ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಅಂಕೋಲಾ(Ankola):  ಪೊಲೀಸ್ ಶಕ್ತಿ ಪ್ರದರ್ಶನದಂತೆ ಮೀನುಗಾರರ ಶಕ್ತಿ ಪ್ರದರ್ಶನಕ್ಕೆ ಅವಕಾಶ ಮಾಡಿ ಕೊಡಬೇಡಿ ಎಂದು ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ(MLC Ganapati Ulvekar) ಗುಡುಗಿದ್ದಾರೆ.

ಭಾವಿಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇಣಿಯಲ್ಲಿ ಖಾಸಗಿಯವರ ಸಹಭಾಗಿತ್ವದಲ್ಲಿ ಯೋಜಿಸಿರುವ ವಾಣಿಜ್ಯ ಬಂದರು(Commercial Port) ನಿರ್ಮಾಣ ವಿರೋಧಿಸಿ ಪಟ್ಟಣದ ನಾಮದಾರಿ ಸಭಾಭವನದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ವಾಣಿಜ್ಯ ಬಂದರು ಯೋಜನೆಯಲ್ಲಿ ಯಾವುದೇ ಮುನ್ಸೂಚನೆ ನೀಡದೇ ಬಂದರು ಇಲಾಖೆ ತಮ್ಮ ಸರ್ವೇ ಕಾರ್ಯ ಪ್ರಾರಂಭಿಸಿದೆ. ಜಿಲ್ಲಾಡಳಿತಕ್ಕೆ ಸ್ಪಷ್ಟತೆ ಇಲ್ಲ. ಜನ ಬಲವಿದ್ದರೆ ಮಾತ್ರ ಎಲ್ಲಾ ಸಾಧ್ಯ. ಹೀಗಾಗಿ ಸರ್ವೆ ಕಾರ್ಯ ನಿಲ್ಲಿಸಿ ಯೋಜನೆಯನ್ನು ಕೈಬಿಡಿ ಎಂದರು. ಇದೇ ವೇಳೆ ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಮಾಂಕಾಳ್ ವೈದ್ಯ(Mankal Vaidya) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಉಳ್ವೆಕರ್, ಕೇಣಿ(Keni) ಮತ್ತು ಟೊಂಕಾದಲ್ಲಿ(Tonka) ಮೀನುಗಾರರ ಮೇಲೆ ದಬ್ಬಾಳಿಕೆ ನಡೆದರೂ, ಸಮುದಾಯದವರಾದ ಅವರು ಏನೊಂದು ಹೇಳಿಕೆ ನೀಡಿಲ್ಲ ಎಂದರು.

               ಶಾಸಕ ಸತೀಶ ಸೈಲ್(MLA Satish Sail)  ಅವರು ಮಾತನಾಡಿ,  ಸರ್ವ ಸಮುದಾಯದವರು ಪಕ್ಷಾತೀತವಾಗಿ ಹೋರಾಟ ಸಮಿತಿ ರಚಿಸಿ ವಾಣಿಜ್ಯ ಬಂದರು ನಿರ್ಮಾಣದ ವಿರುದ್ಧ ಹೋರಾಟದ ರೂಪರೇಷೆಗಳನ್ನು ಸಿದ್ಧಪಡಿಸಿಕೊಂಡು ಮುಂದಿನ ಹೋರಾಟ ಕೈಗೊಳ್ಳಬೇಕೆಂದು ಹೇಳಿದರು. ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಕಡಲ ತೀರಗಳಲ್ಲಿ ಹಲವಾರು ಯೋಜನೆಗಳು ಬಂದಿದ್ದು ಕೇಣಿ ವಾಣಿಜ್ಯ ಬಂದರು ವಿಷಯದಲ್ಲಿ ಸ್ಥಳೀಯರಿಗೆ ಸದಾ ಬೆಂಬಲ ತಮ್ಮದಿದೆ ಎಂದರು.

           ಮೀನುಗಾರರ ಮುಖಂಡ ಗಣಪತಿ ಮಾಂಗ್ರೆ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮೀನುಗಾರರು ಕಡಲ ತೀರಗಳನ್ನು ಕಳೆದುಕೊಂಡು ನಿರಾಶ್ರಿತರಾಗುತ್ತಿದ್ದಾರೆ. ವಿವಿಧ ಯೋಜನೆಗಳ ಹೆಸರಿನಲ್ಲಿ ಸಮುದ್ರ ತೀರಗಳು ಕಳೆದು ಹೋಗುತ್ತಿದ್ದು ವಾಣಿಜ್ಯ ಬಂದರು ನಿರ್ಮಾಣವಾದರೆ ಅಲ್ಲಿ ಸ್ಥಳೀಯರಿಗೆ ಮತ್ತು ಮೀನುಗಾರರಿಗೆ ನಿಷೇದ ಹೇರಲಾಗುತ್ತದೆ ಮುಖ್ಯ ಮಂತ್ರಿಗಳ ಬಳಿ ನಿಯೋಗ ತೆರಳಿ ಕೇಣಿ ಬಂದರನ್ನು ಕೈ ಬಿಡುವಂತೆ ಒತ್ತಾಯಿಸುವ ಕೆಲಸ ಆಗಬೇಕು ಎಂದರು.

            ಕೆ.ಪಿ.ಸಿ.ಸಿ(KPCC) ಮಾಜಿ ಕಾಂಗ್ರೆಸ್ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಮಾತನಾಡಿ,  ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣವಾದರೆ  ಮೀನುಗಾರರು ಮಾತ್ರವಲ್ಲದೆ   ಸುತ್ತಮುತ್ತಲಿನ ಎಲ್ಲ ಸಮುದಾಯದ ಜನರು ತಮ್ಮ ಜಮೀನನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುವ ಸಂಭವ ಬಹಳ ಇದ್ದು ಎಲ್ಲರೂ ಒಗ್ಗಟ್ಟಾಗಿ ಬಂದರು ನಿರ್ಮಾಣವಾಗದಂತೆ ಹೋರಾಟ ಮಾಡಬೇಕು ಮತ್ತು ಹೋರಾಟದಲ್ಲಿ ನಾನು ಸಹ ನಿಮ್ಮ ಜೊತೆಯಲ್ಲಿ ನಿಲ್ಲುತ್ತೇನೆ ಎಂದರು.

            ಜಿಲ್ಲಾ ಬಿಜೆಪಿ ಮೋರ್ಚಾ ಅಧ್ಯಕ್ಷ ರಾಜೇಂದ್ರ ನಾಯ್ಕ ಮಾತನಾಡಿ, ಅಧಿಕಾರಿಗಳು ಬಡ ಮೀನುಗಾರರ ಮೇಲೆ ಅಧಿಕಾರ ಪ್ರಯೋಗಿಸಿ ದಬ್ಬಾಳಿಕೆ ಮಾಡುತ್ತಿರುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಮೀನುಗಾರ ಹಾಗು ಎಲ್ಲಾ ಸಮುದಾಯದವರ ಉಳಿತಿಗಾಗಿ ಕೇಣಿ ಸಮುದ್ರದಿಂದ ಕಾರವಾರದವರೆಗೆ ಪಾದಯಾತ್ರೆ ಮಾಡುವ ಮುಖಾಂತರ ವಾಣಿಜ್ಯ ಬಂದರು ಕಾಮಗಾರಿ ನಿಲ್ಲಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

            ಮೀನುಗಾರ ಮುಖಂಡ ಶ್ರೀಕಾಂತ ದುರ್ಗೇಕರ ಮಾತನಾಡಿ, ಕೇಣಿಯಲ್ಲಿ ನಿಷೇದಾಜ್ಞೆ ಹೇರಿರುವುದರಿಂದ ಮೀನುಗಾರರು ಮೀನುಗಾರಿಕೆ ಮಾಡಿ ಜೀವನ ಸಾಗಿಸಲು ,ಹೊತ್ತಿನ ಊಟಕ್ಕೂ ಕಷ್ಟದ ಪರಿಸ್ಥಿತಿ  ಎದುರಾಗಿದೆ. ಸಮುದ್ರ ತೀರದಲ್ಲಿ  ಬಂದೂಕು ಹಿಡಿದು ಭೀತಿ ಮೂಡಿಸುವ ಕೆಲಸ ನಡೆಯುತ್ತಿದ್ದು  ಇದನ್ನು ತಡೆಯಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.

ಮಾಜಿ ಪುರಸಭೆ ಅಧ್ಯಕ್ಷ ಅರುಣ್ ನಾಡಕರ್ಣಿ,  ಮಾಜಿ ಪುರಸಭೆ ಅಧ್ಯಕ್ಷ ಭಾಸ್ಕರ ನಾರ್ವೇಕರ್, ಡಾ ವಿ. ಎನ್ ನಾಯಕ, ಸಂದೀಪ್ ಬಂಟ, ಉದಯ ನಾಯಕ, ಸುಜಾತ ಗಾಂವಕರ, ಮಹೇಶ್ ಗೌಡ, ಮಂಜರ್ ಸೈಯದ್, ದೀಪಾ ನಾಯಕ, ವೆಂಕಟೇಶ ತಾಂಡೇಲ್ ಸೇರಿದಂತೆ ಇತರ ಮೀನುಗಾರರು ಸೇರಿದಂತೆ ಪ್ರಮುಖರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯಲ್ಲಿ ಹುವಾ ಖಂಡೆಕರ್ , ಸಂಜು ಬಲೆಗಾರ, ತೋಕು ಹರಿಕಂತ್ರ, ಮಂಜುನಾಥ್ ಮುದ್ಗೆಕರ್, ಚೇತನ್ ಹರಿಕಂತ್ರ,ರಾಜು ಹರಿಕಂತ್ರ, ಚಂದ್ರಕಾಂತ್ ಹರಿಕಂತ್ರ, ವಿನಾಯಕ ಹರಿಕಂತ್ರ, ಶ್ರೀಧರ್, ಪ್ರಶಾಂತ್ ಹರಿಕಂತ್ರ, ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಮೀನುಗಾರರು ಮತ್ತು ಇತರ ಸಮುದಾಯಗಳ ಜನರು ಸಮಾಲೋಚನಾ ಸಭೆಯಲ್ಲಿ ಉಪಸ್ಥಿತರಿದ್ದರು.

ಇದನ್ನು ಓದಿ : ಕನ್ನಡದ ಕವಿತೆಯೊಂದಿಗೆ ದೆಹಲಿಗೆ ರೇಣುಕಾ ರಮಾನಂದ.

ಕೋವಿಡ್ ಸಮಯದಲ್ಲಿ ಏರಿಸಿದ ರೈಲ್ವೆ ಟಿಕೆಟ್ ಈಗ ಇಳಿಕೆ.

ಕುಂಭಮೇಳದಲ್ಲಿ ಕಾಣೆಯಾದವ ಮನೆಯಲ್ಲಿ ಪ್ರತ್ಯಕ್ಷ.