ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಭಟ್ಕಳ(Bhatkal): ಹಿಂದೂ-ಮುಸ್ಲಿಂ (Hindu-Muslim) ಸೌಹಾರ್ದತೆಯ ದ್ಯೋತಕ ಎಂಬಂತೆ ಭಟ್ಕಳದ ಅಂಜುಮನ್ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್ ಕಾಲೇಜ್(Anjuman Arts, Science & Commerce College) ಹಾಗೂ ಪಿಜಿ ಕೇಂದ್ರದಲ್ಲಿ   ಹಿಂದೂ ಉಪನ್ಯಾಸಕರು ತಮ್ಮ ಮುಸ್ಲಿಂ ಸಹೋದ್ಯೋಗಿಗಳಿಗಾಗಿ ಇಫ್ತಾರ್ ಪಾರ್ಟಿಯನ್ನು (Iftar Party) ಆಯೋಜಿಸಿ ಮಾದರಿಯಾದ ಘಟನೆ ವರದಿಯಾಗಿದೆ.

ಪರಸ್ಪರ ಸೌಹಾರ್ದತೆ ಮತ್ತು ಸಹೋದರತೆಗೆ ಒಂದು ಉತ್ತಮ ಉದಾಹರಣೆಯಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ. ಮೊಹಮ್ಮದ್ ಹಿಬ್ಬಾನ್ ಶಾಬಂದ್ರಿ, “ಅಂಜುಮನ್‌ ಶಿಕ್ಷಣ ಸಂಸ್ಥೆಯ ಇತಿಹಾಸದಲ್ಲಿ ಬಹುಶಃ ಇದೇ ಮೊದಲ ಬಾರಿಗೆ ನಮ್ಮೊಂದಿಗೆ ಕೆಲಸ ಮಾಡುವ ಹಿಂದೂ ಸಹೋದ್ಯೋಗಿಗಳು ರಮಝಾನ್(Ramzan) ತಿಂಗಳಲ್ಲಿ ತಮ್ಮ ಮುಸ್ಲಿಂ ಸಹಪಾಠಿಗಳಿಗಾಗಿ ಇಫ್ತಾರ್ ಪಾರ್ಟಿ ಮತ್ತು ರಾತ್ರಿ ಭೋಜನವನ್ನು ಆಯೋಜಿಸಿದ್ದಾರೆ.  ಅಂಜುಮನ್‌ನ ಎಲ್ಲಾ ಸಂಸ್ಥೆಗಳಲ್ಲಿ ಹಲವಾರು ಅನ್ಯ ಧರ್ಮೀಯ ಉಪನ್ಯಾಸಕರು ಮತ್ತು ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಯಾವಾಗಲೂ ಸೌಹಾರ್ದತೆಯ ವಾತಾವರಣವಿತ್ತು. ಇಂದಿನ ಈ ಇಫ್ತಾರ್ ಪಾರ್ಟಿಯು ಆ ಸಹೋದರತೆಯ ವಾತಾವರಣಕ್ಕೆ ಸಾಕ್ಷಿಯಾಗಿದೆ. ಎಲ್ಲಾ ಧರ್ಮದ ಜನರು ಇಲ್ಲಿ ಕೆಲಸ ಮಾಡುತ್ತಾರೆ ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಶಿಕ್ಷಣ ಪಡೆಯುತ್ತಿದ್ದಾರೆ. ಈ ಸಹೋದರತೆಯ ವಾತಾವರಣ ಸಮಾಜದಲ್ಲಿ ಸಾಮಾನ್ಯವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ,” ಎಂದರು.

ಇಫ್ತಾರ್‌ಗೆ ಮುಂಚೆ ಬಿಬಿಎ ಕಾಲೇಜಿನ ಪ್ರೊಫೆಸರ್ ಮೌಲಾನಾ ಮೊಹಮ್ಮದ್ ಜಾಫರ್ ನದ್ವಿ ಅವರು ಪ್ರಾರ್ಥನೆ ಸಲ್ಲಿಸಿದರು. ನಮಾಝ್ ಬಳಿಕ ಉತ್ತಮ ರಾತ್ರಿ ಭೋಜನದ ವ್ಯವಸ್ಥೆಯೂ ಇತ್ತು. ಎಲ್ಲಾ ಸಹೋದ್ಯೋಗಿಗಳು ಒಟ್ಟಾಗಿ ಸಂತೋಷದಲ್ಲಿ ಭಾಗವಹಿಸಿದರು.

ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಆರ್ ಎಸ್  ನಾಯಕ್, ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಮಂಜುನಾಥ ಪ್ರಭು, ಕನ್ನಡ ಉಪನ್ಯಾಸಕ ಪ್ರೊ. ದಾಮೋದರ ನಾಯಕ್ ಸೇರಿದಂತೆ ಎಲ್ಲಾ ಹಿಂದೂ ಉಪನ್ಯಾಸಕರು ಮತ್ತು ಪ್ರಾಧ್ಯಾಪಕರು ಇಫ್ತಾರ್ ಪಾರ್ಟಿಯ ಆಯೋಜನೆಯಲ್ಲಿ ಪಾಲ್ಗೊಂಡಿದ್ದರು.

ಕೊನೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ ಕೆ  ಶೇಖ್ ಅವರು ಸುಂದರ ಇಫ್ತಾರ್ ಪಾರ್ಟಿಯ ಆಯೋಜನೆಗಾಗಿ ಸಹೋದ್ಯೋಗಿಗಳಿಗೆ ಧನ್ಯವಾದ ಅರ್ಪಿಸಿದರು.

ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಆರ್ ಎಸ್ ನಾಯಕ್ ಅಭಿಪ್ರಾಯ ವ್ಯಕ್ತಪಡಿಸಿ “ಕಳೆದ ಹಲವು ವರ್ಷಗಳಿಂದ ಮುಸ್ಲಿಂ ಉಪನ್ಯಾಸಕರು ನಮ್ಮ ಕಾಲೇಜಿನಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸುತ್ತಿದ್ದರು. ಆದರೆ ಈ ಬಾರಿ ಅಂಜುಮನ್ ಪದವಿ ಮಹಾವಿದ್ಯಾಲಯದ ಹಿಂದೂ ಉಪನ್ಯಾಸಕರು ಇಫ್ತಾರ್ ಕೂಟವನ್ನು ಆಯೋಜಿಸುವ ಮೂಲಕ ಹಿಂದೂ-ಮುಸ್ಲಿಂ ಸೌಹಾರ್ದತೆಯ ಪರಂಪರೆಗೆ ಒಂದು ಹೊಸ ಆಯಾಮವನ್ನು ಸೇರಿಸಿದ್ದಾರೆ,” ಎಂದರು.

“ಈ ಇಫ್ತಾರ್ ಆಯೋಜನೆಯಿಂದ ನಾವು ಕೂಡ ರಮಜಾನ್ ಹಬ್ಬದ ಸಂತೋಷದಲ್ಲಿ ಭಾಗಿಯಾಗುವ ಅವಕಾಶ ಪಡೆದಿದ್ದೇವೆ. ಅಂಜುಮನ್ ಸಂಸ್ಥೆಯಲ್ಲಿ ಎಲ್ಲ ಜಾತಿ-ಧರ್ಮದ ಉಪನ್ಯಾಸಕರು ಒಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದೇಶದಲ್ಲಿ ಏನೇ ಘಟನೆಗಳು ನಡೆದರೂ, ಇಲ್ಲಿ ನಾವು ಸೌಹಾರ್ದತೆಯಿಂದ ಬದುಕುತ್ತಿದ್ದೇವೆ. ಇದು ಒಂದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಒಂದು ಶಿಕ್ಷಣ ಸಂಸ್ಥೆಯಲ್ಲಿ ಹಿಂದೂ ಮತ್ತು ಮುಸ್ಲಿಮರು ಒಟ್ಟಾಗಿ ರಮಜಾನ್ ಉಪವಾಸವನ್ನು ಆಚರಿಸುವುದು ಕೋಮು ಸೌಹಾರ್ದತೆ ಮತ್ತು ಸಹೋದರತ್ವವನ್ನು ಬೆಳೆಸಲು ಕಾರಣವಾಗುತ್ತದೆ. ಇದು ಇತರ ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗಬಲ್ಲದು. ಸಮಾಜದಲ್ಲಿ ಎಲ್ಲೆಡೆ ಹಿಂದೂ-ಮುಸ್ಲಿಂ ಎಂದು ಧ್ರುವೀಕರಣ ಮಾಡುವಾಗ, ಈ ಕಾರ್ಯಕ್ರಮವು ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ನೀಡಿದೆ. ಮುಂದಿನ ದಿನಗಳಲ್ಲಿ ಈ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗಬೇಕೆಂದು  ಹೇಳಿದರು.

“ದೇಶದಲ್ಲಿ ಮಾತ್ರವಲ್ಲ, ಜಗತ್ತಿನಾದ್ಯಂತ ಧರ್ಮ ಮತ್ತು ಭಾಷೆಗಳನ್ನು ಮುಂದಿಟ್ಟುಕೊಂಡು ಗಲಭೆಗಳು ಮತ್ತು ಗೊಂದಲಗಳು ಸೃಷ್ಟಿಯಾಗುತ್ತಿವೆ. ಯುವ ಸಮುದಾಯವು ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವ ಕೋಮು ಧ್ರುವೀಕರಣದ ತಪ್ಪು ನಿರೂಪಣೆಯಿಂದ ಹೊರಬರಬೇಕು. ನಾವೆಲ್ಲರೂ ಮನುಷ್ಯರೆಂಬ ಏಕತೆಯ ಭಾವನೆಯಲ್ಲಿ ಪ್ರೀತಿ, ಪ್ರೇಮ ಮತ್ತು ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕು ಎಂದು ಪ್ರೊ. ನಾಯಕ್ ಕರೆ ನೀಡಿದರು.

ಇದನ್ನು ಓದಿ : ಮೀನು ಕಚ್ಚಿದ ಪರಿಣಾಮ ವ್ಯಕ್ತಿ ಕೈ ಕಳೆದುಕೊಂಡ.

ನೀರು ನೀಡಿ-ಜೀವ ಉಳಿಸಿ” ಅಭಿಯಾನ. ಬಹುಮಾನದ ಮೂಲಕ ಉತ್ತೇಜನ.

ನೆನೆದವರ ಮನದ ಕಾಪ್ರಿ ದೇವರ ಜಾತ್ರೆಗೆ ಭಕ್ತ ಸಾಗರ.