ಭಟ್ಕಳ: ದೇಶದ ವಿವಿಧ ಭಾಗಗಳಲ್ಲಿ ವಿದ್ವಂಸಕ ಕೃತ್ಯ ನಡೆದರೂ ಭಟ್ಕಳದ ಹೆಸರು ತಳಕು ಹಾಕಿಕೊಳ್ಳುತ್ತಿದೆ. ಶಂಕಿತ ಉಗ್ರನಿಗಾಗಿ ಮಹಾರಾಷ್ಟ್ರ ಭಯೋತ್ಪಾದನಾ  ನಿಗ್ರಹ ದಳ  ಭಟ್ಕಳದಲ್ಲಿ ಹೆಜ್ಜೆ ಹಾಕಿದೆ.

ಭಟ್ಕಳ ತಾಲೂಕಿನ ನವಾಯತ್ ಕಾಲೋನಿಯ ಹಾಜಿ ಮಂಜಿಲ್ ನಿವಾಸಿ ಅಬ್ದುಲ್ ಕಬೀರ್ ಸುಲ್ತಾನ್ ಅಲಿಯಾಸ್ ಮೌಲಾನ ಸುಲ್ತಾನ್ ಎಂಬಾತನಿಗಾಗಿ ಶೋಧ ನಡೆಸಿದೆ.

ಪುಣೆಯಲ್ಲಿ ನಡೆದ ಉಗ್ರ ಕೃತ್ಯದ ಆರೋಪಿಯಾಗಿರುವ ಕಬೀರ್ ಸುಲ್ತಾನ್ ಗಾಗಿ ಮಹಾರಾಷ್ಟ್ರದ ಉಗ್ರ ನಿಗ್ರಹ ಪಡೆ (ಎಟಿಎಸ್) ಹುಡುಕಾಡುತ್ತಿದೆ.

ಮಹಾರಾಷ್ಟ್ರದಲ್ಲಿ ಕೆಲ ವರ್ಷಗಳ ಹಿಂದೆ ತಲೆಮರೆಸಿಕೊಂಡಿರುವ ಭಟ್ಕಳ ಮೂಲದ ವ್ಯಕ್ತಿಯನ್ನು ಜೂನ್ 21ಕ್ಕೆ ಹಾಜರುಪಡಿಸಲು ಪುಣೆ ಜಿಲ್ಲಾ ನ್ಯಾಯಾಲಯ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಪುಣೆಯ ಅಧಿಕಾರಿಗಳ ತಂಡ ಭಟ್ಕಳದಲ್ಲಿ ತಲಾಶ್‌ ನಡೆಸಿದೆ. ಅಲ್ಲದೆ ಆತನ ಪತ್ತೆಗಾಗಿ  ಉತ್ತರಕನ್ನಡ ಜಿಲ್ಲಾಡಳಿತದ ನೆರವು ಕೋರಿದೆ.

ಮಹಾರಾಷ್ಟ್ರದಲ್ಲಿ ಉಗ್ರ ನಿಗ್ರಹ ಪಡೆ ಪುಣೆ ವಿಭಾಗದಲ್ಲಿ ಯುಎಪಿಎಎ (ಕಾನೂನುಬಾಹಿರ ಕೃತ್ಯ ತಡೆ ಕಾಯಿದೆ ಅಡಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದೆ. ಈ ಕೇಸಿನಲ್ಲಿ  ಕಬೀರ್ ಸುಲ್ತಾನ  ಮೌಲಾನಾ ಸುಲ್ತಾನ್ ಹೆಸರಿನ ಆರೋಪಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ನವಾಯತ ಕಾಲೊನಿಯ ಹಾಜಿ ಮಂಜಿಲ್ ನಿವಾಸಿ ಎಂದು ಗುರುತಿಸಲಾಗಿದೆ.

ಆದರೆ ಕಳೆದ 10 ವರ್ಷಗಳಿಂದ ದಶಕದಿಂದ ಈತ ಪತ್ತೆಯಾಗಿಲ್ಲ. ಆರೋಪಿಯು ಭಟ್ಕಳ ಮೂಲದವನೇ ಆದರೂ ಪುಣೆಯಲ್ಲಿ ಸಕ್ರೀಯನಾಗಿದ್ದ ಎನ್ನಲಾಗಿದೆ.

ಪುಣೆಯಲ್ಲಿ ನಡೆದ ಉಗ್ರ ಕೃತ್ಯಕ್ಕೆ ಸಂಬಂಧಿಸಿದ ಆರೋಪಿಯು ಭಟ್ಕಳ ಮೂಲ ಎಂದಷ್ಟೇ ಗೊತ್ತಾಗಿದೆ. ವಾಸ್ತವದಲ್ಲಿ ಆತ ಎಲ್ಲಿದ್ದಾನೆಂಬ ಸುಳಿವು ಸಿಕ್ಕಿಲ್ಲ. ಕೋರ್ಟ್ ವಾರಂಟ್ ಪ್ರತಿಯನ್ನ ಮಹಾರಾಷ್ಟ್ರದ ಎಟಿಸ್ ಅಧಿಕಾರಿಗಳು ಮನೆಗೆ ಅಂಟಿಸಿದ್ದಾರೆ.

ಮೊನ್ನೆ ಮೊನ್ನೆಯಷ್ಟೇ ಎನ್ಐಎ ತಂಡ ಶಿರಸಿಗೆ ಬಂದು ಓರ್ವನನ್ನ ಬಂಧಿಸಿತ್ತು. ಇದೀಗ ಭಟ್ಕಳದಲ್ಲಿ ಭಯೋತ್ಪಾದನ ನಿಗ್ರಹ ದಳ ಹೆಜ್ಜೆ ಹಾಕಿರೋದು ಭಟ್ಕಳವನ್ನ ತಲ್ಲಣಗೊಳಿಸಿದೆ.