ಅಂಕೋಲಾ :  ತಾಲೂಕಿನ ಸರಳೆಬೈಲ್ ಬಳಿ   ಅತಿವೇಗವಾಗಿ ಬಂದ ಲಾರಿಯೊಂದು  ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಮೃತಪಟ್ಟ ಘಟನೆ ನಡೆದಿದೆ.

ಮಕ್ಕಿಗದ್ದೆ ಗ್ರಾಮದ ಕೀರಾ ಕೃಷ್ಣ ಹರಿಕಂತ್ರ (60) ಮೃತ ದುರ್ದೈವಿ. ಕೀರಾ ಅವರು ಬರ್ಗಿ ದೇವಸ್ಥಾನದ ಜಾತ್ರೆ ಮುಗಿಸಿ ಮನೆಗೆ ಹೋಗುತ್ತಿದ್ದರು. ಹುಬ್ಬಳ್ಳಿಯ ಮತೀನ್ ಟ್ರಾನ್ಸ್ಪೋರ್ಟ್ ಕಂಪನಿಗೆ ಸೇರಿದ ಲಾರಿಯು ಹುಬ್ಬಳ್ಳಿಯಿಂದ ಅಂಕೋಲಾ ಕಡೆ ಬರುತಿತ್ತು.  ಚಾಲಕ ತನ್ನ ಮಾರ್ಗ ಬಿಟ್ಟು ವಿರುದ್ಧ  ರಸ್ತೆಗೆ ಬಂದು ಅಪಘಾತಪಡಿಸಿದ್ದಾನೆ.  ನಿಯಂತ್ರಣವೇ ಇಲ್ಲದ ಲಾರಿಯು   ಬೈಕ್ ಮತ್ತು ಸವಾರನನ್ನು ಸುಮಾರು ದೂರದವರೆಗೆ ಎಳೆದೋಯ್ದಿದೆ.

ಮೀನುಗಾರ ಆಗಿದ್ದ ಕೀರಾ ಹರಿಕಂತ್ರ ಅವರು ಕೃಷಿಯಲ್ಲಿ ಸಾಕಷ್ಟು ಹೆಸರು ಮಾಡಿದ್ದರು.  ಬಡ ಕುಟುಂಬದ ಅವರು ಕಾಡಿನೊಳಗಿನ ಮಕ್ಕಿಗದ್ದೆ ಗ್ರಾಮಕ್ಕೆ ರಸ್ತೆ, ವಿದ್ಯುತ್ ಸಂಪರ್ಕ ಪಡೆಯಲು ಸಾಕಷ್ಟು ಹೋರಾಟ ಮಾಡಿದ್ದರು. ಸುತ್ತಲಿನ ಅನೇಕ ಗ್ರಾಮಗಳಲ್ಲಿ ಚಿರಪರಿಚಿತ ಆಗಿದ್ದರು. ಬೈಕ್ ಓಡಿಸುವ ವಿಚಾರದಲ್ಲಿಯೂ ಬಹಳ ಎಚ್ಚರಿಕೆ ವಹಿಸುತ್ತಿದ್ದರು. ಹೆಲ್ಮೆಟ್ ಧರಿಸದೆ ಬೈಕ್ ಹತ್ತುತ್ತಿರಲಿಲ್ಲ ಎಂದು ಊರಿನವರು ಹೇಳಿದ್ದಾರೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.