ಕಾರವಾರ: ತಾಂತ್ರಿಕತೆ, ವೈಜ್ಞಾನಿಕತೆಯಿಂದಾಗಿ ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿದೆ. ಮೊಬೈಲ್‌ಗೆ ಗೀಳಿನಲ್ಲಿ ಅಂಗಳಕ್ಕಿಳಿಯಲೂ ಹಿಂದೆ ಮುಂದೆ ನೋಡುವ ಮಕ್ಕಳು, ಯುವಕರನ್ನು ಗ್ರಾಮೀಣ ಕ್ರೀಡೆಗಳತ್ತ ಆಕರ್ಷಿಸಬೇಕೆನ್ನುವ  ನಿಟ್ಟಿನಲ್ಲಿ ಕಾರವಾರ ತಾಲೂಕಿನ ದೇವಳಮಕ್ಕಿ ಗ್ರಾಮದಲ್ಲಿ ಮೂರನೇ ಬಾರಿಗೆ  ಕೆಸರುಗದ್ದೆ ಕ್ರೀಡಾಕೂಟ ಆಯೋಜಿಸಲಾಯಿತು.

       ಗ್ರಾಮೀಣ ಕ್ರೀಡೆಯನ್ನು ಉಳಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇರವಡಿ, ದೇವಳಮಕ್ಕಿ, ವೈಲವಾಡ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರಿಗೆ  ಆಯೋಜಿಸಲಾಗಿದ್ದ ಗ್ರಾಮೀಣ ಕ್ರೀಡಾಕೂಟದಲ್ಲಿ ನೂರಾರು ಜನರು ಆಟವಾಡಿ ಸಂಭ್ರಮಿಸಿದರು.

      ಈ ಹಿಂದೆ ಕಾರವಾರದಲ್ಲಿ ಕೃಷಿ ಚಟುವಟಿಕೆ ಮಾಡುವವರ ಸಂಖ್ಯೆ ಕಡಿಮೆಯಾಗಿ ಕೃಷಿ ಭೂಮಿಗಳು ಬರಡಾಗತೊಡಗಿತ್ತು. ಆದರೆ ಇದೀಗ ಒಂದಿಷ್ಟು ಯುವಕರು ಕೃಷಿ ಚಟುವಟಿಕೆಯತ್ತ ಮುಖ ಮಾಡಿದ್ದಾರೆ. ಗೋವಾ ಸೇರಿದಂತೆ ವಿವಿಧೆಡೆ ಉದ್ಯೋಗದಲ್ಲಿದ್ದವರು ಮನೆಗೆ ಬಂದು ಕೃಷಿಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಅಂತಹ ಯುವ ಉತ್ಸಾಹಿ ಯುವಕರು ಇದೀಗ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಗ್ರಾಮಸ್ಥರನ್ನು ಕೃಷಿಯತ್ತ ಹುರಿದುಂಬಿಸಿದ್ದಾರೆ.

        ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಓಟ ಮತ್ತು  ಚಮಚ-ಲಿಂಬೆಹಣ್ಣು ನಡಿಗೆ ಸ್ವರ್ಧೆ, ಪುರುಷರಿಗೆ  ವಾಲಿಬಾಲ್ ಹಾಗೂ ಹಗ್ಗಜಗ್ಗಾಟ ಏರ್ಪಡಿಸಲಾಗಿತ್ತು. ಪುರುಷರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಶ್ರೀ ಬ್ರಹ್ಮದೇವ ನಾಯ್ತಿವಾಡದ ದೀಪಕ ಹಳದೀಪುರ ತಂಡ ಚಾಂಪಿಯನ್, ರನ್ನರ್ ಅಪ್ ಆಗಿ ದೇವಳಮಕ್ಕಿ ಬಾಯ್ಸ್ ವಾಲಿಬಾಲ್‌ ಕ್ರೀಡೆಯಲ್ಲಿ ನಿವಳಿ ಗ್ರಾಮದ ತಂಡ ಸತತವಾಗಿ ಮೂರು ಬಾರಿ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿದೆ. ರನ್ನರ್ ಅಪ್ ಆಗಿ ನಾರಾಯಣ ತಂಡ ಕೋವೆ ತಂಡ  ಪಡೆದುಕೊಂಡಿತು.

         ಕ್ರೀಡಾಕೂಟದ ವೇದಿಕೆ ಕಾರ್ಯಕ್ರಮದಲ್ಲಿ ದೇವಳಮಕ್ಕಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ವನಶ್ರೀ ಕುಲಕರ್ಣಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಗೌಡ, ಸದಸ್ಯರಾದ ಪ್ರತಿಕ್ಷಾ ವೈಂಗಣಕರ, ಗ್ರಾಮಸ್ಥರಾದ ದೇವಿದಾಸ ದೇಸಾಯಿ, ಮರಿ ಗೌಡ, ಮೋಹನ ಕಾಣಕೂಣಕರ, ಶಿವಾನಂದ ಕಾಣಕೂಣಕರ, ರೂಪೇಶ್ ನಾಯ್ಕ, ಕೃಷ್ಣಾನಂದ ಕೊಳಂಬಕರ, ಮಂಜುನಾಥ ಕೊಳಂಬಕರ ಹಾಗೂ ಕೆಸರುಗದ್ದೆ ಕ್ರೀಡಾಕೂಟದ ಆಯೋಜಕರ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.