ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news)ಹೊನ್ನಾವರ(Honnavar) : ತಾಲೂಕಿನ ಮಾಳ್ಕೋಡ ಕೆಳಗಿನ ಇಡಗುಂಜಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ತರ ಸಂಭ್ರಮದ ವರ್ಷಾಚರಣೆ ನಡೆಸುವುದಕ್ಕೆ ತೀರ್ಮಾನಿಸಲಾಗಿದೆ. ಸಂಭ್ರಮಾಚರಣೆಯ ಪೂರ್ವದಲ್ಲಿ ನಿರಂತರವಾಗಿ ವಿವಿಧ ಕಾರ್ಯಕ್ರಮಗಳ ಆಯೋಜಿಸುವುದು, ಹಳೆಯ ವಿದ್ಯಾರ್ಥಿಗಳ ಸಂಪರ್ಕ ಅಭಿಯಾನ ನಡೆಸಿ ಹಳೆ ವಿದ್ಯಾರ್ಥಿಗಳನ್ನು ಸಂಘಟಿಸುವುದು, ಶಾಲೆಯ ಮೂಲಭೂತ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಜನಪ್ರತಿನಿಧಿಗಳ ಹಾಗೂ ದಾನಿಗಳ ಸಹಕಾರದೊಂದಿಗೆ ನಡೆಸುವುದಕ್ಕೆ ನಿರ್ಣಯಿಸಲಾಗಿದೆ.
ಶಾಲೆಯ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ನಾಗರಾಜ ನಾಯ್ಕ ಮಾಳ್ಕೋಡ ರವರ ಅಧ್ಯಕ್ಷತೆಯಲ್ಲಿ ನಡೆದ ಚಿಂತನಾ ಸಭೆಯಲ್ಲಿ ಈ ಕುರಿತು ನಿರ್ಣಯಗಳನ್ನು ಕೈಗೊಳ್ಳಲಾಯಿತು. ೧೦೦ ಕ್ಕೂ ಹೆಚ್ಚು ವಸಂತಗಳನ್ನು ಪೂರೈಸಿರುವ ಶಾಲೆಯ ಶತಮಾನೋತ್ತರ ಸಂಭ್ರಮಾಚರಣೆಯನ್ನು ಮುಂದಿನ ಡಿಸೆಂಬರ್-ಜನವರಿ ತಿಂಗಳಲ್ಲಿ ನಡೆಸುವುದಕ್ಕೆ ತೀರ್ಮಾನಿಸಲಾಗಿದೆ. ಅದಕ್ಕೂ ಪೂರ್ವದಲ್ಲಿ ಸಂಭ್ರಮಾಚರಣೆಯ ಅಂಗವಾಗಿ ವಿವಿಧ ಹಂತಗಳಲ್ಲಿ ಬೇರೆ ಬೇರೆ ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ತೀರ್ಮಾನಿಸಲಾಗಿದೆ. ಶಾಲೆಗೆ ಆಗಬೇಕಾಗಿರುವ ಅಗತ್ಯ ಮೂಲಭೂತ ಸೌಕರ್ಯಗಳ ಕೆಲಸ ಕಾರ್ಯಗಳ ಪಟ್ಟಿ ಮಾಡಲಾಗಿದ್ದು ಜನಪ್ರತಿನಿಧಿಗಳ, ಸರಕಾರದ ನೆರೆವಿನೊಂದಿಗೆ ಮಾಡುವುದಕ್ಕೆ ಸಮಿತಿ ಪ್ರಯತ್ನಿಸುವುದು. ಉಳಿದಂತೆ ಚಿಕ್ಕ ಪುಟ್ಟ ಕೆಲಸ ಕಾರ್ಯಗಳನ್ನು ದಾನಿಗಳ ಮತ್ತು ಪ್ರಾಯೋಜಕರ ನೆರವಿನೊಂದಿಗೆ ಮಾಡುವುದಕ್ಕೆ ಸಮಿತಿ ಮುಂದಾಗಬೇಕೆಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಈಗಾಗಲೇ ಶಾಲೆಯಲ್ಲಿ ಈ ವರೆಗೆ 2240 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿದ್ದಾರೆ. ಅವರಲ್ಲಿ ಅನೇಕರು ವಿವಿಧ ಕ್ಷೇತ್ರಗಳಲ್ಲಿ ನಾಡಿನಲ್ಲಿ ಅಷ್ಟೆಅಲ್ಲದೇ ದೇಶ ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆ ಎಲ್ಲಾ ಹಳೆಯ ವಿದ್ಯಾರ್ಥಿಗಳ ದಾಖಲೀಕರಣಕ್ಕಾಗಿ ಹಳೆ ವಿದ್ಯಾರ್ಥಿಗಳ ಸಂಪರ್ಕ ಅಭಿಯಾನ ನಡೆಸುವುದು. ನಂತರದಲ್ಲಿ ಹಳೆ ವಿದ್ಯಾರ್ಥಿಗಳ ಮಹಾಸಂಗಮ ಸಮಾವೇಶವನ್ನು ಮುಂದಿನ ದಿನಗಳಲ್ಲಿ ನಡೆಸುವುದಕ್ಕೆ ಕಾರ್ಯಯೋಜನೆಯನ್ನ ಹಾಕಿಕೊಳ್ಳುವಂತೆ ನಿರ್ಣಯಿಸಲಾಯಿತು. ಈಗಾಗಲೇ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ಗಳನ್ನ ಆರಂಭಿಸಿದ್ದು, ಮುಂದಿನ ಶೈಕ್ಷಣಿಕ ವರ್ಷಕ್ಕೆ ಕಂಪ್ಯೂಟರ್ ತರಬೇತಿಯನ್ನು ನಡೆಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಣಯಿಸಲಾಯಿತು.
ನಾವೆಲ್ಲರೂ ಇಂದು ಯಾವುದೇ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರಬಹುದು, ಆದರೆ ಬಾಲ್ಯದಲ್ಲಿ ಉತ್ತಮ ನೆಲಗಟ್ಟನ್ನು ಒದಗಿಸಿಕೊಟ್ಟ ಈ ಪ್ರಾಥಮಿಕ ಶಾಲೆ ಮುಖ್ಯವಾಗಿದೆ. ಕಾರಣ ಶತಮಾನೋತ್ತರ ಸಂಭ್ರಮದ ಆಚರಣೆಯಲ್ಲಿರುವ ಈ ಶಾಲೆಯ ಕಾರ್ಯಕ್ರಮ ಹಾಗೂ ಅಭಿವೃದ್ಧಿಗೆ ಹಳೆ ವಿದ್ಯಾರ್ಥಿಗಳಾದ ನಾವೆಲ್ಲರೂ ತನು-ಮನ-ಧನಗಳಿಂದ ಪೂರ್ಣ ಪ್ರಮಾಣದ ಸಹಕಾರವನ್ನು ನೀಡಬೇಕಾಗಿದೆ ಎಂದು ಕುಮಟಾ ಎಸಿಎಪ್ ಕೃಷ್ಣ ಅಣ್ಣಯ್ಯ ಗೌಡ ಸಭೆಯಲ್ಲಿ ತಿಳಿಸಿದರು.
ಸಮಿತಿಯ ಲಾಂಛನ ಅಂತಿಮ: ಶತಮಾನೋತ್ತರ ಸಂಭ್ರಮಾಚರಣೆಯ ಅಂಗವಾಗಿ ರಚಿಸಲಾಗಿದ್ದ ಶತಮಾನೋತ್ಸವ ಸಮಿತಿಯ ರಚಿಸಲಾದ ಲಾಂಛನವನ್ನು ಸಭೆಯಲ್ಲಿ ಅಂತಿಮಗೊಳಿಸಲಾಯಿತು. ಲಾಂಛನವನ್ನು ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳು ಎಸ್ ವೈದ್ಯರಿಂದ ಬಿಡುಗಡೆಗೊಳಿಸುವುದಕ್ಕೆ ಸಮಿತಿ ಸಭೆಯು ನಿರ್ಣಯಿಸಿದೆ.
ಸಭೆಯಲ್ಲಿ ಈ ವರೆಗಿನ ಜಮಾ ಖರ್ಚುಗಳನ್ನು ಮಂಡಿಸಲಾಯಿತು. ಹಿಂದಿನ ಸಭೆ ನಡುವಳಿಕೆಯನ್ನು ಓದಿ ದೃಢೀಕರಿಸಲಾಯಿತು. ಸಭೆಯಲ್ಲಿ ವಿಶೇಷ ಆಮಂತ್ರಿತರಾಗಿ ಕುಮಟಾ ಉಪವಿಭಾಗದ ಎಸಿಎಪ್ ಆಗಿರುವ ಕೃಷ್ಣ ಅಣ್ಣಯ್ಯ ಗೌಡ, ಎಸ್ಡಿಎಂಸಿ ಅಧ್ಯಕ್ಷ ರಾಜೇಶ ಎಂ. ಶೆಟ್ಟಿ, ಉಪಾಧ್ಯಕ್ಷ ಮಂಗಲಾ ಅಣ್ಣಯ್ಯ ಗೌಡ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಶಾಂತ ಎಚ್ ನಾಯ್ಕ, ಗ್ರಾ.ಪಂ ಮಾಜಿ ಅಧ್ಯಕ್ಷ ಮಂಜುನಾಥ ಬಿಳಿಯಾ ನಾಯ್ಕ, ಶತಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುರೇಶ ಜಿ ಹೆಗಡೆ, ಕಾರ್ಯದರ್ಶಿಯಾದ ಮುಖ್ಯಾಧ್ಯಾಪಕಿ ಲಕ್ಷ್ಮೀ ಎನ್ ಭಟ್, ಪದಾಧಿಕಾರಿಗಳಾದ ಜಿ ಕೆ ಹೆಗಡೆ, ಶಂಕರ ಗಣಪತಿ ನಾಯ್ಕ, ಮಂಜುನಾಥ ಕೆ ನಾಯ್ಕ, ಗಣಪತಿ ಎನ್ ನಾಯ್ಕ, ಗಜಾನನ ಎನ್. ಹಳ್ಳೆರ್, ಮೂರ್ತಿ ಎಂ ಆಚಾರಿ, ಮಾರುತಿ ಎನ್ ನಾಯ್ಕ, ಕೇಶವ ಈರಾ ಅಂಬಿಗ, ವೀಣಾ ಪಿ ನಾಯ್ಕ, ಶರಾವತಿ ಎಂ ಗೌಡ, ಜ್ಯೋತಿ ಎಸ್ ಮಡಿವಾಳ, ಸುಮಿತ್ರಾ ಎಸ್. ಹಳ್ಳೇರ್, ಕಮಲಾಕರ್ ನಾಯ್ಕ, ಗಣೇಶ ಎಸ್ ನಾಯ್ಕ, ವೆಂಕಟ್ರಮಣ ಜಿ ನಾಯ್ಕ, ಮಹೇಶ ಜಿ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.
ಇದನ್ನು ಓದಿ : ಕೊಲೆ ಪ್ರಕರಣದಲ್ಲಿ ಮೂವರಿಗೆ ಜೀವಾವಧಿ ಶಿಕ್ಷೆ.
