ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಬೀದರ (Bidar): ಕರ್ನಾಟಕ ಜಾನಪದ ಅಕಾಡೆಮಿ ನೀಡುವ 2023 ಮತ್ತು 2024ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ, ತಜ್ಞಪ್ರಶಸ್ತಿ ಪ್ರದಾನ ಸಮಾರಂಭ ಶನಿವಾರ ಬೀದರನ ಪೂಜ್ಯ ಶ್ರೀ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ನಡೆಯಿತು.
ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಅಳ್ವೆಕೋಡಿಯ ಈರಯ್ಯ ಬೇಡುಮನೆ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕಾರಿನ್ಮನೆ ಕುಣಿತ ಮತ್ತು ಹೌಂದೇರಾಯನ ಕುಣಿತ ಎಂಬ ವಿಶಿಷ್ಟ ಕಲಾಪ್ರಕಾರದ ಸುಪ್ರಸಿದ್ಧ ಕುಣಿತಗಾರ ಈರಯ್ಯ ಮೊಗೇರ ಅವರನ್ನ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.
ವಂಶಪಾರಂಪರ್ಯವಾಗಿ ನಡೆದು ಬಂದಿರುವ ವೈಶಿಷ್ಟ್ಯಪೂರ್ಣ ಆಚರಣಾತ್ಮಕ ಕಲಾ ಪ್ರಕಾರವಾದ ಕುಣಿತ ಊರಿನ ಹಬ್ಬ, ಜಾತ್ರೆ ಮತ್ತು ವಿಶೇಷ ಸಂದರ್ಭಗಳಲ್ಲಿ ಡೋಲು/ಡೊಳ್ಳು ಲಯಕ್ಕೆ ಕುಣಿತಗಾರರು ಕುಣಿಯುವುದು ವಿಶೇಷ. ಈರಯ್ಯ ಅವರು ಸುಮಾರು ಹತ್ತರಿಂದ ಹನ್ನೆರಡು ಗಂಟೆಗಳ ಕಾಲ ನಿರಂತರವಾಗಿ ಕುಣಿಯುವ ಇವರ ಶಕ್ತಿ ಎಂತಹವರನ್ನು ಮೂಕ ವಿಸ್ಮಿತರನ್ನಾಗಿಸುತ್ತದೆ. ತಾಲೂಕಿನಾದ್ಯಂತ ಎಲ್ಲೇ ದೈವಾರಾಧನೆಗಳಿದ್ದರೂ ಅಲ್ಲಿ ಈರಯ್ಯ ಅವರು ಹಾಜರಿರುತ್ತಾರೆ.
ದೈವಗಳನ್ನು ಸ್ತುತಿಸುತ್ತಾ ಸಂಪ್ರೀತಿಗೊಳಿಸಲು ಕುಣಿಯುವುದು ಈ ಕಲೆಯ ವಿಶೇಷ. ಅತ್ಯಂತ ಶಕ್ತಿ ಬೇಡುವ ಈ ಕುಣಿತವನ್ನು ತುಂಬಾ ಭಕ್ತಿ ಶ್ರದ್ಧೆ ಮತ್ತು ನಿಷ್ಠೆಯಿಂದ ಮಾಡಿಕೊಂಡು ಬರುತ್ತಿರುವ ಭಟ್ಕಳದ ಈರಯ್ಯ ಬೇಡುಮನೆ ಅವರನ್ನ ಗೌರವಪೂರ್ವಕವಾಗಿ ಸನ್ಮಾನಿಸಿ ಅಭಿನಂಧಿಸಲಾಗಿದೆ.
ಬೀದರ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ, ಜಂಟಿ ನಿರ್ದೇಶಕ ಅಶೋಕ ಛಲವಾದಿ, ಜಿಪಂ ಸಿಇಓ ಗಿರೀಶ್ ಬದೋಲೆ, ಜಾನಪದ ಅಕಾಡೆಮಿ ರಜಿಸ್ಟರ್ ನಮ್ರತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಬುರ್ಗಿ ವಿಭಾಗ ಜಂಟಿ ನಿರ್ದೇಶಕ ಬಸವರಾಜ್ ಹೂಗಾರ್ ಸೇರಿದಂತೆ ಇತರರು ಪ್ರಶಸ್ತಿ ಪ್ರಧಾನ ಮಾಡಿದರು.
ಇದನ್ನು ಓದಿ : ಭಟ್ಕಳದಲ್ಲಿ ಮತ್ತೆ 15 ಕೋಣಗಳ ರಕ್ಷಣೆ. ಗ್ರಾಮೀಣ ಪೊಲೀಸರ ಕಾರ್ಯಾಚರಣೆ