ಕಾರವಾರ(KARWAR) :  ಕಲ್ಕತ್ತಾದಲ್ಲಿ  ಕರ್ತವ್ಯ ನಿರತ ಸ್ನಾತಕೋತ್ತರ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಶನಿವಾರ ಕಾರವಾರದಲ್ಲಿ  ಮುಷ್ಕರ ನಡೆಯಿತು.

ಬೆಳಿಗ್ಗೆ ಆರು ಗಂಟೆಯಿಂದಲೇ ಇಲ್ಲಿನ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರ ರೋಗಿ ಸೇವೆಗೆ ಹಾಜರಾಗದ ವೈದ್ಯರು ಮುಷ್ಕರಕ್ಕೆ ಬೆಂಬಲ ಸೂಚಿಸಿದರು.

ದೇಶದ ವೈದ್ಯಕೀಯ ಸಮೂಹವನ್ನೇ ಆಘಾತಕ್ಕೀಡು ಮಾಡಿದ ಘಟನೆ ಖಂಡಿಸಿ  ಭಾರತೀಯ ವೈದ್ಯಕೀಯ ಸಂಘ(INDIA MEDICAL ASSOCIATION) ಕ್ಯಾಂಡಲ್ ಮಾರ್ಚ್ ಮೂಲಕ ಪ್ರತಿಭಟನೆಯನ್ನು ನಡೆಸಿತು

ಕಾರವಾರದ ಜಿಲ್ಲಾಸ್ಪತ್ರೆ ಎದುರು ಸೇರಿದ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು, ನರ್ಸಿಂಗ್ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡರು.

ಎಂ ಜಿ ರಸ್ತೆ, ಪಿಕಳೆ ರಸ್ತೆ, ಗ್ರೀನ್ ಸ್ಟ್ರೀಟ್, ಸುಭಾಷ್ ಸರ್ಕಲ್ ಮೂಲಕ ಸಾಗಿ ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿ ಕೆಲ ಕಾಲ ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಐ ಎಂ ಎ ಸಂಘದ ಪದಾಧಿಕಾರಿಗಳು ಘಟನೆಯನ್ನ ಖಂಡಿಸಿದರು.

ಮೊದಲನೆಯ ದಿನವೇ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪೊಲೀಸರು ಅಪರಾಧವನ್ನು ಅತ್ಯಂತ ನಿಕೃಷ್ಟವಾಗಿ ತನಿಖೆ ನಡೆಸಿ, ಆ ಬಳಿಕ ತನಿಖೆಯಲ್ಲಿ ಸ್ಥಗಿತಗೊಳಿಸಿದ್ದಾರೆ. ಕಲ್ಕತ್ತಾ ಹೈಕೋರ್ಟ್(kolkatta Highcourt), ನಡೆಸಿದ ತನಿಖೆಯಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿ, ಸಿಬಿಐಗೆ ಪ್ರಕರಣವನ್ನು ವರ್ಗಾಯಿಸಿದೆ . ರಾಜ್ಯದ ಪೊಲೀಸ್‌ ಅಧಿಕಾರಿಗಳು ಸಾಕ್ಷಿಯನ್ನು ನಾಶಗೊಳಿಸುವ ಸಾಧ್ಯತೆಗಳನ್ನು ಊಹಿಸಿದ್ದಾರೆ.

ಆಗಸ್ಟ್ 15ರಂದು ದೊಡ್ಡ ಗುಂಪಿನಲ್ಲಿ ಜನರು ಆಸ್ಪತ್ರೆಯ ಆವರಣವನ್ನು ಪ್ರವೇಶಿಸಿ ದಾಂಧಲೆ ಎಬ್ಬಿಸಿದ್ದು ಮಾತ್ರವಲ್ಲ, ಅಪರಾಧಿ ಓಡಾಡಿದ ಸ್ಥಳಗಳಲ್ಲಿ ಸಾಕ್ಷಿಗಳನ್ನು ನಾಶಪಡಿಸಿದ್ದಂತೆ ತೋರುತ್ತದೆ. ಪ್ರತಿಭಟನೆ ನಡೆಸಿದ ಕಿರಿಯ ವೈದ್ಯಾಧಿಕಾರಿಗಳ ಮೇಲು ದಾಳಿ ಮಾಡಿದ್ದಾರೆ. ವೈದ್ಯ ವೃತ್ತಿಯಲ್ಲಿ ಸಹಜವಾಗಿ ಆಗುವ ತೊಂದರೆಯ ಜೊತೆಗೆ, ಅದರಲ್ಲೂ ಪ್ರಕೃತಿ ಸಹಜವಾಗಿ ತೊಂದರೆಗೆ ಒಳಗಾಗುವ ಹೆಣ್ಣು ಮಕ್ಕಳು ಬಲಿಯಾಗುವುದನ್ನು ನೋಡುತ್ತಿದ್ದೇವೆ. ಆಸ್ಪತ್ರೆ ಆವರಣದಲ್ಲಿ ವೈದ್ಯರಿಗೆ ರಕ್ಷಣೆ ಒದಗಿಸಿ ಕೊಡಲು ಆಸ್ಪತ್ರೆಯ ಆಡಳಿತ ಮಂಡಳಿಯ ಜವಾಬ್ದಾರಿ ಇರುತ್ತದೆ. ಆಸ್ಪತ್ರೆಯ ಆಡಳಿತ ಮಂಡಳಿಯ ಉದಾಸೀನ ಮತ್ತು ಸಂವೇದನಾಶೀಲತೆಯ ಕೊರತೆಯ ಪರಿಣಾಮವೇ ವೈದ್ಯರ ಹಾಗೂ ಆರೋಗ್ಯ ಸಿಬ್ಬಂದಿಗಳ ಮೇಲೆ ಅಕ್ರಮಣ ನಡೆಯುತ್ತಿದೆ ಎಂದರು.

ಹೀಗಾಗಿ ಆಗಸ್ಟ್ 18 ಬೆಳಿಗ್ಗೆ ಆರು ಗಂಟೆಯವರೆಗೆ ದೇಶದಾದ್ಯಂತ ಸೇವೆಯನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದೆ. ತುರ್ತು ಚಿಕಿತ್ಸೆಗಳು ಮಾತ್ರ ಲಭ್ಯವಿರುತ್ತವೆ ಎಂದು ತಿಳಿಸಿದರು. ಜನರ ಆರೋಗ್ಯ ಸೇವೆಯಲ್ಲಿರುವ ವೈದ್ಯರಿಗೆ ರಕ್ಷಣೆ ನೀಡಬೇಕೆಂದು ಅವರು ವೈದ್ಯರು ಒತ್ತಾಯಿಸಿದರು.