ಕಾರವಾರ : ನಗರದ ಪ್ರತಿಷ್ಟಿತ ಕಾರವಾರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಇದೀಗ ಗ್ರಾಹಕರಿಗೆ ಶಾಕ್ ನೀಡಿದೆ. ಬ್ಯಾಂಕಿನಲ್ಲಿ ಸುಮಾರು 54 ಕೋಟಿ ರೂಪಾಯಿ ಹಣ ಅಪರಾತಪರಾ ಮಾಡಲಾಗಿದೆ.

ಈ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಮತ್ತು ಆಡಳಿತ ಮಂಡಳಿ ಅಳೆದು ತೂಗಿ ಕಾರವಾರ ನಗರ ಠಾಣೆಯಲ್ಲಿ ದೂರು ದಾಖಲಿಸಿದೆ. ಈ ಹಿಂದೆ ಬ್ಯಾಂಕ್  ಮ್ಯಾನೇಜರ್ ಆಗಿದ್ದ ಗುರುದಾಸ ಬಾಂದೆಕರ್ ಎಂಬುವವರ ಮೇಲೆ ಹಣ ವಂಚನೆಯ ಆರೋಪ ಕೇಳಿ ಬಂದಿದೆ. ಗುರುದಾಸ್ ಬಾಂದೆಕರ್ ಕೆಲ ತಿಂಗಳ ಹಿಂದೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅವರ ನಿಧನದ ಬಳಿಕ ವಾಸುದೇವ ಪಂಗಮ್ ಎಂಬುವವರು ಮ್ಯಾನೇಜರ್ ಆಗಿದ್ದರೆ. ಬ್ಯಾಂಕ್ ಆಡಿಟ್ ಬಳಿಕ ಗೋಲ್ಮಾಲ್ ಆಗಿರುವುದು ಬೆಳಕಿಗೆ ಬಂದಿದೆ.

ಹೀಗಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಮತ್ತೊಂದೆಡೆ ಬ್ಯಾಂಕ್ ಆಡಳಿತ ಮಂಡಳಿ ಕೂಡ ಬ್ಯಾಂಕಿನಲ್ಲಿ ಆದ ಅವ್ಯವಹಾರದ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡಿ ಗ್ರಾಹಕರು ಗಾಬರಿಯಾಗದಂತೆ ತಿಳಿಸಿದೆ.

ಕಾರವಾರ ಅರ್ಬನ್ ಬ್ಯಾಂಕಿನಲ್ಲಿ ಸುಮಾರು  ಸಾವಿರಾರು ಸಂಖ್ಯೆಯ ಗ್ರಾಹಕರಿದ್ದಾರೆ. ಕಾರವಾರದಲ್ಲಿ ಎರಡು ಶಾಖೆ ಹೊಂದಿದೆ. ಸುಮಾರು 80 ಕೋಟಿಗೂ ಅಧಿಕ ಹಣ ಠೇವಣಿ ಇದ್ದು 9 ಕೋಟಿ ಸಾಲ ನೀಡಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.  ಐದು ಲಕ್ಷದವರೆಗೆ ಡಿಪಾಸಿಟ್ ಇರುವವರಿಗೆ ಇನ್ಸುರೆನ್ಸ್ ಇರುವುದರಿಂದ ಅವರ ಹಣ ಅವರಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ. ಗ್ರಾಹಕರು ಗಾಬರಿಯಾಗೋದು ಬೇಡ ಎಂದು ಹೇಳುತ್ತಿದ್ದಾರೆ.

ಗುರುದಾಸ್ ಬಾಂದೆಕರ್ ಎಂಬುವವರು ಬ್ಯಾಂಕ್ ಮ್ಯಾನೇಜರ್ ಇದ್ದ ವೇಳೆ ಕೆಲವರ ಖಾತೆಗಳಿಗೆ ಹಣ ವರ್ಗಾಯಿಸಿದ್ದಾರೆಂಬ ಆರೋಪವಿದೆ. ಆದರೆ ಆಡಳಿತ ಮಂಡಳಿಯ ಕಣ್ಣು ತಪ್ಪಿಸಿ ವ್ಯವಹಾರ ಮಾಡಲಾಗಿದೆ ಎನ್ನುವ ಅನುಮಾನ ಉಂಟಾಗಿದೆ. ಕೋಟ್ಯಂತರ ರೂ. ಹಣ ಗೋಲ್ಮಾಲ್ ಆಗಿದ್ದು ಮ್ಯಾನೇಜರ್ ನಿಧನ ಬಳಿಕ ಹೇಗೆ ವಿಷಯ ಹೊರಗೆ ಬಂತು ಎಂದು ಕಾರವಾರ ನಾಗರಿಕರು ಪ್ರಶ್ನೆ ಮಾಡುತ್ತಿದ್ದಾರೆ.

ಗ್ರಾಹಕರು ಕಂಗಾಲು : ಕಾರವಾರ ಅರ್ಬನ್ ಬ್ಯಾಂಕಿನಲ್ಲಿ ಕೋಟ್ಯಂತರ ರೂಪಾಯಿ ದೋಖಾ ಆದ ವಿಷಯ ಕೇಳಿದ ಗ್ರಾಹಕರು ಕಂಗಲಾಗಿದ್ದಾರೆ. ಬೆವರು ಸುರಿಸಿ ಗಳಿಸಿದ ಹಣವನ್ನು ಬ್ಯಾಂಕಿನ ಮೇಲೆ ವಿಶ್ವಾಸ ಇಟ್ಟು ಠೇವಣಿ ಇಟ್ಟವರು ಇದೀಗ ಗಾಬರಿಯಾಗಿದ್ದಾರೆ. ಲಕ್ಷಾಂತರ ರೂ ಹಣ ಇಟ್ಟವರು ಕಂಗಾಲಾಗಿ ತಮ್ಮ ಹಣ ವಾಪಾಸ್ ನೀಡಿ ಎಂದು ಗೋಗರೆಯುತ್ತಿದ್ದಾರೆ. ಆಡಳಿತ ಮಂಡಳಿ ಹೇಗೆ ಹಣ ವಾಪಾಸ್ ನೀಡುತ್ತದೆ ಎಂಬುದೇ ಪ್ರಶ್ನೆಯಾಗಿದೆ.  ಪೊಲೀಸ್ ಪ್ರಕರಣವಾಗಿದೆ. ತನಿಖೆಯಿಂದ ಇನ್ನೂ ಅವ್ಯವಹಾರದಲ್ಲಿ ಯಾರ್ಯಾರು ಶಾಮೀಲಾಗಿದ್ದಾರೆ ನೋಡಬೇಕು.