ದಾಂಡೇಲಿ: ಅಕ್ರಮವಾಗಿ ಕಟ್ಟಿಟ್ಟಿದ್ದ 22 ಜಾನುವಾರುಗಳನ್ನು ಹಿಂದೂಪರ ಸಂಘಟನೆಗಳ ಮತ್ತು ಪೋಲಿಸರ ಸಹಕಾರದಿಂದ ರಕ್ಷಣೆ ಮಾಡಿದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಅನಧಿಕೃತವಾಗಿ ಗೋವುಗಳನ್ನು ಹಾಗೂ ಸಣ್ಣ ಕರುಗಳನ್ನು 3ನಂ ಗೇಟ್ ವ್ಯಾಪ್ತಿಯ ಪಂಪ್ ಹೌಸ್ ಹತ್ತಿರ ಖಾಲಿ ಜಾಗದಲ್ಲಿ ಕಟ್ಟಿ ಇಟ್ಟಿರಬಹುದೆಂದು ಹಿಂದೂಪರ ಸಂಘಟನೆಯವರು ಪೋಲಿಸರಿಗೆ ಮಾಹಿತಿ ನೀಡಿದ್ದರು. ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಅಕ್ರಮ ಜಾನುವಾರುಗಳ ರಕ್ಷಣೆಗೆ ಅಗತ್ಯ ಕ್ರಮವನ್ನು ಕೈಗೊಂಡಿದ್ದಾರೆ.
ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸ್ಥಳದಲ್ಲಿ ಜಮಾವಣೆಗೊಂಡು ಗೋವುಗಳ ರಕ್ಷಣೆಗೆ ಆಗ್ರಹಿಸಿದರು. ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಪೋಲಿಸರು ಬಿಗಿ ಬಂದೊಬಸ್ತ್ ಮಾಡಿದ್ದಾರೆ. ಈ ವೇಳೆ ಹಿಂದೂಪರ ಸಂಘಟನೆಗಳ ಮುಖಂಡರು ಹಾಗೂ ಪೋಲಿಸರ ನಡುವೆ ಮಾತಿನ ಚಕಮಕಿ ನಡೆಯಿತು.
ಹಿಂದೂ ಸಮಾಜೋತ್ಸವ ಸಮಿತಿಯ ಅಧ್ಯಕ್ಷ ವಾಸುದೇವ ಪ್ರಭು, ಮುಖಂಡರಾದ ರೋಶನ್ ನೇತ್ರಾವಳಿ, ಗುರು ಮಠಪತಿ, ಬುದ್ಧಿವಂತ ಗೌಡ ಪಾಟೀಲ್ ಅವರು ಯಾವುದೇ ಕಾರಣಕ್ಕೂ ಜಾನುವಾರುಗಳನ್ನು ವಧೆ ಮಾಡುವಂತಿಲ್ಲ. ಅವುಗಳ ಜೀವದ ರಕ್ಷಣೆಗೆ ಅಗತ್ಯ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಹಿಂದೂ ಸಮಾಜದ ಮುಖಂಡ ರೋಶನ್ ನೇತ್ರಾವಳಿ, ಜಾನುವಾರುಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳದೆ ಇದ್ದ ಪಕ್ಷದಲ್ಲಿ ಇದಕ್ಕೆ ಪೊಲೀಸರು ನೇರ ಕಾರಣರಾಗುತ್ತಾರೆ. ಇವುಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವ ಸಂಪೂರ್ಣ ಜವಾಬ್ದಾರಿ ಪೋಲಿಸ್ ಇಲಾಖೆಯದಾಗಿದ್ದು, ಗೋಶಾಲೆಗೆ ಕಳುಹಿಸಿ ಉಳಿದಿರುವ 17 ಜಾನುವಾರುಗಳ ಬಗ್ಗೆ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಚಿತ್ರ ಸಹಿತ ಸೂಕ್ತ ದಾಖಲಾತಿಗಳೊಂದಿಗೆ, ಯಾರಿಗೆ ಮತ್ತು ಎಲ್ಲಿಗೆ ನೀಡಲಾಯಿತು ಎನ್ನುವುದರ ಬಗ್ಗೆಯೂ ಸೂಕ್ತ ದಾಖಲಾತಿಯೊಂದಿಗೆ ಮಾಹಿತಿಯನ್ನು ನೀಡಬೇಕು. ಒಂದು ವೇಳೆ ಇವುಗಳ ರಕ್ಷಣೆಗೆ ಅಗತ್ಯ ಕ್ರಮವನ್ನು ಕೈಗೊಳ್ಳದೆ ಇದ್ದ ಪಕ್ಷದಲ್ಲಿ ಉಗ್ರ ಹೋರಾಟವನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು.
ಜಾನುವಾರುಗಳ ಜೀವದ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವ ಸಂಪೂರ್ಣ ಜವಾಬ್ದಾರಿ ಪೊಲೀಸ್ ಇಲಾಖೆಯದ್ದಾಗಿದ್ದು, ಇದರಲ್ಲಿ ವಿಫಲವಾದಲ್ಲಿ ಹೋರಾಟ ಮಾಡಲಾಗುತ್ತದೆ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಮಾಜಿ ಶಾಸಕರಾದ ಸುನಿಲ್ ಹೆಗಡೆ ಅವರು ಪೊಲೀಸರಿಗೆ ಎಚ್ಚರಿಕೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಸಿ.ಪಿ.ಐ ಭೀಮಣ್ಣ ಎಂ ಸೂರಿ, ಅವರು ಸೇರಿದ ನಾಗರಿಕರಿಗೆ, ಅಕ್ರಮವಾಗಿ ಕಟ್ಟಿರುವ ಜಾನುವಾರುಗಳನ್ನು ವಧೆ ಮಾಡಲು ಅವಕಾಶವಿಲ್ಲ. ಪಶು ವೈದ್ಯರನ್ನು ಕರೆಸಿ ಎಲ್ಲಾ ಜಾನುವಾರುಗಳನ್ನು ಪರಿಶೀಲಿಸಿ, ಅವರಿಂದ ವರದಿಯನ್ನು ಪಡೆದುಕೊಳ್ಳಲಾಗುವುದು. ಎಲ್ಲ ಜಾನುವಾರುಗಳ ಬಗ್ಗೆ ಅಗತ್ಯ ದಾಖಲಾತಿಗಳನ್ನು ಪಡೆದುಕೊಂಡು ಅವುಗಳ ರಕ್ಷಣೆಗೆ ಅಗತ್ಯ ಕ್ರಮವನ್ನು ಕೈಗೊಳ್ಳುವ ಭರವಸೆಯನ್ನು ನೀಡಿದರು. ಆನಂತರ ಪಶು ವೈದ್ಯರು ಸ್ಥಳಕ್ಕೆ ಬಂದು ಜಾನುವಾರುಗಳ ವಯಸ್ಸು, ಆರೋಗ್ಯದ ಸ್ಥಿತಿಯನ್ನು ಪರಿಶೀಲಿಸಿದರು.
ಅಕ್ರಮವಾಗಿ ಕಟ್ಟಿಟ್ಟಿದ್ದ 22 ಜಾನುವಾರುಗಳ ಪೈಕಿ ಒಟ್ಟು 5 ಕರುಗಳನ್ನು ಹಳಿಯಾಳ ತಾಲೂಕಿನ ದುಸಗಿಯ ಗೋಶಾಲೆಗೆ ರವಾನಿಸಲಾಯ್ತು. ಒಂದು ಕೋಣ ಸೇರಿ 17 ಜಾನುವಾರಗಳ ಬಗ್ಗೆ 3ನಂ ಗೇಟ್ ವ್ಯಾಪ್ತಿಯ ಪಂಪ್ ಹೌಸ್ ಹತ್ತಿರದ ನಿವಾಸಿಗಳಾದ ಮಹ್ಮದ ಗೌಸ ಉಮರ ಕೊಟ್ಟಾನ್ ಹಾಗೂ ಉಮರ ಮಹ್ಮದ ಅಕ್ಬರ ಕೊಟ್ಟಾನ್ ಅವರಿಗೆ ಅಧಿಕೃತ ದಾಖಲೆಗಳನ್ನು ಹಾಜರೂಪಡಿಸುವಂತೆ ನೋಟಿಸ್ ನೀಡಲಾಗಿದೆ.
ಸ್ಥಳದಲ್ಲಿ ದಾಂಡೇಲಿ ಸಿಪಿಐ ಭೀಮಣ್ಣ.ಎಂ.ಸೂರಿ, ಹಳಿಯಾಳ ಸಿಪಿಐ ಜಯಪಾಲ್ ಪಾಟೀಲ್, ಪಿಎಸ್ಐಗಳಾದ ಐ.ಆರ್.ಗಡ್ಡೆಕರ, ಕೃಷ್ಣ ಅರಕೇರಿ, ಜಗದೀಶ, ರವೀಂದ್ರ ಬಿರದಾರ್, ಅಮೀನ್ ಅತ್ತಾರ್, ರಾಜಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸ್ಥಳಕ್ಕೆ ಪ್ರಭಾರಿ ತಹಶೀಲ್ದಾರ್ ಮಂಜುನಾಥ ಮುನ್ನೊಳ್ಳಿ ಅವರು ಭೇಟಿ ನೀಡಿದರು.