ಅಂಕೋಲಾ : ದೇವರಿಗೆ ಸಾಮಾನ್ಯವಾಗಿ ಹೂ ಹಣ್ಣು, ಕಾಯಿ, ಫಲಗಳನ್ನ ನೀಡೋದು ವಾಡಿಕೆ. ಆದ್ರೆ ಅಂಕೋಲಾ ತಾಲೂಕಿನ ಬಿಳಿಹೊಂಯ್ಗಿ ಗ್ರಾಮದ ದೇವಾಲಯದಲ್ಲಿ ವಿಶೇಷವಾಗಿ ಗಿಡಗಳನ್ನ ಸಮರ್ಪಿಸಲಾಗುತ್ತದೆ.
ಬಿಳಿಹೊಂಯ್ಗಿ ಗ್ರಾಮದ ಶ್ರೀ ಜೈನ ಜಟಗಾ, ಮಹಾದೇವಿ ನಾಗದೇವತಾ ದೇವಾಲಯದಲ್ಲಿ ಶತಮಾನಗಳ ಇತಿಹಾಸ ಹೊಂದಿರುವ ಈ ದೇವಾಲಯಕ್ಕೆ ವಿಶೇಷ ಹಿನ್ನಲೆ ಇದೆ. ಈ ಬಾರೀ ದೇವಾಲಯದ ನೂತನ ಕಟ್ಟಡದ ಪ್ರತಿಷ್ಠಾಪನೆ, ಅಷ್ಟಬಂಧ ಕಲಾವೃದ್ಧಿ ಕಾರ್ಯಕ್ರಮ ನಡೆಸಲಾಯಿತು. ಜೂನ್ 5 ವಿಶ್ವ ಪರಿಸರ ದಿನಾಚರಣೆಯ ದಿನದಂದೇ ಇಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಶುರವಾಗಿ ಕೊನೆಯ ದಿನದಂದು ಬಂದಂಥ ಭಕ್ತರಿಗೆ ದೇವರ ಪ್ರಸಾದದ ಜೊತೆಗೆ ಬಗೆಬಗೆಯ ಗಿಡಗಳನ್ನ ನೀಡಿ ಪರಿಸರ ಜಾಗೃತಿಯ ಸಂದೇಶ ಸಾರಲಾಯಿತು.
ಪ್ರಕೃತಿ ಸೌಂದರ್ಯದ ಮಡಿಲಲ್ಲಿರುವ ದೇವಾಲಯಕ್ಕೆ ಸಾಕಷ್ಟು ಸಂಖ್ಯೆಯ ಭಕ್ತರಿದ್ದಾರೆ. ಮೀನುಗಾರರು ಮತ್ತು ರೈತರು ಹೆಚ್ಚಿನದಾಗಿ ನಡೆದುಕೊಳ್ಳುವ ಈ ಊರಿನಲ್ಲಿ ಪ್ರಕೃತಿ ಬೆಳೆಯಬೇಕು ಜೊತೆಗೆ ಪರಿಸರ ಉಳಿಸಬೇಕೆಂಬ ಉದ್ದೇಶದಿಂದ ಭಕ್ತರು ದೇವರ ಮುಂದೆ ಗಿಡ ಇಟ್ಟು ಪ್ರಾರ್ಥಿಸಿಕೊಳ್ತಾರೆ. ದೇವರ ಹೆಸರಲ್ಲಿ ಕಾಡು ಉಳಿಸಬೇಕೆಂಬ ಉದ್ದೇಶದೊಂದಿಗೆ ದೇವಾಲಯದವರು ವಿನೂತನವಾಗಿ ಉತ್ಸವವನ್ನ ಆಚರಿಸಿದ್ದಾರೆ.
ಉತ್ಸವದ ನಿಮಿತ್ತ ಸಂಪಿಗೆ, ನೆಲ್ಲಿ, ಅಶೋಕೆ ಸೇರಿದಂತೆ ವಿವಿಧ ಜಾತಿಯ ಗಿಡಗಳನ್ನ ನೀಡಲಾಯಿತು. ಶ್ರೀ ಜಟಗಾ, ಮಹಾದೇವಿ, ನಾಗದೇವತಾ ದೇವರ ಪರಿವಾರ ದೇವರುಗಳಿವೆ. ದೇವಾಲಯದ ಸುತ್ತಮುತ್ತ ದೇವರುಗಳಿದ್ದು, ಗ್ರಾಮದ ನಾಗರಿಕರನ್ನ ರಕ್ಷಿಸುತ್ತವೆಂಬ ನಂಬಿಕೆ ಇದೆ. ಹೀಗಾಗಿ ಭಕ್ತರು ಇಲ್ಲಿ ಗಿಡ ನೆಡುವ ಸಲುವಾಗಿ ದೇವರ ಮುಂದೆ ಗಿಡ ಇಟ್ಟು ಪ್ರಾರ್ಥಿಸುವ ಪರಿಪಾಠವಿದೆ. ಭಕ್ತರು ಗಿಡವನ್ನ ತಂದು ದೇವರ ಮುಂದಿಟ್ಟು ಪ್ರಾರ್ಥನೆ ಮಾಡಿ ಪೂಜೆ ಸಲ್ಲಿಸಿ ಬಳಿಕ ಗಿಡವನ್ನ ಮನೆಗೆ ಕೊಂಡೊಯ್ದು ನೆಟ್ಟು ಆರಾಧಿಸ್ತಾರೆ. ಗಿಡವೇ ದೇವರ ಶಕ್ತಿ ಎಂದು ಪೂಜೆ ಆರಾಧಿಸುತ್ತಿದ್ದಾರೆ.
ಉತ್ಸವದ ಸಂದರ್ಭದಲ್ಲಿಯೂ ಕೂಡ ಪ್ರಕೃತಿ ಸಂದೇಶದ ಜಾಗೃತಿ ಜೊತೆಗೆ ಪರಿಸರ ಸಂರಕ್ಷಣೆಯ ಪ್ರೀತಿಯನ್ನ ಕಾರ್ಯಕ್ರಮದ ಮೂಲಕ ತೋರಿಸಿದ್ದಾರೆ. ಹಿಂದುಗಳು ನಂಬಿಕೊಂಡು ಬಂದ ವಿನೂತನ ಸಂಪ್ರದಾಯ ಅಪರೂಪದಲ್ಲಿ ಅಪರೂಪಕ್ಕೆ ಕಂಡು ಬಂದಿರುವುದು ವಿಶೇಷವಾಗಿದೆ.
ಉತ್ಸವಕ್ಕೆ ಸಾಕಷ್ಟು ಸಂಖ್ಯೆಯ ಭಕ್ತರು ಆಗಮಿಸಿ ಪ್ರಸಾದದ ಜೊತೆ ಸಸಿ ಪಡೆದರು. ದೇವಾಲಯದ ಆಡಳಿತ ಮಂಡಳಿಯ ಸಹಕಾರದಿಂದ ನೂತನ ದೇವಾಲಯ ನಿರ್ಮಾಣವಾಗಿದೆ.