಪರ್ಶಿಸಿದೆ.

ಬಾರೀ ಮಳೆಯಿಂದಾಗಿ  ಬೈಂದೂರು(BYNDURU) ಶಿಕ್ಷಣ ವಲಯ ವ್ಯಾಪ್ತಿಗೆ ರಜೆ (HOLIDAY) ಘೋಷಿಸಲಾಗಿದೆ. ಧಾರಾಕಾರ ಮಳೆಯಿಂದ  ಸ್ವರ್ಣ ಸೀತಾ ಸೌಪರ್ಣಿಕ ನದಿ ತುಂಬಿ ಹರಿಯುತ್ತಿದೆ.  ಶ್ರೀ ಕ್ಷೇತ್ರ ಮಾರಣಕಟ್ಟೆ ದೇವಸ್ಥಾನಕ್ಕೆ ನದಿ ನೀರು ಬಂದಿದೆ. ಅಮಾವಾಸ್ಯೆಬೈಲು ವ್ಯಾಪ್ತಿಯಲ್ಲಿ ಭೀಕರ ಸುಂಟರಗಾಳಿಗೆ ಜನ ಕಂಗಾಲಾಗಿದ್ದಾರೆ.  ರಟ್ಟಾಡಿ ನಂಜಿನ ಹಾಡಿ ಕತ್ಗೋಡು ಎಂಬಲ್ಲಿ ಮನೆಯ ಮೇಲೆ  ಮರ ಬಿದ್ದ ಪರಿಣಾಮವಾಗಿ  ಹಂಚಿನ ಮನೆಗೆ ಸಂಪೂರ್ಣ ಹಾನಿಯಾಗಿದೆ. ಮನೆ ಕಳೆದುಕೊಂಡು ಕಂಗಾಲಾಗಿರುವ  ದುರ್ಗಿ ಅವರ ಕುಟುಂಬ ಅತಂತ್ರವಾಗಿದೆ.  ಸ್ಥಳಕ್ಕೆ ತಹಶೀಲ್ದಾರ್ ಶೋಭಲಕ್ಷ್ಮಿ, ಅಮಾವಾಸೈ ಬೈಲ್ ಪಿಡಿಓ ಸ್ವಾಮೀನಾಥನ್, ಗ್ರಾಮ ಪಂಚಾಯತಿ ಸದಸ್ಯ ಜಯಪ್ರಕಾಶ್ ಶೆಟ್ಟಿ ಭೇಟಿ ನೀಡಿದ್ದಾರೆ.

ಚಿಕ್ಕಮಗಳೂರು(CHIKAMANGLORE) ಜಿಲ್ಲೆಯಲ್ಲಿ ರಾತ್ರಿ ಬಿದ್ದ ಮಳೆಗೆ ಶೃಂಗೇರಿ (SHRUNGERI) ಯ ಕೆರೆಕಟ್ಟೆ ಘಟ್ಟಪ್ರದೇಶದಲ್ಲಿ  ತುಂಗಾ ನದಿ ಭರ್ತಿಯಾಗಿದೆ. ಮಳೆ ಮುಂದುವರೆದರೆ ತುಂಗಾ ನದಿ ಇಕ್ಕೆಲಗಳ ತೋಟಗಳು ಜಲಾವೃತ‌ವಾಗಲಿದೆ. ಪಶ್ವಿಮ ಘಟ್ಟಗಳ ಸಾಲಿನಲ್ಲಿ ಧಾರಕಾರ ಮಳೆಯಾಗಿದ್ದರಿಂದ ಹೆಬ್ಬಾಳೆ ಸೇತುವೆ ಸಮೀಪ ಆಪಾಯ ಮಟ್ಟದಲ್ಲಿ ಹರಿಯುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಾರೀ ಮಳೆಯಾಗುತ್ತಿದ್ದು, ಸಮುದ್ರ ಪ್ರಕ್ಷುಬ್ಧಗೊಂಡಿದೆ. ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಮಂಗಳೂರಿನ ಕುಳಾಯಿಯಲ್ಲಿ,  ನಿರ್ಮಾಣ ಹಂತದ ಜೆಟ್ಟಿಯ ಒಂದು ಭಾಗವೇ ಕುಸಿದು ಹೋಗಿದೆ. 

ಶಿವಮೊಗ್ಗ (SHIMOGGA) ಜಿಲ್ಲೆಯಲ್ಲಿ  ಸುರಿದ ಧಾರಾಕಾರ ಮಳೆಯಿಂದ  ಹತ್ತಾರು ವಿದ್ಯುತ್ ಕಂಬಗಳು ಕೆಳಕ್ಕೆ ಬಿದ್ದಿದೆ. ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ  ವಿದ್ಯುತ್ ಕಂಬಗಳು ಬಿದ್ದಿದರಿಂದ  ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.