ಗಂಗೊಳ್ಳಿ: ರಿಪೇರಿಗೆ ತರುತ್ತಿದ್ದ ಮೀನುಗಾರಿಕಾ ಬೋಟೊದು ಗಂಗೊಳ್ಳಿ ಅಳಿವೆ ಸಮೀಪ ಮುಳುಗಿದ ಘಟನೆ ತಡವಾಗಿ ಗೊತ್ತಾಗಿದೆ.
ವಡಭಾಂಡೇಶ್ವರ ನಿವಾಸಿ ಗೋಪಾಲ ಸುವರ್ಣ ಮಾಲೀಕತ್ವದ ಮಾಲ್ತಿದೇವಿ ಬೋಟ್ ಅವಘಡಕ್ಕೆ ಈಡಾದ ಬೋಟ್ ಆಗಿದೆ. ಬೋಟಿನಲ್ಲಿ ಶಂಕರ ಕುಂದರ್, ಸುರೇಶ ಕುಂದರ್, ಶಂಕರ ಪೂಜಾರಿ, ಯೋಗೇಂದ್ರ, ಫರೀದ್ ಅಬ್ದುಲ್ ಘನಿ ಶೇಖ್ ಅವರಿದ್ದರು. ಎಲ್ಲರೂ ಕೂಡ ಸಾಸ್ತಾನ ಕೋಡಿ ಕನ್ಯಾನದ ನಿವಾಸಿಗಳಾಗಿದ್ದಾರೆ.
ಮೇ 16ರಂದು ರಾತ್ರಿ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದರು. ಮೇ 17ರಂದು ಬೆಳಗ್ಗೆ 5ಕ್ಕೆ ಭಟ್ಕಳ ಸಮೀಪ ಮತ್ತೊಂದು ಬೋಟ್ ಡಿಕ್ಕಿ ಹೊಡೆದ ಪರಿಣಾಮ ಬೋಟ್ ಅವಘಡಕ್ಕೆ ಸಿಲುಕಿದೆಯೆನ್ನಲಾಗಿದೆ. ಬೋಟ್ನ ಅಡಿಭಾಗದ ಹಲಗೆ ಡ್ಯಾಮೇಜ್ ಆಗಿದ್ದರಿಂದ ನೀರು ತುಂಬಿದೆ.
ಬಳಿಕ ಮತ್ತೊಂದು ಬೋಟ್ ಸಹಾಯದಿಂದ ಮೀನುಗಾರರನ್ನ ರಕ್ಷಿಸಲಾಗಿದೆ. ನಂತರ ಅವಘಡಕ್ಕೊಳಗಾದ ಬೋಟನ್ನ ಗಂಗೊಳ್ಳಿ ಬಂದರಿಗೆ ತರುವಾಗ ಗಂಗೊಳ್ಳಿ ಅಳಿವೆಯಿಂದ ಸುಮಾರು 8ರಿಂದ 10 ಮಾರು ದೂರದಲ್ಲಿ ಬೋಟ್ ನೀರಿನಲ್ಲಿ ಮುಳುಗಿದೆ.
ಘಟನೆಯಲ್ಲಿ ಬೋಟ್ನಲ್ಲಿದ್ದ ಟ್ರಾಲ್ ಬಲೆ, ಎರಡೂವರೆ ಸಾವಿರ ಲೀ. ಡೀಸೆಲ್, ಇಂಜಿನ್, ಇನ್ನಿತರ ಸಲಕರಣೆಗಳು ನೀರುಪಾಲಾಗಿದ್ದು ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.